ದಾವಣಗೆರೆ: ತಾಲೂಕಿನ ಆನಗೋಡು ಬಳಿಯಿರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲಕ್ಕೆ ಸೋಮವಾರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ಪರಿಶೀಲನೆ ನಡೆಸಿದರು.
READ ALSO THIS STORY: ನಾನು ತಪ್ಪು ಮಾಡಿಲ್ಲ, ಈ ಬಗ್ಗೆ ತನಿಖೆಯಾಗಬೇಕು: ರಾಸಲೀಲೆ ಆರೋಪ ಎದುರಿಸುತ್ತಿರುವ ಡಿಜಿಪಿ ರಾಮಚಂದ್ರರಾವ್ ಪ್ರತಿಕ್ರಿಯೆ!
ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಈ ಸಂದರ್ಭದಲ್ಲಿ ಸೂಕ್ತ ನಿರ್ವಹಣೆ ಇಲ್ಲದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕಿರು ಮೃಗಾಲಯದಲ್ಲಿರುವ ಜಿಂಕೆಗಳು, ಕರಡಿಗಳು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳನ್ನು ವೀಕ್ಷಣೆ ಮಾಡಿ ಅವುಗಳ ಆರೋಗ್ಯ, ಪೂರೈಸುವ ಆಹಾರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮೃಗಾಲಯದಲ್ಲಿ 94 ಹೆಣ್ಣು, 58ಗಂಡು ಹಾಗೂ 18 ಮರಿಗಳು ಸೇರಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ನಾಲ್ಕು ಜಿಂಕೆಗಳು ಮೃತಪಟ್ಟಿವೆ. ಇದು ‘ಹೆಮರಾಜಿಕ್ ಸೆಪ್ಟಿಸೆಮಿಯಾ’ (ಎಚ್ಎಸ್) ಎಂಬ ಸಾಂಕ್ರಾಮಿಕ ರೋಗವಿರಬಹುದು ಎಂದು ಪ್ರಾಣಿ ಆರೋಗ್ಯ ಸಲಹಾ ಸಮಿತಿಯು ಶಂಕಿಸಲಾಗಿದೆ.
ರೋಗ ಹರಡದಂತೆ ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆಯನ್ನು ತಕ್ಷಣವೇ ಪ್ರಾರಂಭಿಸಲಾಗಿದೆ. ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮ ಜಾರಿಗೊಳಿಸಲಾಗಿದೆ ಎಂದು ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದರು.
ಆಹಾರ ದಾಸ್ತಾನು ಕೊಠಡಿಯಲ್ಲಿರುವ ಕೊಳತೆ ತರಕಾರಿ, ಕೊಳತೆ ಕಾಳುಗಳನ್ನು ನೋಡಿದರೆ ಪ್ರಾಣಿ, ಪಕ್ಷಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ೩೩ ಲಕ್ಷ ರೂ. ಖರ್ಚು ಮಾಡಿ ಆಹಾರ ಸಾಮಗ್ರಿ ಖರೀದಿಸಲಾಗಿದೆ ಎಂದಿದೆ. ಆದರೆ ಇಲ್ಲಿ ಅಷ್ಟೊಂದು ಹಣ ಖರ್ಚು ಮಾಡದಿರುವುದು ಕಂಡು ಬರುತ್ತಿದೆ. ಸಮರ್ಪಕ ಆಹಾರ ಪದಾರ್ಥಗಳು ಇಲ್ಲ. ಅಲ್ಲದೇ ಹಣ ದುರ್ಬಳಕೆ ಆಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೋಗದ ನಿಖರ ಕಾರಣ ತಿಳಿಯಲು ಮೊದಲು ಮೃತಪಟ್ಟಿದ್ದ ಜಿಂಕೆಯ ಅಂಗಾಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ನಿಖರ ಕಾರಣ ತಿಳಿದ ಬಳಿಕ ಸೂಕ್ತ ಚಿಕಿತ್ಸೆ ನೀಡಿದ್ದರೆ ಸಾವಿನ ಸಂಖ್ಯೆ ತಪ್ಪಿಸಬಹುದಿತ್ತು. ಸಾಂಕ್ರಾಮಿಕ ರೋಗದ ಲಕ್ಷಣಗಳು ಕಾಣಿಸುತ್ತಿದ್ದರೂ, ತಕ್ಷಣದ ಚಿಕಿತ್ಸೆ ಮತ್ತು ತಜ್ಞರ ನೆರವು ಪಡೆಯುವಲ್ಲಿ ವಿಳಂಬವಾಗಿರುವುದು ನಿರ್ವಹಣೆ ಕೊರೆತೆಯನ್ನು ಸೂಚಿಸುತ್ತದೆ. ಇದು ಪುನರಾವರ್ತನೆಯಾದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಅಷ್ಟೇ ಅಲ್ಲದೇ ಕಿರು ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ನೂರು ಜನ ಪ್ರವಾಸಿಗರು ಬಂದರೆ ೨೫ ಜನ ಪ್ರವಾಸಿಗರಿಗೆ ಮಾತ್ರ ಟಿಕೆಟ್ ಹರಿದು ಉಳಿದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಗಳು ಸಾಕಷ್ಟು ಕೇಳಿ ಬಂದಿವೆ. ಮುಂದೆ ಈ ರೀತಿ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಡಿಎಫ್ಒ ಹರ್ಷವರ್ಧನ್, ಆರ್ಎಫ್ಒ ಇನಾಯತ್, ಎಸಿಎಫ್ ಆನಂದ್, ಗ್ರಾಪಂ ಮಾಜಿ ಅಧ್ಯಕ್ಷ ನಸರುಲ್ಲ, ಗ್ರಾಮದ ಮುಖಂಡರಾದ ಪ್ರಕಾಶ್, ರಾಜಪ್ಪ, ರವಿ, ಸನಾವುಲ್ಲ, ರುದ್ರಪ್ಪ, ಶಿವು, ಮಲ್ಲೇಶ್ನಾಯ್ಕ್, ಫಿರೋಜ್ ಅಹ್ಮದ್, ಜೀವನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ನಿರ್ವಹಣೆಯ ಲೋಪಗಳ ಕಾರಣದಿಂದ ಸಾಂಕ್ರಾಮಿಕ ರೋಗ ಹರಡಿ ಜಿಂಕೆಗಳು ಸಾವು ಸಂಭವಿಸಿರುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
-ಕೆ.ಎಸ್.ಬಸವಂತಪ್ಪ, ಶಾಸಕ





Leave a comment