Home ದಾವಣಗೆರೆ ಕರ್ನಾಟಕ ಸಿಎಂ ಗದ್ದುಗೆಗೆ ಕ್ಲೈಮ್ಯಾಕ್ಸ್?: ಸಿದ್ದರಾಮಯ್ಯ VS ಡಿ.ಕೆ. ಶಿವಕುಮಾರ್‌ ಪವರ್ ಪಾಲಿಟಿಕ್ಸ್ ಬಗೆಹರಿಸಲು ಈ ತಿಂಗಳಾಂತ್ಯಕ್ಕೆ ದೆಹಲಿಯಲ್ಲಿ ಹೈಕಮಾಂಡ್ ಮಹತ್ವದ ಸಭೆ!
ದಾವಣಗೆರೆನವದೆಹಲಿಬೆಂಗಳೂರು

ಕರ್ನಾಟಕ ಸಿಎಂ ಗದ್ದುಗೆಗೆ ಕ್ಲೈಮ್ಯಾಕ್ಸ್?: ಸಿದ್ದರಾಮಯ್ಯ VS ಡಿ.ಕೆ. ಶಿವಕುಮಾರ್‌ ಪವರ್ ಪಾಲಿಟಿಕ್ಸ್ ಬಗೆಹರಿಸಲು ಈ ತಿಂಗಳಾಂತ್ಯಕ್ಕೆ ದೆಹಲಿಯಲ್ಲಿ ಹೈಕಮಾಂಡ್ ಮಹತ್ವದ ಸಭೆ!

Share
ಸಿದ್ದರಾಮಯ್ಯ
Share

ಬೆಂಗಳೂರು/ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಒಳಗೊಳಗೇ ಹೊಗೆಯಾಡುತ್ತಿದ್ದ ಸಿಎಂ ಕುರ್ಚಿ ಪೈಪೋಟಿ ಈಗ ತುತ್ತತುದಿಗೆ ಬಂದು ತಲುಪಿದೆ. ರಾಜ್ಯ ಸರ್ಕಾರ 3 ವರ್ಷ ಪೂರೈಸಿರುವ ಬೆನ್ನಲ್ಲೇ, ನಾಯಕತ್ವ ಬದಲಾವಣೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಮೇ ತಿಂಗಳ ಕೊನೆಯ ವಾರದಲ್ಲಿ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ ಕರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶೀಘ್ರದಲ್ಲೇ ದೆಹಲಿಗೆ ಬರುವಂತೆ ಹೈಕಮಾಂಡ್‌ನಿಂದ ಬುಲಾವ್ ಬರಲಿದ್ದು, ಈ ಸಭೆಯಲ್ಲಿ ಕರ್ನಾಟಕದ ಅಧಿಕಾರ ಹಂಚಿಕೆಯ ಗೊಂದಲಗಳಿಗೆ ಕಡೇ ಮೊಹರು ಬೀಳುವ ಸಾಧ್ಯತೆಯಿದೆ.

ಶಿವಕುಮಾರ್ ಪಾಳಯದ ಪಟ್ಟು:

2023 ರಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ‘ಅಧಿಕಾರ ಹಂಚಿಕೆ’ (Power Sharing Formula) ಸೂತ್ರಕ್ಕೆ ಒಪ್ಪಿಗೆ ನೀಡಲಾಗಿತ್ತು ಎಂಬುದು ಡಿ.ಕೆ. ಶಿವಕುಮಾರ್ ಬೆಂಬಲಿಗರ ವಾದ. ಇತ್ತೀಚೆಗಷ್ಟೇ ಡಿ.ಕೆ. ಶಿವಕುಮಾರ್ ಜನ್ಮದಿನದಂದು ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ “ಮುಂದಿನ ಸಿಎಂ ಡಿ ಕೆ ಶಿವಕುಮಾರ್” ಎಂಬ ಪೋಸ್ಟರ್‌ಗಳನ್ನು ಹಾಕಿ ಹೈಕಮಾಂಡ್‌ಗೆ ಪರೋಕ್ಷ ಸಂದೇಶ ರವಾನಿಸಿದ್ದರು. ಇದರ ಬೆನ್ನಲ್ಲೇ ನಾಯಕತ್ವ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆಶಿ, “ಒಳ್ಳೆಯ ಕಾಲ ಬರಲಿದೆ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಹೈಕಮಾಂಡ್‌ಗೆ ಇರುವ ಇಕ್ಕಟ್ಟುಗಳು:

ಹಿಂದುಳಿದ ವರ್ಗಗಳ ಕಾರ್ಡ್: ಸದ್ಯ ದೇಶದಲ್ಲಿರುವ ಕಾಂಗ್ರೆಸ್‌ನ ನಾಲ್ಕು ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ಮಾತ್ರ ಹಿಂದುಳಿದ ವರ್ಗಕ್ಕೆ (OBC) ಸೇರಿದವರಾಗಿದ್ದಾರೆ. ರಾಹುಲ್ ಗಾಂಧಿ ಅವರ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಧಕ್ಕೆಯಾಗದಂತೆ ಸಿದ್ದರಾಮಯ್ಯ ಅವರನ್ನು ಬದಲಾಯಿಸುವುದು ಹೈಕಮಾಂಡ್‌ಗೆ ಸವಾಲಿನ ಕೆಲಸ.

ದಲಿತ ಸಿಎಂ ಬೇಡಿಕೆ: ಸಿದ್ದರಾಮಯ್ಯ ಅವರನ್ನು ಬದಲಾಯಿಸುವುದೇ ಆದಲ್ಲಿ, ಗೃಹ ಸಚಿವ ಜಿ. ಪರಮೇಶ್ವರ್ ಅವರ ಹೆಸರೂ ಮುಂಚೂಣಿಗೆ ಬರುತ್ತಿದ್ದು, ರಾಜ್ಯದಲ್ಲಿ ಇದುವರೆಗೆ ದಲಿತ ಸಿಎಂ ಆಗಿಲ್ಲ ಎಂಬ ಅಸ್ತ್ರವನ್ನು ಅವರ ಬೆಂಬಲಿಗರು ಬಳಸುತ್ತಿದ್ದಾರೆ.

ಕ್ಯಾಬಿನೆಟ್ ಕಸರತ್ತು: ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆಗೆ ಕಾಯುತ್ತಿದ್ದರೆ, ಡಿ.ಕೆ. ಶಿವಕುಮಾರ್ ಅವರು ಸಿಎಂ ಹುದ್ದೆಯ ತೀರ್ಮಾನವಾಗುವವರೆಗೂ ಅದನ್ನು ತಡೆಹಿಡಿದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಉಭಯ ನಾಯಕರೊಂದಿಗೆ ಚರ್ಚಿಸಿ, ಅಂತಿಮವಾಗಿ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಈ ಹಗ್ಗಜಗ್ಗಾಟಕ್ಕೆ ಪೂರ್ಣವಿರಾಮ ಇಡಲಿದ್ದಾರೆ ಎಂದು ವರದಿಯಾಗಿದೆ.

Share

Leave a comment

Leave a Reply

Your email address will not be published. Required fields are marked *