SUDDIKSHANA KANNADA NEWS/ DAVANAGERE/ DATE:15-11-2024
ಬೆಂಗಳೂರು: ವಕ್ಫ್ ಆಸ್ತಿ ಕಿಚ್ಚು ದಿನದಿಂದ ದಿನಕ್ಕೆ ರೈತರ ನೆಮ್ಮದಿಗೆ ಧಕ್ಕೆ ತರುವ ಹಂತಕ್ಕೆ ತಲುಪುತ್ತಿರುವುದನ್ನು ಗಮನಿಸಿದರೆ ಉಪಚುನಾವಣೆ ಮುಗಿದ ಬೆನ್ನಲ್ಲೇ ರೈತರ ಭೂಮಿ ಕಿತ್ತುಕೊಳ್ಳಲು ಕಾಂಗ್ರೆಸ್ ಸರ್ಕಾರವೇ ಅಧಿಕಾರಿಗಳಿಗೆ ಸೂಚಿಸಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದರು.
ಈ ಸಂಬಂಧ ಪೋಸ್ಟ್ ಮಾಡಿರುವ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಅತ್ಯಂತ ಖಂಡನೀಯ. ಅಲ್ಲದೇ ರೈತರ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿರುವ ನಡೆ ತುಘಲಕ್ ದರ್ಬಾರ್ ನೆನಪಿಸುವಂತಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.

ಉಳುಮೆ ಮಾಡುವ ರೈತರಿಗೆ ಅಧಿಕಾರಿಗಳು ಕಿರುಕುಳ ಅಥವಾ ತೊಂದರೆ ಕೊಟ್ಟರೆ ಬಿಜೆಪಿ ಸಹಿಸಲ್ಲ. ರೈತರ ಪರವಾಗಿ ಬೀದಿಗಿಳಿಯಲಿದೆ. ಅನ್ನದಾತರ ಮೇಲೆ ಲಾಠಿ ಪ್ರಯೋಗಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕ್ರಮ ಜರುಗಿಸಲಿ. ಈ ಘಟನೆಯ ಕುರಿತು ರಾಜ್ಯದ ರೈತ ಸಮುದಾಯಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿ ಈ ಕುರಿತು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸುವೆ ಎಂದಿದ್ದಾರೆ.