ದಾವಣಗೆರೆ: ದೇಶದ ಗ್ರಾಮೀಣ ಬಡವರ ಪಾಲಿನ ಜೀವನಾಡಿಯಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ (MGNREGA) ಈಗ ಇತಿಹಾಸದ ಪುಟ ಸೇರಲು ಸಜ್ಜಾಗಿದೆ. ಕೇಂದ್ರ ಸರ್ಕಾರವು ಇದರ ಬದಲಿಗೆ “ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಅಜೀವಿಕಾ ಮಿಷನ್ (ಗ್ರಾಮೀಣ)” (VB-G RAM G) ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ, ಈ ಬದಲಾವಣೆಯು ಗ್ರಾಮೀಣ ಉದ್ಯೋಗಿಗಳ ಹಕ್ಕನ್ನು ಕಸಿದುಕೊಂಡು, ಅಧಿಕಾರವನ್ನು ಪಂಚಾಯತ್ಗಳಿಂದ ಕೇಂದ್ರಕ್ಕೆ ವರ್ಗಾಯಿಸುತ್ತಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಗ್ರಾಮ ಪಂಚಾಯಿತಿಗಳ ಹಕ್ಕು ಕಸಿದುಕೊಳ್ಳಲು ಷಡ್ಯಂತ್ರ ರೂಪಿಸಿದೆ. ಇದು ನಿಜಕ್ಕೂ ವಿಷಾದನೀಯ ಎಂದು ಹೇಳಿದರು.
ರಾಘವೇಂದ್ರ ಗೌಡ ಹೇಳಿದ್ದೇನು?
ಹಕ್ಕು vs ಯೋಜನೆ:
ನರೇಗಾ ಒಂದು ‘ಹಕ್ಕು ಆಧಾರಿತ’ ಕಾಯ್ದೆಯಾಗಿತ್ತು (Demand Driven). ಆದರೆ ಹೊಸ ವಿಬಿ-ಜಿ ರಾಮ್ ಜಿ ಯೋಜನೆಯು ಕೇಂದ್ರದ ಪೂರೈಕೆ ಆಧಾರಿತ (Supply Driven) ಆಗಿದೆ. ಅಂದರೆ, ಕೇಂದ್ರ ಸರ್ಕಾರ ನಿಗದಿಪಡಿಸಿದ ಬಜೆಟ್ ಮತ್ತು ಸ್ಥಳಗಳಲ್ಲಿ ಮಾತ್ರ ಕೆಲಸ ಸಿಗಲಿದೆ.
ಆರ್ಥಿಕ ಹೊರೆ:
ಈ ಹಿಂದೆ ಕೂಲಿ ಹಣವನ್ನು (100%) ಸಂಪೂರ್ಣವಾಗಿ ಕೇಂದ್ರವೇ ಭರಿಸುತ್ತಿತ್ತು. ಈಗಿನ ಹೊಸ ನಿಯಮದಂತೆ 60:40 ಅನುಪಾತ ಜಾರಿಗೆ ಬಂದಿದ್ದು, ಕೂಲಿ ಹಣದ ಶೇ. 40 ರಷ್ಟನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಿದೆ. ಇದು ಕರ್ನಾಟಕದಂತಹ ರಾಜ್ಯಗಳಿಗೆ ಭಾರೀ ಆರ್ಥಿಕ ಹೊರೆಯಾಗಲಿದೆ.
ಅಧಿಕಾರ ವಿಕೇಂದ್ರೀಕರಣಕ್ಕೆ ಧಕ್ಕೆ:
ಗ್ರಾಮ ಸಭೆಗಳಲ್ಲಿ ನಿರ್ಧರಿಸುತ್ತಿದ್ದ ಕಾಮಗಾರಿಗಳ ಬದಲಿಗೆ, ಈಗ ಕೇಂದ್ರ ಸರ್ಕಾರವು ‘ಪ್ಯಾರಾಮೀಟರ್’ಗಳ ಆಧಾರದ ಮೇಲೆ ಕೆಲಸಗಳನ್ನು ನಿರ್ಧರಿಸಲಿದೆ. ಇದರಿಂದ ಗ್ರಾಮ ಪಂಚಾಯತಿಗಳ ಸ್ವಾಯತ್ತತೆ ಕುಂಠಿತವಾಗಲಿದೆ.
ಕೆಲಸದ ದಿನಗಳ ಅನಿಶ್ಚಿತತೆ:
ಕಾಗದದ ಮೇಲೆ 125 ದಿನಗಳ ಉದ್ಯೋಗ ಎಂದು ಹೇಳಲಾಗಿದ್ದರೂ, ವರ್ಷದಲ್ಲಿ 2 ತಿಂಗಳು (ಕೃಷಿ ಸೀಸನ್ನಲ್ಲಿ) ಕೆಲಸವನ್ನು ಕಡ್ಡಾಯವಾಗಿ ಸ್ಥಗಿತಗೊಳಿಸುವ (Seasonal Pause) ನಿಬಂಧನೆ ತರಲಾಗಿದೆ.
ರಾಜಕೀಯ ಪ್ರತಿರೋಧ:
ಕರ್ನಾಟಕ ಸರ್ಕಾರವು ಈ ಹೊಸ ಕಾಯ್ದೆಯ ವಿರುದ್ಧ ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ಅಂಗೀಕರಿಸಿದ್ದು, ಇದು “ಗ್ರಾಮ ಸ್ವರಾಜ್ಯದ ಕೊಲೆ” ಎಂದು ಟೀಕಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಲ್ಲದೆ, ಬಡವರ ಉದ್ಯೋಗದ ಹಕ್ಕು ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕದ ಜಿಲ್ಲಾಧ್ಯಕ್ಷ ಡಿ. ಸಿ. ರಾಕೇಶ್, ಕಾಂಗ್ರೆಸ್ ಮುಖಂಡ ಕುಮಾರ್ ಟಿ.ಎಸ್. ಶಾಮನೂರು, ಗ್ರಾ. ಪಂ. ಸದಸ್ಯ ನವೀನ್ ಕೋಡಿಹಳ್ಳಿ, 25ನೇ ವಾರ್ಡ್ ಆರ್ ಜಿಪಿಆರ್ ಜಿಎಸ್ ಅಧ್ಯಕ್ಷ ದತ್ತಾತ್ರೇಯ, ಹುಲಿಕಟ್ಟೆ ರಾಜೇಶ್ ಮತ್ತಿತರರು ಹಾಜರಿದ್ದರು.






Leave a comment