SUDDIKSHANA KANNADA NEWS/ DAVANAGERE/ DATE:27-07-2024
ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲಾ ಮತ್ತು ರಾಜ್ಯ ನಾಯಕರು ನಾಟಕವಾಡಿದ್ರು. ನನ್ನ ಬಾಯಿ ಮುಚ್ಚಿಸಿದರು. ಆಗಲೇ ಬಿಟ್ಟಿದ್ದರೆ ಎಲ್ಲವನ್ನೂ ಮಾತನಾಡಿಬಿಡುತ್ತಿದ್ದೆ ಎಂದು ಹೇಳುವ ಮೂಲಕ ಮಾಜಿ ಸಂಸದ
ಡಾ. ಜಿ. ಎಂ. ಸಿದ್ದೇಶ್ವರ ಸಿಡಿದೆದ್ದಿದ್ದಾರೆ.
ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವೇಳೆ ರಾಜ್ಯ ಮತ್ತು ಜಿಲ್ಲೆಯ ನಾಯಕರು ಚುಪ್ ಚುಪ್ ಅಂತೇಳಿ ಬಾಯಿಮುಚ್ಚಿಸಿದರು. ನಾನು ಸುಮ್ಮನಾಗಿದ್ದೆ. ಆಗಲೇ ನನ್ನ ಬಾಯಿ ಮುಚ್ಚಿಸದಿದ್ದರೆ ಎಲ್ಲವನ್ನೂ
ಹೇಳಿಬಿಡುತ್ತಿದ್ದೆ ಎಂದು ಹೇಳುವ ಮೂಲಕ ಅಸಮಾಧಾನ ಹೊರಹಾಕಿದರು.
ದಾವಣಗೆರೆ ಭಾರತೀಯ ಜನತಾ ಪಕ್ಷ ಒಡೆದ ಮನೆಯಾಗಿರುವುದು ನಿಜ. ಇದನ್ನು ಯಾರು ಸರಿಮಾಡಬೇಕು? ಒಡೆದ ಮನೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ಯದ ನಾಯಕರು ಬಂದು ಎಲ್ಲವನ್ನೂ ಸರಿ ಪಡಿಸಬೇಕಿದೆ. ಸುಮ್ಮನೆ ಕುಳಿತರೆ ಸರಿಹೋಗದು. ಮತದಾರರು, ಮುಖಂಡರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ಆದರೂ ಬರಲಿಲ್ಲ ಎಂದು ಹೇಳಿದರು.
ಅಭಿನಂದನೆ ಸಲ್ಲಿಸುವಾಗ ಯಾರು ಬಂದಿದ್ದರು, ಯಾರು ಬಂದಿರಲಿಲ್ಲ? ನಮ್ಮ ಕಾರ್ಯಕರ್ತರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಎಲ್ಲರನ್ನೂ ಕರೆದಿದ್ದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ, ಅಭ್ಯರ್ಥಿಗಳ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಚುನಾವಣೆಗೆ ಬಂದು ನಾಟಕವಾಡಿ ಹೋದ್ರು. ಸರಿ ಮಾಡಲಿಲ್ಲ. ರಾಜ್ಯ ನಾಯಕರು, ಜಿಲ್ಲಾ ನಾಯಕರು ಬಂದು ಹೋದ್ರು. ನನಗೆ ಮಾತನಾಡಲು ಬಿಡಲಿಲ್ಲ. ಚುಪ್ ಚುಪ್ ಅಂತೇಳಿದ್ರು. ನನ್ನನ್ನು ಬಿಟ್ಚಿದ್ದರೆ ಸರಿಯಾಗಿ ಹೇಳುತ್ತಿದ್ದೆ. ಒಂದು ಕಡೆ
ಕೇಳಿದರು. ಅದರಿಂದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರು ಸೋಲಬೇಕಾಯಿತು. ಯಾರ್ಯಾರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಲಗಾನ್ ಟೀಂ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪರು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸಿದ್ದೇಶ್ವರ ಅವರು ಲಗಾನ್ ಟೀಂ ಹೆಸರು ಪ್ರಸ್ತಾಪಿಸದೇ ರಾಜ್ಯ ಹಾಗೂ ಜಿಲ್ಲೆಯ ನಾಯಕರ ವಿರುದ್ಧ ಗುಡುಗಿದ್ದಾರೆ. ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿನ ಬೆಳವಣಿಗೆಗಳು ದಿನಕಳೆದಂತೆ ಕಗ್ಗಂಟಾಗುತ್ತಿದೆ. ಭಿನ್ನಮತದ ಬೇಗುದಿಯಲ್ಲಿ ಬೇಯುತ್ತಿದೆ. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಬಣ ಹಾಗೂ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ಬಣದ ನಡುವಿನ ವಾಕ್ಸಮರ ಜೋರಾಗಿ ನಡೆದಿತ್ತು. ಕಳೆದ ವಾರ ಲಗಾನ್ ಟೀಂ ತಂಟೆಗೆ ಬಂದರೆ ಹುಷಾರ್ ಎಂದು ರೇಣುಕಾಚಾರ್ಯ ಗುಡುಗಿದ್ದರೆ, ಸಿದ್ದೇಶ್ವರರ ಆಪ್ತರು ಧರ್ಮಸ್ಥಳಕ್ಕೆ ಗಂಟೆ ಹೊಡೆಯುವ ಪಂಥಾಹ್ವಾನ ಕೊಟ್ಟಿದ್ದರು. ಇಷ್ಟು ದಿನ ಸುಮ್ಮನಿದ್ದ ಸಿದ್ದೇಶ್ವರ ಅವರು ಬಹಿರಂಗವಾಗಿಯೇ ಬಿಜೆಪಿ ಸೋಲಲು ಕಾರಣ ಯಾರು ಎಂಬುದನ್ನು ಹೇಳಿದ್ದಾರೆ. ಇದು ಯಾವ ಹಂತ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈ ನಡುವೆ ರೇಣುಕಾಚಾರ್ಯ ಆಪ್ತರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಕಾರಣ ಯಾರು ಎಂಬ ಬಗ್ಗೆಯೂ ಧರ್ಮಸ್ಥಳದಲ್ಲಿ ಗಂಟೆ ಹೊಡೆಯಲು ಬರಲಿ ಎಂದು ಪ್ರತಿ ಸವಾಲು ಹಾಕಿದ್ದರು. ಸವಾಲು – ಪ್ರತಿಸವಾಲು ಆದ ಬಳಿಕ ಕೆಲ ದಿನಗಳ ಬಳಿಕ ತಣ್ಣಗಿದ್ದ ಎರಡೂ ಕಡೆಯವರು ಶಾಂತಿ ಕಾಪಾಡಲು ಮುಂದಾಗಿದ್ದರು.
ಈ ಬೆಳವಣಿಗೆಯ ನಡುವೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಎಂ. ಪಿ. ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಇಬ್ಬರ ಭೇಟಿ ವೇಳೆ ಲಗಾನ್ ಟೀಂನವರು ಫೋಟೋದಲ್ಲಿ ಇಲ್ಲ. ಆದ್ರೆ, ಜಿಲ್ಲೆಯಲ್ಲಿನ ರಾಜಕೀಯ ಬೆಳವಣಿಗೆಗಳು, ಬಿಜೆಪಿಯಲ್ಲಿ ಆಗುತ್ತಿರುವ ಚಟುವಟಿಕೆಗಳ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.