SUDDIKSHANA KANNADA NEWS/ DAVANAGERE/ DATE:20-01-2025
ದಾವಣಗೆರೆ: ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಬಿಜೆಪಿ ಭಿನ್ನರ ಬಡಿದಾಟ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್
ಜಾರಕಿಹೊಳಿ ಬಣಗಳ ನಡುವಿನ ಗುದ್ದಾಟ ಜೋರಾಗಿದೆ. ಈ ನಡುವೆ ಈ ಬಡಿದಾಟ ಈಗ ಜಿಲ್ಲಾ ಮಟ್ಟಕ್ಕೂ ಕಾಲಿಟ್ಟಿದೆ.
ಮಂಡಲ ಅಧ್ಯಕ್ಷರ ನೇಮಕ ಸಂಬಂಧ ರಾಜ್ಯ ಘಟಕವು ತಂಡ ರಚಿಸಿತ್ತು. ಚುನಾವಣಾಧಿಕಾರಿಯಾಗಿ ಹೆಚ್. ಟಿ. ಭೈರಪ್ಪರು ನೇಮಕವಾಗಿದ್ದರೆ ಜಿಲ್ಲಾ ಸಹ ಚುನಾವಣಾಧಿಕಾರಿಯಾಗಿ ಯಶವಂತರಾವ್ ಜಾಧವ್ ಅವರ ನಿಯೋಜನೆ ಮಾಡಲಾಗಿತ್ತು. ಆದ್ರೆ, ಈಗ ಮಂಡಲ ಅಧ್ಯಕ್ಷರ ನೇಮಕ ವಿಚಾರ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೇರುವಂತೆ ಮಾಡಿದೆ.
ಹೆಚ್. ಟಿ. ಭೈರಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರು ಈಗಾಗಲೇ ಹೊನ್ನಾಳಿಗೆ ನಾಗರಾಜ್, ಚನ್ನಗಿರಿಗೆ ಕುಮಾರ್, ಜಗಳೂರಿಗೆ ಶ್ರೀನಿವಾಸ್ ಜೆ ಸೊಕ್ಕೆ, ಮಾಯಕೊಂಡಕ್ಕೆ ಬಿ. ಜಿ. ಸಚಿನ್, ದಾವಣಗೆರೆ ಉತ್ತರಕ್ಕೆ ತಾರಕೇಶ್ ನೇಮಕ ಮಾಡಿ ಅಧಿಕೃತ ಪ್ರಕಟಣೆ ಹೊರಡಿಸಿತ್ತು. ಆದ್ರೆ, ಈ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಯಶವಂತರಾವ್ ಜಾಧವ್ ಅವರು, ಹೊಸದಾಗಿ ಅವರೂ ನೇಮಕ ಮಾಡಿರುವುದಾಗಿ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದ್ದಾರೆ.
ಯಶವಂತರಾವ್ ಜಾಧವ್ ಅವರು ನೇಮಿಸಿರುವಂತೆ ಹೊನ್ನಾಳಿಗೆ ಎಂ. ಆರ್. ಮಹೇಶ್, ಚನ್ನಗಿರಿಗೆ ಎಸ್. ನವೀನ್ ಕುಮಾರ್, ಜಗಳೂರಿಗೆ ಶ್ರೀನಿವಾಸ್ ಜೆ. ಸೊಕ್ಕೆ, ಮಾಯಕೊಂಡಕ್ಕೆ ಕೆ. ಆರ್. ಅನಿಲ್ ಕುಮಾರ್ ಕತ್ತಲಗೆರೆ, ದಾವಣಗೆರೆ ಉತ್ತರಕ್ಕೆ ಡಿ. ಆರ್. ವೀರೇಶ್ ದೊಡ್ಡಬಾತಿ ಅವರ ಹೆಸರು ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಬಡಿದಾಟ ತಾರಕಕ್ಕೇರಿದ್ದು, ಯಾವುದು ಸಿಂಧು, ಯಾವುದು ಅಸಿಂಧು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗದಿದ್ದರೂ ಯಶವಂತರಾವ್ ಜಾಧವ್ ಅವರು ಮಂಡಲಗಳಿಗೆ ಹೋಗಿ ಮಾಹಿತಿ ಕಲೆ ಹಾಕಿ ಕಾರ್ಯಕರ್ತರು, ಮುಖಂಡರ ಜೊತೆ ಚರ್ಚಿಸಿ ಮಂಡಲ ಅಧ್ಯಕ್ಷರ ನೇಮಕ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಭೈರಪ್ಪ ಮತ್ತು ಜಿಲ್ಲಾಧ್ಯಕ್ಷರು ಪಕ್ಷದ ಚೌಕಟ್ಟಿನೊಳಗೆ ಆಯ್ಕೆ ಮಾಡಿಲ್ಲ. ಜಿಲ್ಲಾ ಕೋರ್ ಕಮಿಟಿ ಸಭೆ ಕರೆದಿಲ್ಲ. ಜಿಲ್ಲಾ ಸಹ ಚುನಾವಣಾಧಿಕಾರಿಯಾದರೂ ನನಗೆ ಮಾಹಿತಿ ನೀಡಿಲ್ಲ. ಯಾರ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು
ಪ್ರಶ್ನಿಸಿದ ಯಶವಂತರಾವ್ ಜಾಧವ್ ಅವರು ಭರೈಪ್ಪ ಹಾಗೂ ಜಿಲ್ಲಾಧ್ಯಕ್ಷರು ಮಾಡಿದ್ದು ತಪ್ಪು. ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ ಎಂದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಜಗಳೂರು, ಮಾಯಕೊಂಡ ಮತ್ತು ದಾವಣಗೆರೆ ಉತ್ತರ ಮಂಡಲಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ಮಾಡಲಾಗುತ್ತದೆ ಎಂದರು. ಇತ್ತೀಚೆಗೆ ಹೊನ್ನಾಳಿ ಹಾಗೂ ಚನ್ನಗಿರಿ ಮಂಡಲಗಳಿಗೆ ಸಭೆ ನಡೆಸಲಾಗಿದೆ. ಆದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಹಾಗೂ ಈ ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ಪಕ್ಷದ ಚುನಾವಣಾಧಿಕಾರಿಗಳಾದ ಭೈರಪ್ಪ ಅವರ ಬಳಿ ಮಾತನಾಡಲಾಗಿತ್ತು ಎಂದು ತಿಳಿಸಿದರು.
ಪಕ್ಷದ ಕಾರ್ಯಚಟುವಟಿಕೆಗಳು ಯಾರೊಬ್ಬರ ಮನೆಯಲ್ಲಿ ನಡೆಸುವುದು ಸರಿಯಲ್ಲ. ಆದರೂ ಮಂಡಲದ ಅಧ್ಯಕ್ಷರ ಮನೆಯಲ್ಲಿ ಸಭೆ ನಡೆಸಲಾಗಿದೆ.ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ,ಜಿಲ್ಲಾ ಕೋರ್ ಕಮಿಟಿ ಸಭೆಕರೆದಿಲ್ಲ
ಹಾಗಾಗಿ ಸಭೆ ಕರೆಯಲಾಗಿದೆ ಎಂದು ಭೈರಪ್ಪ ಅವರ ಗಮನಕ್ಕೆತರಲಾಯಿತು. ಆದರೂ ಕೂಡ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಆದ್ದರಿಂದ ಎಲ್ಲಾಹಿರಿಯ ಮುಖಂಡರು ಹಾಗೂ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ ಐದು ಮಂಡಲ ಅಧ್ಯಕ್ಷರನ್ನು ನೇಮಕ ಮಾಡಿದ್ದೇನೆ ಎಂದರು.
ಹೊನ್ನಾಳಿಗೆ ಎಂ.ಆರ್. ಮಹೇಶ್,ಚನ್ನಗಿರಿಗೆ ಎಸ್. ನವೀನ್ ಕುಮಾರ್, ಜಗಳೂರಿಗೆ ಶ್ರೀನಿವಾಸ್. ಜೆ., ಸೊಕ್ಕೆ, ಮಾಯಕೊಂಡಕ್ಕೆ ಕೆ.ಆರ್. ಅನೀಲ್ ಕುಮಾರ್ ಕತ್ತಲೆಗೆರೆ ಹಾಗೂ ದಾವಣಗೆರೆ ಉತ್ತರಕ್ಕೆ ಡಿ.ಆರ್. ವೀರೇಶ್ ದೊಡ್ಡಬಾತಿ ಅವರನ್ನು ನೇಮಕಮಾಡಿದ್ದೇನೆ ಎಂದರು.
ದಾವಣಗೆರೆಯಲ್ಲಿ ಎಲ್ಲವೂ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುತ್ತಿದೆ.ಕೋರ್ ಕಮಿಟಿ ಸಭೆ ನಡೆಸಬೇಕು. ಕಾರ್ಯಕರ್ತರೊಂದಿಗೆ ಚರ್ಚೆ ಮಾಡಬೇಕು ಎಂದು ಇತ್ತೀಚೆಗೆ ದಾವಣಗೆರೆಗೆ ಆಗಮಿಸಿದ ಅರಗ ಜ್ಞಾನೇಂದ್ರ ಅವರಿಗೆ ಗಮನಕ್ಕೆ ತರಲಾಗಿತ್ತು. ಅವರೂ ಕೂಡ ಬಗೆಹರಿಸುವುದಾಗಿ ಹೇಳಿದ್ದರು ಹೀಗಿದ್ದರೂ ಕೂಡ ಮಂಡಲ ಅಧ್ಯಕ್ಷರ ನೇಮಕಮಾಡಲಾಗಿದೆ.ಆದ್ದರಿಂದ ದಾವಣಗೆರೆ ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿ ಜಿಲ್ಲಾ ಸಹ ಚುನಾವಣಾಧಿಕಾರಿಯಾಗಿ ಐದು ಅಧ್ಯಕ್ಷರನ್ನು ನೇಮಕ ಮಾಡಿದ್ದೇನೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಟಿಂಕರ್ ಮಂಜಣ್ಣ,ಕಿಶೋರ್,ಎರ್ರಿಸ್ವಾಮಿ,ರಾಮಚಂದ್ರಪ್ಪ,ಅಣಜಿ ಗುಡ್ಡೇಶ್ ಉಪಸ್ಥಿತರಿದ್ದರು.