ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಗರಗಳಲ್ಲಿ ’10 ನಿಮಿಷಗಳಲ್ಲಿ ಡೆಲಿವರಿ’ ಕೊಡುವ ಕ್ವಿಕ್ ಕಾಮರ್ಸ್ ಸಂಸ್ಕೃತಿ ಜೋರಾಗಿದೆ. ಆದರೆ, ಈ ವೇಗದ ಬದುಕಿಗಿಂತ ನಮಗೆ ನೆಮ್ಮದಿಯ ವಾತಾವರಣ, ಶುದ್ಧ ಗಾಳಿ ಮತ್ತು ಸುರಕ್ಷತೆ ಮುಖ್ಯ ಎಂದು ವಾದಿಸಿ ಭಾರತೀಯ ಮೂಲದ ಯುವತಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಶ್ರೇಯಾ ಮಹೇಂದ್ರು ಎಂಬ ಭಾರತೀಯ ಯುವತಿ ಪ್ರಸ್ತುತ ಬ್ಯಾಂಕಾಕ್ನಲ್ಲಿ ನೆಲೆಸಿದ್ದು, ಅಲ್ಲಿಂದಲೇ ರಿಮೋಟ್ ಕೆಲಸ (Work from Home) ಮಾಡುತ್ತಿದ್ದಾರೆ. ತಮಗೆ ಭಾರತದ ಮಹಾನಗರಗಳಿಗಿಂತ ಬ್ಯಾಂಕಾಕ್ ಏಕೆ ಇಷ್ಟವಾಯಿತು ಎಂಬುದನ್ನು ಅವರು ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
“ನನಗೆ ಬೆಳ್ಳಂಬೆಳಗ್ಗೆ ವಾಹನಗಳ ಹಾರ್ನ್ ಸೌಂಡ್ ಕೇಳುವ ಬದಲು, ಹಕ್ಕಿಗಳ ಚಿಲಿಪಿಲಿ ಧ್ವನಿ ಕೇಳುತ್ತಾ ಏಳಬೇಕು. ಕಲುಷಿತ ವಾತಾವರಣದ ಬದಲು ನೀಲಿ ಆಕಾಶ, ಶುದ್ಧ ಗಾಳಿ, ಓಡಾಡಲು ಯೋಗ್ಯವಾದ ರಸ್ತೆಗಳು ಮತ್ತು ಸುರಕ್ಷತೆ ಮುಖ್ಯ. ಕೇವಲ 10 ನಿಮಿಷದಲ್ಲಿ ಕೈಗೆ ಸಿಗುವ ಸೌಲಭ್ಯಗಳಿಗಿಂತ ದೈನಂದಿನ ನೆಮ್ಮದಿ ಮತ್ತು ಉತ್ತಮ ನಾಗರಿಕ ಪ್ರಜ್ಞೆ ಇರುವ ನಗರ ಪ್ರಮುಖವಾಗುತ್ತದೆ,” ಎಂದು ಅವರು ಹೇಳಿದ್ದಾರೆ.
ಶ್ರೇಯಾ ಅವರ ಈ ಪೋಸ್ಟ್ ಭಾರತದ ನಗರ ಬದುಕಿನ ಮೇಲಿನ ಅಸಮಾಧಾನವನ್ನು ಹೊರಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂವಾದಕ್ಕೆ ಕಾರಣವಾಗಿದೆ. ಮಾಲಿನ್ಯ, ಅತಿಯಾದ ಟ್ರಾಫಿಕ್ ಮತ್ತು ಗದ್ದಲದಿಂದ ಬೇಸತ್ತಿರುವ ಅನೇಕ ಭಾರತೀಯ ಯುವ ಉದ್ಯೋಗಿಗಳು ಶ್ರೇಯಾ ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ.





Leave a comment