SUDDIKSHANA KANNADA NEWS/ DAVANAGERE/ DATE:27-11-2023
ದಾವಣಗೆರೆ: ಕೇಂದ್ರ ಸರ್ಕಾರದ ಯೋಜನೆಗಳಿಂದ ಹೊರಗುಳಿದವರನ್ನು ಗುರುತಿಸಿ ಅವರನ್ನು ಯೋಜನೆ ವ್ಯಾಪ್ತಿಗೆ ತರುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಜನ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿಯನ್ನು ದಾವಣಗೆರೆ ಜಿಲ್ಲೆಯ ಎಲ್ಲ 194 ಗ್ರಾಮ ಪಂಚಾಯತಿಗಳ 2 ಸಾವಿರಕ್ಕೂ ಅಧಿಕ ಬೂತ್ ಗಳಿಗೆ ತಲುಪಿಸುವ ಕೆಲಸವನ್ನು ಸಂಕಲ್ಪ ಯಾತ್ರೆ ಮೂಲಕ ಮಾಡಲಾಗುವುದು ಎಂದರು.
ಜನವರಿ 25 ರ ವರೆಗೆ ಸಂಕಲ್ಪ ಯಾತ್ರೆ ನಡೆಯಲಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಚಾರ ನಡೆಸಲಾಗುವುದು. ಆಯುಷ್ಯಾನ್ ಭಾರತ್, ಕೃಷಿ ಸಿಂಚಯಿನಿ, ಮಾತೃವಂದನಾ, ಸಾಯಿಲ್ ಹೆಲ್ತ್ ಕಾರ್ಡ್, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಪ್ರಧಾನಮಂತ್ರಿ ಸ್ವ ನಿಧಿ ಸೇರಿದಂತೆ ಕೇಂದ್ರ ಸರ್ಕಾರದ ಆರು ಸಚಿವಾಲಯದ ಮೂಲಕ 70 ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಯೋಜನೆಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸವಲತ್ತುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಲ್ಲದೇ ಯೋಜನೆಯಿಂದ ಹೊರಗೆ ಇರುವ ಜನರನ್ನು ಯೋಜನಾ ವ್ಯಾಪ್ತಿಗೆ ತರಬೇಕೆಂದು ಸೂಚಿಸಿದ ಅವರು, ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಆದರೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ದೊರೆತಿವೆ. ಈ ಮೂಲಕ ದೇಶದ 13 ಕೋಟಿಗೂ ಆಧಿಕ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯವರು ಗೆದ್ದು ಪ್ರಧಾನಿಯಾದರೆ ಈ ದೇಶದ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ಹೇಳಿದರು.
ಬಳಿಕ ಸಂಸದರು ಕೃಷಿ ಬಳಕೆಯ ಡ್ರೋನ್ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್, ನಬಾರ್ಡ್ ಅಧಿಕಾರಿ ರಶ್ಮಿರೇಖಾ, ತರಳಬಾಳು ಕೃಷಿ ವಿಜ್ಞಾನಿ ಡಾ.ದೇವರಾಜ್ ಉಪಸ್ಥಿತರಿದ್ದರು.
ನಂತರ ಪ್ರಚಾರ ವಾಹನ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಹಾಗೂ ಮುಸ್ಟೂರು ನ್ಯಾಮತಿ ತಾಲ್ಲೂಕಿನ ಗುಡ್ಡೆಹಳ್ಳಿ, ಕೆಂಚಿಕೊಪ್ಪ ಗ್ರಾಮಗಳಲ್ಲಿ ಪ್ರಚಾರಾಂದೋಲನಾ ನಡೆಸಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.