ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ತೀವ್ರ ಆಂತರಿಕ ಅಸಮಾಧಾನ ಮತ್ತು ಬಿಕ್ಕಟ್ಟು ಸೃಷ್ಟಿಯಾಗಿರುವುದನ್ನು ಸಾಬೀತುಪಡಿಸುವಂತಹ ಹಠಾತ್ ಬೆಳವಣಿಗೆಯೊಂದು ಶನಿವಾರ ನಡೆದಿದೆ.
ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸದಲ್ಲಿ ಕರೆಯಲಾಗಿದ್ದ ಅತ್ಯಂತ ಪ್ರಮುಖ ಶಾಸಕರ ಸಭೆಗೆ ಪಕ್ಷದ ಒಟ್ಟು 80 ಶಾಸಕರ ಪೈಕಿ ಕೇವಲ 20 ಶಾಸಕರು ಮಾತ್ರ ಹಾಜರಾಗಿದ್ದಾರೆ. ಶೇಕಡಾ 75 ರಷ್ಟು ಶಾಸಕರು (60 ಶಾಸಕರು) ಸಭೆಗೆ ಗೈರುಹಾಜರಾದ ಕಾರಣ, ಅಂತಿಮವಾಗಿ ಸಭೆಯನ್ನೇ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಶಾಸಕಾಂಗ ಪಕ್ಷದ ನಾಯಕ ಶೋವಂದೇಬ್ ಚಟ್ಟೋಪಾಧ್ಯಾಯ ಅವರು ಈ ತುರ್ತು ಸಭೆಯನ್ನು ಕರೆದಿದ್ದರು. ಆದರೆ ಸಭೆಗೆ ಬಾರದ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವುದು ಪಕ್ಷದ ಉನ್ನತ ನಾಯಕತ್ವಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಇದು ವ್ಯವಸ್ಥಿತವಾಗಿ ನಡೆದಿರುವ ಬಹಿಷ್ಕಾರ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಪಕ್ಷದ ಸಮರ್ಥನೆ:
ಈ ಆಘಾತಕಾರಿ ಬೆಳವಣಿಗೆಯ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಅವರು ಪಕ್ಷದ ಡ್ಯಾಮೇಜ್ ಕಂಟ್ರೋಲ್ (ಹಾನಿ ನಿಯಂತ್ರಣ) ಗೆ ಮುಂದಾಗಿದ್ದಾರೆ. ಪಕ್ಷದ ಪ್ರಮುಖ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ದಾಳಿಯ ಹಿನ್ನೆಲೆಯಲ್ಲಿ, ಶಾಸಕರು ಆಯಾ ಕ್ಷೇತ್ರಗಳ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಬ್ಯುಸಿಯಾಗಿದ್ದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ವಾದ ರಾಜಕೀಯ ವಿಶ್ಲೇಷಕರಿಗೆ ಅಷ್ಟಾಗಿ ಮನವರಿಕೆಯಾದಂತೆ ಕಾಣುತ್ತಿಲ್ಲ.
ಮಮತಾ ಪರ ನಿಂತ ದೈತ್ಯರು:
ಪಕ್ಷದ ಇತಿಹಾಸದಲ್ಲೇ ಅತ್ಯಂತ ಕಠಿಣ ಪರಿಸ್ಥಿತಿ ಎದುರಾಗಿದ್ದರೂ ಫಿರ್ಹಾದ್ ಹಕೀಮ್, ನಯನಾ ಬಂದೋಪಾಧ್ಯಾಯ, ಮದನ್ ಮಿತ್ರಾ, ಆಶಿಮಾ ಪಾತ್ರ ಮತ್ತು ಕುನಾಲ್ ಘೋಷ್ ಅವರಂತಹ ತೃಣಮೂಲದ ಹಿರಿಯ ನಾಯಕರು ಮಮತಾ ಬ್ಯಾನರ್ಜಿ ಪರವಾಗಿ ದೃಢವಾಗಿ ನಿಂತಿರುವುದು ಸಭೆಯಲ್ಲಿ ಕಂಡುಬಂದಿದೆ. ಸದ್ಯಕ್ಕೆ ಕಾಣೆಯಾಗಿರುವ 60 ಶಾಸಕರ ನಿಲುವು ಏನು ಮತ್ತು ಟಿಎಂಸಿ ಪಕ್ಷದ ಭವಿಷ್ಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.





Leave a comment