SUDDIKSHANA KANNADA NEWS/ DAVANAGERE/ DATE:19-09-2024
ದಾವಣಗೆರೆ: ನಗರದಲ್ಲಿ ಗಣೇಶ ವಿಸರ್ಜನೆ ವಿಜೃಂಭಣೆಯಿಂದ ನೆರವೇರುತ್ತಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ದೊಡ್ಡ ಗಲಾಟೆ ಆಗಿರಲಿಲ್ಲ. ಆದ್ರೆ, ಇಂದು ಅರಳಿಮರ ವೃತ್ತದ ಬಳಿ ಸಂಭವಿಸಿದ ಗಲಾಟೆ ಲಾಠಿಚಾರ್ಜ್ ಮಾಡುವವರೆಗೆ ಬಂದು ನಿಂತಿದೆ. ಕೆಲ ಕಿಡಿಗೇಡಿಗಳು ಎಸೆದ ಕಲ್ಲು ಶಾಂತಯುತವಾಗಿದ್ದ ಪರಿಸ್ಥಿತಿ ಪ್ರಕ್ಷ್ಯುಬ್ಧಗೊಳ್ಳುವಂತೆ ಮಾಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರೇ ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು.
ಅರಳೀಮರ ವೃತ್ತದ ಬಳಿಯ ವೆಂಕೋಭೋವಿ ಕಾಲೋನಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಇಂದು ಗಣೇಶ ವಿಸರ್ಜನಾ ಮೆರವಣಿಗೆಯು ಅದ್ಧೂರಿಯಾಗಿ ಸಾಗುತಿತ್ತು. ಯುವಕರು, ಹಿಂದೂ ಸಂಘಟನೆಯವರು ಹಾಗೂ ಗಣೇಶ ಪ್ರತಿಷ್ಠಾಪನೆಯ ಆಯೋಜಕರು ಡಿಜೆ ಹಾಕಿಕೊಂಡು ಹೆಜ್ಜೆ ಹಾಕುತ್ತಿದ್ದರು. ಮೆರವಣಿಗೆಯು ಶಾಂತಿಯುತವಾಗಿ ಸಾಗುತಿತ್ತು. ಆದ್ರೆ, ಇಲ್ಲಿ ಕಿಡಿಗೇಡಿಗಳು ಮಾಡಿದ್ದು ಪರಿಸ್ಥಿತಿಯನ್ನೇ ಬದಲಾಯಿಸಿತು.
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನಲೆ ಹಳೇ ದಾವಣಗೆರೆ ಭಾಗದಲ್ಲಿ ಕೆಲವೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು
ಮುಚ್ಚಿಸಿದರು. ಕೆಲ ವ್ಯಾಪಾರಿಗಳು ತಾವೇ ಸ್ವತಃ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆಯತ್ತ ನಡೆದರು.
ದಾವಣಗೆರೆ ನಗರದ ವೆಂಕಟೇಶ್ವರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಬೇತೂರು ರಸ್ತೆ ಕ್ರಾಸ್ ಬಳಿಯ ಗಣೇಶ ವಿಸರ್ಜನೆ ಮೆರವಣಿಗೆ ಹೋಗುತಿತ್ತು. ಆಗ ವೆಂಕಟೇಶ್ವರ ವೃತ್ತಕ್ಕೆ ಮೆರವಣಿಗೆ ಬಂದಾಗ ಅನ್ಯ ಕೋಮಿನ ಜನರು ಘೋಷಣೆ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಜೈ ಶ್ರೀ ರಾಮ್ ಎಂದು ಹಿಂದೂಪರ ಕಾರ್ಯಕರ್ತರು ಘೋಷಣೆ ಹಾಕಿದರು. ಮತ್ತೊಂದೆಡೆ ಅಲ್ಲಾ ಹೂ ಅಕ್ಬರ್, ಜಿಂದಾಬಾದ್ ಜಿಂದಾಬಾದ್ ಇಸ್ಲಾಂ ಜಿಂದಾಬಾದ್ ಎಂದು ಎಂಬ ಕೂಗು ಕೇಳಿ
ಬಂತು. ಎರಡೂ ಕಡೆಗಳಿಂದಲೂ ಕಲ್ಲು ತೂರಾಟ ಶುರುವಾಯಿತು.
ಈ ವೇಳೆ ವಾಗ್ವಾದ ಉಂಟಾಯಿತು. ಆಗ ಕಲ್ಲು ತೂರಾಟ ಶುರುವಾಯಿತು. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ, ಪೊಲೀಸ್ ಪೇದೆಗಳಾದ ರಘು, ಅನ್ನಪೂರ್ಣಗೆ ತಲೆಗೆ ಹೊಡೆತ ಬಿದ್ದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಬಿಸಿ ತೋರಿಸಿದರು. ಆಗ ಜನರ ಗುಂಪು ಚದುರಿತು.
ಮೆರವಣಿಗೆ ಉದ್ದಕ್ಕೂ ಕ್ರಾಸ್ ಬಳಿ ನಿಂತು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣ ಆಗಿತ್ತು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಸ್ವತಃ ಎಸ್ಪಿ ಉಮಾ ಪ್ರಶಾಂತ್ ಲಾಠಿ ಹಿಡಿದು ಜನರನ್ನೂ ಚದುರಿಸಿಲು ಮುಂದಾಗಿದ್ರೆ, ಜನರನ್ನೂ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ, ಕಲ್ಲು ತೂರಿದ ಕಿಡಿಗೇಡಿಗಳನ್ನೂ ಬಂಧಿಸಿ ಎಂದು ಹಿಂದೂ ಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ.