SUDDIKSHANA KANNADA NEWS/ DAVANAGERE/ DATE:25-12-2023
ದಾವಣಗೆರೆ: ಸೈದ್ದಾಂತಿಕವಾಗಿ ಬಿಜೆಪಿ ಟೀಕಿಸುತ್ತಿದ್ದವರು ಕೂಡ ವಾಜಪೇಯಿಯವರನ್ನು ವಿರೋಧಿಸುತ್ತಿರಲಿಲ್ಲ. ಇಂತಹವರೆಲ್ಲರ ಪಾಲಿಗೆ ವಾಜಪೇಯಿ ಅವರು ಅಜಾತ ಶತೃವಾಗಿದ್ದರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ಬಿ.ಜೆ.ಪಿ.ಯ ಮೃದು ಹಿಂದುತ್ವದ ಮುಖವಾಗಿದ್ದ ವಾಜಪೇಯಿಯವರು ಈ ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ತಿಳಿಸಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ದಿವಗಂತ ಅಟಲ್ ಬಿಹಾರಿ ವಾಜಪೇಯಿಯವರ 99ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಜಪೇಯಿ
ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮುತ್ಸದ್ದಿ ಆಡಳಿತಗಾರ, ಚತುರ ಮಾತುಗಾರ, ಕವಿ ಹೃದಯಿ, ಸ್ನೇಹಮಯಿ, ಅಜಾತ ಶತೃ ಹೀಗೆ ಏನೆಲ್ಲ ಪದಗಳನ್ನು ಬಳಸಿ ವರ್ಣಿಸಿದರೂ ಉತ್ಪೇಕ್ಷೆಯಾಗುವುದಿಲ್ಲ, 13 ದಿನ 13 ತಿಂಗಳು ದೇಶದ ಪ್ರಧಾನಿಯಾಗಿ ನಂತರ ಹಲವು ಪಕ್ಷಗಳನ್ನು ಕಟ್ಟಿಕೊಂಡು 5 ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡಿದ ಹೆಗ್ಗಳಿಕೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಲುತ್ತದೆ. ಅಲ್ಲಿಯವರೆಗೂ ಕಾಂಗ್ರೆಸೇತರ ಯಾವುದೇ ನಾಯಕ 5 ವರ್ಷಗಳ ಆಡಳಿತ ನೀಡಿದ ಉದಾಹರಣೆಯೇ ಇರಲಿಲ್ಲ. ಇಂದು ಭಾರತೀಯ ಜನತಾ ಪಕ್ಷ ಏನಾಗಿದೆಯೋ ಅದರ ಬೆಳವಣಿಗೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಎಂಬ ಮಹಾನ್ ನಾಯಕನ ಕೊಡುಗೆ ಸಾವಿರದಷ್ಟಿದೆ, ಬಿ.ಜೆ.ಪಿ. ಇಂದು ಇಡೀ ದೇಶಾದ್ಯಂತ ಹೆಮ್ಮರವಾಗಿ ಬೆಳೆದು ನಿಲ್ಲಲು ವಾಜಪೇಯಿ ಅವರು ಹಾಕಿದ ಭದ್ರ ಬುನಾದಿಯೇ ಕಾರಣ ಎಂದರೆ ಬಹುಶಃ ತಪ್ಪಾಗಲಾರದು ಎಂದು ವಾಜಪೇಯಿ ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.
1998 ರಿಂದ 2004ರವರೆಗೆ ಪ್ರಧಾನಿಯಾಗಿ ವಾಜಪೇಯಿಯವರು ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಮೈತ್ರಿ ರಾಜಕಾರಣದ ಒತ್ತಡ ಮತ್ತು ಸಂದಿಗ್ಧತೆಗಳನ್ನು ಸಂಭಾಳಿಸುತ್ತಲೆ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಅವರು ಹಿಂದೆ ಬೀಳಲಿಲ್ಲ ಪೋಕ್ರಾನ್ನಲ್ಲಿ ಪರಮಾಣು ಪರೀಕ್ಷೆ, ಸುವರ್ಣ ಚತುಷ್ಪಥ ಹೆದ್ದಾರಿ, ಗ್ರಾಮ ಸಡಕ್ ರಸ್ತೆಗಳು, ಸರ್ವ ಶಿಕ್ಷಣ ಅಭಿಯಾನ, ಹೊಸ ಟೆಲಿಕಾಂ ನೀತಿ ಸೇರಿದಂತೆ ಇತರೆ ಯೋಜನೆಗಳು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ತಳ ಸಮುದಾಯದ ಜನರಿಗೆ ನೆರವಾದವು. ವಾಜಪೇಯಿಯವರು ಇಂದು ನಮ್ಮನೆಲ್ಲ ಬಿಟ್ಟು ದೈಹಿಕವಾಗಿ ಅಗಲಿರಬಹುದು. ಆದರೆ ಅವರ ನೆನಪುಗಳು ಪ್ರತಿಯೊಬ್ಬರಲ್ಲಿ ಅಚ್ಚಳಿಯದೆ ಉಳಿದಿವೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೇಲ್ಲರೂ ಸಾಗೋಣ ಎಂದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ಶಾಸಕರಾದದ ಎಸ್.ವಿ. ರಾಮಚಂದ್ರ, ದೂಡಾ ಮಾಜಿ ಅಧ್ಯಕ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಮಂಜಾನಾಯ್ಕ, ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಹಿರಿಯ ಮುಖಂಡರಾದ ವೈ. ಮಲ್ಲೇಶ್, ಅಕ್ಕಿ ಪ್ರಭು, ಡಿ.ಸಿ.ಸಿ. ಬ್ಯಾಂಕ್ ಮಾಜಿ ನಿರ್ದೇಶಕ ನಾಗರಾಜಪ್ಪ ಕತ್ತಲಗೆರೆ, ಶೇಖರಪ್ಪ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.