SUDDIKSHANA KANNADA NEWS/ DAVANAGERE/ DATE-26-05-2025
ಉತ್ತರ ಪ್ರದೇಶ: ತನ್ನ ಸಹೋದರಿಯ ಸಾವಿನಿಂದ ಆಘಾತಕ್ಕೊಳಗಾದ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ 25 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂಜಯ್ ಎಂದು ಗುರುತಿಸಲ್ಪಟ್ಟ ಯುವಕ ಐಟಿಐ ವಿದ್ಯಾರ್ಥಿ. 2013 ರಲ್ಲಿ ಆತನ ಸಹೋದರಿ ರಾಧಾಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ, 2015 ರಲ್ಲಿ ಆಕೆ ಅತ್ತೆ-ಮಾವಂದಿರು ಸುಟ್ಟು ಕೊಂದಿದ್ದಾರೆ ಎನ್ನಲಾಗಿದೆ.
ಅಂದಿನಿಂದ, ಈ ಯುವಕ ಆಘಾತಕ್ಕೊಳಗಾಗಿದ್ದ. ಕೋಣೆಯೊಳಗೆ ತನ್ನನ್ನು ತಾನೇ ಲಾಕ್ ಮಾಡಿಕೊಂಡು ಇರುತ್ತಿದ್ದ. ಹೆಚ್ಚು ಮಾತನಾಡುತ್ತಿರಲಿಲ್ಲ. ಹೊರಗೆ ಬರುತ್ತಿರಲಿಲ್ಲ. ಯಾರೊಟ್ಟಿಗೆ ಬೆರೆಯುತ್ತಿರಲಿಲ್ಲ. ಆದ್ರೆ, ರಾಧಾಳ ಸೀರೆ, ಆಭರಣ ಮತ್ತು ಮೇಕಪ್ ಧರಿಸಿ ನೇಣು ಬಿಗಿದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಸಂಜಯ್ ಕುಟುಂಬವು ಅವರ ಅಣ್ಣ ಧರ್ಮೇಂದ್ರ ಅವರ ವಿವಾಹ ಸಮಾರಂಭಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಆದರೆ, ಸಂಜಯ್ ಮದುವೆಗೆ ಹೋಗಲು ನಿರಾಕರಿಸಿ ಮನೆಯಲ್ಲೇ ಇದ್ದ. ಅಣ್ಣನು ಆತನಿಗೆ ಫೋನ್ ಮೂಲಕ ಕರೆ ಮಾಡಲು ಪ್ರಯತ್ನಿಸಿದರು. ಆದ್ರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಮನೆಗೆ ಹಿಂತಿರುಗಿದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಗೊತ್ತಾಯಿತು. ಏನೋ ತಪ್ಪಾಗಿದೆ ಎಂದು ಭಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದರು, ಅವರು ಬೀಗ ಒಡೆದು ನೋಡಿದಾಗ ಸಂಜಯ್ ಮೃತದೇಹ ಪತ್ತೆಯಾಗಿದೆ.
“ಅಟಾರ್ರಾ ಪೊಲೀಸ್ ಠಾಣೆ ಪ್ರದೇಶದ ಮನೆಯೊಂದರ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿತು. ಪೊಲೀಸ್ ತಂಡ ಸ್ಥಳಕ್ಕೆ ತಲುಪಿ, ಕೋಣೆಗೆ ಪ್ರವೇಶಿಸಿದಾಗ, ಸುಮಾರು 25 ವರ್ಷ ವಯಸ್ಸಿನ ಯುವಕನ ಮೃತದೇಹ ಕಂಡುಬಂದಿದೆ. ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮಹಿಳೆಯಂತೆ ಸೀರೆ, ಮಂಗಳಸೂತ್ರ ಮತ್ತು ಆಭರಣಗಳನ್ನು ಧರಿಸಿದ್ದರು” ಎಂದು ಡಿಎಸ್ಪಿ ಬಂಡಾ, ಪ್ರವೀಣ್ ಕುಮಾರ್ ಹೇಳಿದರು.
ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.