ಬೆಂಗಳೂರು: ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ನಟ ಮತ್ತು ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನಕ್ಕೆ ಸ್ಯಾಂಡಲ್ ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತೀವ್ರ ಸಂತಾಪ ಸೂಚಿಸಿದ್ದಾರೆ.
ನೆನಪಿನ ಬುತ್ತಿ ಬಿಚ್ಚಿಟ್ಟ ಚೇತನ್:
ದಿಲೀಪ್ ರಾಜ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿರುವ ಚೇತನ್, “2009ರಲ್ಲಿ ಗೋವಾದಲ್ಲಿ ನಡೆದ ‘ನಮ್ಮ ಹಾಡು’ ಚಿತ್ರದ ಚಿತ್ರೀಕರಣದ ವೇಳೆ ನಾನು ದಿಲೀಪ್ ರಾಜ್ ಅವರ ಜೊತೆ ನೇರವಾಗಿ ಕೆಲಸ ಮಾಡಿದ್ದೆ. ಅವರು ಅತ್ಯಂತ ಸೃಜನಾತ್ಮಕ, ದಯಾಳು ಮತ್ತು ಸದಾ ಶಾಂತಚಿತ್ತರಾಗಿರುವ (Cool) ವ್ಯಕ್ತಿಯಾಗಿದ್ದರು,” ಎಂದು ಬಣ್ಣಿಸಿದ್ದಾರೆ.
ಧ್ವನಿಯಾಗಿ ಜೀವ ತುಂಬಿದ್ದ ದಿಲೀಪ್:
ದಿಲೀಪ್ ರಾಜ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ, ಡಬ್ಬಿಂಗ್ ಕಲಾವಿದರಾಗಿಯೂ ಚೇತನ್ ಅವರ ವೃತ್ತಿಜೀವನಕ್ಕೆ ದೊಡ್ಡ ಶಕ್ತಿಯಾಗಿದ್ದರು. “ನನ್ನ ಎರಡು ಪ್ರಮುಖ ಚಿತ್ರಗಳ ಪಾತ್ರಗಳಿಗೆ ತಮ್ಮ ಧ್ವನಿಯ ಮೂಲಕ ಜೀವ ತುಂಬಿದ್ದಕ್ಕಾಗಿ ನಾನು ಅವರಿಗೆ ವಿಶೇಷವಾಗಿ ಕೃತಜ್ಞನಾಗಿದ್ದೇನೆ. ಅವರ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟ,” ಎಂದು ಚೇತನ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಗಮನಾರ್ಹ ಸಾಧನೆ:
ದಿಲೀಪ್ ರಾಜ್ ಅವರು ‘ಮಿಲನ’, ‘ಯು-ಟರ್ನ್’ ನಂತಹ ಸಿನಿಮಾಗಳು ಹಾಗೂ ‘ಹಿಟ್ಲರ್ ಕಲ್ಯಾಣ’ದಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ಚೇತನ್ ಅಹಿಂಸಾ ನಟನೆಯ ಸೂಪರ್ ಹಿಟ್ ಚಿತ್ರ ‘ಆ ದಿನಗಳು’ ಚಿತ್ರಕ್ಕೆ ದಿಲೀಪ್ ರಾಜ್ ಅವರೇ ಧ್ವನಿ ನೀಡಿದ್ದರು ಎಂಬುದು ಇಲ್ಲಿ ಗಮನಾರ್ಹ.





Leave a comment