Home ಕ್ರೈಂ ನ್ಯೂಸ್ ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಯುವತಿ: ಸ್ಕಾರ್ಪಿಯೋ ಕೊಟ್ಟರೂ ಫಾರ್ಚುನರ್‌ಗಾಗಿ ಪೀಡಿಸಿ ಹತ್ಯೆ ಆರೋಪ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಯುವತಿ: ಸ್ಕಾರ್ಪಿಯೋ ಕೊಟ್ಟರೂ ಫಾರ್ಚುನರ್‌ಗಾಗಿ ಪೀಡಿಸಿ ಹತ್ಯೆ ಆರೋಪ!

Share
ನೋಯ್ಡಾ
Share

ನೋಯ್ಡಾ: ಮದುವೆಯಾಗಿ ಕೇವಲ 17 ತಿಂಗಳು ಕಳೆಯುವಷ್ಟರಲ್ಲಿ, 25 ವರ್ಷದ ವಿವಾಹಿತ ಮಹಿಳೆಯೊಬ್ಬರು ತನ್ನ ಅತ್ತೆಯ ಮನೆಯ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಧಾರುಣ ಘಟನೆ ದೆಹಲಿಯ ಉಪನಗರವಾದ ಗ್ರೇಟರ್ ನೋಯ್ಡಾದ ಜಲಪುರ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ದೀಪಿಕಾ ನಗರ್ (25) ಎಂದು ಗುರುತಿಸಲಾಗಿದ್ದು, ವರದಕ್ಷಿಣೆ ಆಸೆಗಾಗಿ ಆಕೆಯನ್ನು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಕೋಟಿಕ್-III ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಮೃತರ ಪತಿ ರಿತಿಕ್ ತನ್ವರ್ ಮತ್ತು ಮಾವ ಮನೋಜ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

₹11 ಲಕ್ಷ ನಗದು, ಸ್ಕಾರ್ಪಿಯೋ ಕೊಟ್ಟರೂ ತೀರದ ಆಸೆ:

ಮಗಳ ಸಾವಿನಿಂದ ಕಣ್ಣೀರುಗರೆಯುತ್ತಿರುವ ತಂದೆ ಸಂಜಯ್ ನಗರ್, “2024ರ ಡಿಸೆಂಬರ್‌ನಲ್ಲಿ ನಡೆದ ಮದುವೆಯ ಸಂದರ್ಭದಲ್ಲಿ ನಾವು ₹11 ಲಕ್ಷ ನಗದು, ₹50 ಲಕ್ಷ ಮೌಲ್ಯದ ಚಿನ್ನಾಭರಣ, ಪೀಠೋಪಕರಣಗಳು ಹಾಗೂ ಒಂದು ಸ್ಕಾರ್ಪಿಯೋ ಕಾರನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದೆವು. ಮದುವೆಗೆ ಒಟ್ಟಾರೆ ಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ, ಮದುವೆಯಾದ 3-4 ತಿಂಗಳಿಗೇ ಕಿರುಕುಳ ಆರಂಭವಾಯಿತು. ಅವರು ಹೆಚ್ಚುವರಿಯಾಗಿ ₹51 ಲಕ್ಷ ನಗದು ಮತ್ತು ಫಾರ್ಚುನರ್ ಕಾರು ನೀಡುವಂತೆ ಪೀಡಿಸುತ್ತಿದ್ದರು” ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸಾವಿನ ಮುನ್ನ ಕರೆ ಮಾಡಿ ಅತ್ತಿದ್ದ ದೀಪಿಕಾ:

ಭಾನುವಾರ ರಾತ್ರಿ ಘಟನೆ ನಡೆಯುವ ಕೆಲವೇ ಗಂಟೆಗಳ ಮುನ್ನ ದೀಪಿಕಾ ತನ್ನ ತಂದೆಗೆ ಕರೆ ಮಾಡಿ, ಪತಿ ಮತ್ತು ಅತ್ತೆ-ಮಾವ ತನಗೆ ತೀವ್ರವಾಗಿ ಹೊಡೆದು ಹಿಂಸಿಸುತ್ತಿದ್ದಾರೆ ಎಂದು ಅತ್ತು ಹೇಳಿಕೊಂಡಿದ್ದರು. ವಿಷಯ ತಿಳಿದ ತಕ್ಷಣ ತಂದೆ ಮತ್ತು ಕೆಲವು ಸಂಬಂಧಿಕರು ಜಲಪುರದಲ್ಲಿರುವ ಅತ್ತೆಯ ಮನೆಗೆ ಧಾವಿಸಿ ಜಗಳವನ್ನು ಬಗೆಹರಿಸಲು ಯತ್ನಿಸಿದ್ದರು. ಆದರೆ, ಅವರು ಮರಳಿದ ಕೆಲವೇ ಸಮಯದ ನಂತರ ದೀಪಿಕಾ ಮಹಡಿಯಿಂದ ಕೆಳಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೊಲೀಸ್ ಕಮಿಷನರ್ ಹೇಳಿಕೆ:

“ಮಹಿಳೆಯೊಬ್ಬರು ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪತಿ ರಿತಿಕ್ ತನ್ವರ್ ಹಾಗೂ ಮಾವನನ್ನು ಈಗಾಗಲೇ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ” ಎಂದು ಸೆಂಟ್ರಲ್ ನೋಯ್ಡಾದ ಡಿಸಿಪಿ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಇದು ಆತ್ಮಹತ್ಯೆಯೇ ಅಥವಾ ಮೇಲಿಂದ ತಳ್ಳಿ ಕೊಲೆ ಮಾಡಲಾಗಿದೆಯೇ ಎಂಬ ನಿಖರ ಮಾಹಿತಿ ಹೊರಬರಬೇಕಿದೆ. ಗ್ರಾಮೀಣ ಭಾಗದಲ್ಲಿ ವರದಕ್ಷಿಣೆ ಪಿಡುಗು ಇನ್ನೂ ಜೀವಂತವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Share

Leave a comment

Leave a Reply

Your email address will not be published. Required fields are marked *