ದಾವಣಗೆರೆ: ನಗರದ ಶಂಕರ್ ವಿಹಾರ್ ಬಡಾವಣೆಯಲ್ಲಿರುವ ಕಟ್ಟಡವೊಂದರಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡಿದ ಆರೋಪದ ಮೇರೆಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ ಸೇರಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
READ ALSO THIS STORY: ಕೃಷಿ ಇಲಾಖೆ: ಪಿಎಂಎಫ್ಎಂಇ ಯೋಜನೆಯಡಿ ಸಿಗಲಿದೆ 15 ಲಕ್ಷ ರೂ. ಸಹಾಯಧನ
ಸಚಿವರ ಆಪ್ತ ಮೊಹಮ್ಮದ್ ಜಮೀರ್ ಮತ್ತು ಸಾಧಿಕ್ ಎಂಬಾತನ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಪತ್ತೆಯಾಗಿದೆ. ಇದು ಭಾರೀ ಚರ್ಚೆಗೂ ಕಾರಣವಾಗಿದೆ.
ಇನ್ನು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರು, ಅನ್ನ ಭಾಗ್ಯ ಅಕ್ಕಿ ಯೋಜನೆಯಡಿ ಅಕ್ರಮ ಅಕ್ಕಿ ದಾಸ್ತಾನು ಮತ್ತು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಪ್ತ ಮೊಹಮ್ಮದ್ ಜಮೀರ್ ವಿರುದ್ಧ ಕೇಸ್ ದಾಖಲಾಗಿದೆ. ಈತ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಚಿವರು ಮತ್ತು ಸಂಸದರ ಪುತ್ರ ಸಮರ್ಥ್ ಶಾಮನೂರು ಜೊತೆಗೆ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆರೋಪಿಯಾಗಿರುವ ಮೊಹಮ್ಮದ್ ಜಮೀರ್ ಗೆ ರಾಖಿ ಕಟ್ಟುವ ಫೋಟೋಗಳನ್ನು ಬಿಡುಗಡೆ ಮಾಡಿ ಈ ಕುಟುಂಬದ ಜೊತೆ ಆತ್ಮೀಯರಾಗಿರದಿದ್ದರೆ ಈ ರೀತಿ ಭಾವಚಿತ್ರಗಳು ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮೂರು ಬಾರಿ ಸಚಿವರಾದರೂ ಕಪ್ಪು ಚುಕ್ಕೆ ಇಲ್ಲ ಎಂದಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಇದಕ್ಕೇನೂ ಉತ್ತರ ಕೊಡುತ್ತಾರೆ. ಇವರ ನೆರಳಿನಡಿಯಲ್ಲಿಯೇ ಅಕ್ರಮಗಳು ಎಗ್ಗಿಲ್ಲದೇ ಜಿಲ್ಲೆಯಲ್ಲಿ ನಡೆಯುತ್ತಿವೆ. ಮೊಹಮ್ಮದ್ ಜಮೀರ್ ಮಲ್ಲಿಕಾರ್ಜುನ್ ಅವರಿಗೆ ಅಪ್ತ ಎಂಬುದು ಇಡೀ ದಾವಣಗೆರೆಗೆ ಗೊತ್ತಿದೆ. ಅವರ ಹೆಸರು ಹೇಳಿಕೊಂಡು ಓಡಾಡುವ ಈತನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಕ್ರಮಗಳ ಪಿತಾಮಹ ಎಸ್. ಎಸ್. ಮಲ್ಲಿಕಾರ್ಜುನ್ ಅವರೇ. ಕೂಡಲೇ ಮೊಹಮ್ಮದ್ ಜಮೀರ್ ಬಂಧಿಸಬೇಕು. ಈತನ ವಿರುದ್ಧ ಇನ್ನೂ ಹಲವು ಆರೋಪಗಳು ಕೇಳಿ ಬಂದಿದ್ದು, ಕಠಿಣ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಯಶವಂತರಾವ್ ಜಾಧವ್ ಎಚ್ಚರಿಕೆ ನೀಡಿದರು.






Leave a comment