SUDDIKSHANA KANNADA NEWS/DAVANAGERE/DATE:19_12_2025
ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ ಠಾಣೆಗಳಿಗೆ ಅಗತ್ಯವಿರುವ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಅಗ್ನಿಶಾಮಕ ಇಲಾಖೆಯಲ್ಲಿ 15 ವರ್ಷ ಮೇಲ್ಪಟ್ಟು ರಸ್ತೆ ಚಾಲನೆಯಿಂದ ಸ್ಥಗಿತಗೊಂಡಿರುವ ಒಟ್ಟು 358 ವಾಹನಗಳ ಪೈಕಿ 93 ವಾಹನಗಳನ್ನು ಉಪಯೋಗಿಸಲು ಮುಂದಿನ 5 ವರ್ಷಗಳ ಅವಧಿಗೆ ರಸ್ತೆ ಚಾಲನೆಗೆ ವಿನಾಯಿತಿ ನೀಡಿ ಕಾಲಾವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಈ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ 03 ವಾಹನಗಳೂ ಸೇರಿವೆ ಎಂದು ಹೇಳಿದರು.
ಪ್ರಸ್ತುತ 150 ಜಲವಾಹನಗಳ ಕವಚ ನಿರ್ಮಾಣ ಮಾಡಲು ಕಾರ್ಯಾದೇಶ ನೀಡಲಾಗಿದ್ದು, ಇದರಲ್ಲಿ 25 ವಾಹನಗಳನ್ನು ಸ್ವೀಕರಿಸಿ ಅಗ್ನಿಶಾಮಕ ಠಾಣೆಗಳಿಗೆ ಮಂಜೂರು ಮಾಡಲಾಗಿದೆ. ಪ್ರಸ್ತುತ 15 ಜಲವಾಹನಗಳನ್ನು ಅಗ್ನಿಶಾಮಕ ಇಲಾಖೆಯಲ್ಲಿ ಸ್ವೀಕರಿಸಿದ್ದು, ಈ ವಾಹನಗಳಿಗೆ ಕೆಜಿಐಡಿ ವಿಮೆ ಮತ್ತು ಆರ್ಟಿಒ ನೋಂದಣಿ ಮಾಡಿಸುವ ಕೆಲಸ ಪ್ರಗತಿಯಲ್ಲಿದೆ. ಬಾಕಿ ಉಳಿದ 110 ಜಲವಾಹನಗಳ ಕವಚ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಸರಬರಾಜಾದ ನಂತರ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಅಗ್ನಿಶಾಮಕ ಠಾಣೆಗಳಿಗೆ ಜಲವಾಹನಗಳನ್ನು ಮಂಜೂರು ಮಾಡಲು ಪರಿಶೀಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಉತ್ತರಿಸಿದರು.





Leave a comment