SUDDIKSHANA KANNADA NEWS/ DAVANAGERE/ DATE:07-08-2023
ದಾವಣಗೆರೆ (Davanagere) : ನಾನು ಮಾಡಿರುವ ಆರೋಪ ಸುಳ್ಳು ಎಂದು ಸಾಬೀತುಪಡಿಸಿದರೆ ಪಾಲಿಕೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಉಮಾ ಪ್ರಕಾಶ್ ಅವರು, ಪಾಲಿಕೆಯ ಕಾಂಗ್ರೆಸ್ ಸದಸ್ಯರಿಗೆ ಸವಾಲು ಹಾಕಿದ್ದಾರೆ.
ನಾನು 2019ರಲ್ಲಿ ಮಹಾನಗರ ಪಾಲಿಕೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ನಂತರ ಬಿಜೆಪಿಗೆ ಬೆಂಬಲಿಸಿದ್ದರೂ ಸಹ 2020 ರ ಫೆಬ್ರವರಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಪ್ರಾರಂಭವಾದ ನಂತರ ನಡೆದ ಹಲವಾರು
ಸಾಮಾನ್ಯ ಸಭೆಗಳಲ್ಲಿ 2017- 2018 ರಲ್ಲಿ ನಡೆದ ಅಕ್ರಮ ಡೋರ್ ನಂಬರ್ ಗಳ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ನನ್ನ ವಿಷಯಕ್ಕೆ ನಿಮ್ಮ ಪಕ್ಷದ ಸದಸ್ಯರು ದನಿಗೂಡಿಸಿದ್ದಾರೆ. ಸಭೆಗಳಲ್ಲಿ ಆಯುಕ್ತರು ತನಿಖೆ ನಡೆಸಿ ಅಕ್ರಮ ಡೋರ್ ನಂಬರ್ ಗಳನ್ನು ರದ್ದುಪಡಿಸುವುದಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅದರಂತೆ ಉಪಯುಕ್ತರು ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:
ಸುದ್ದಿ ಕ್ಷಣದಲ್ಲಿ ಮಾತ್ರ Commissioner React:ಸರ್ಕಾರಿ ಭೂ ಕಬಳಿಕೆ ದೂರು ಬಂದಿದೆ, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ: ಆಯುಕ್ತೆ ರೇಣುಕಾ
ಬೇಕಾದರೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಕಲಾಪಗಳ ದಾಖಲೆಗಳನ್ನು ಪರಿಶೀಲಿಸಿ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರಂತೆ ಹಾಗಿದೆ ನಿಮ್ಮ ಹೇಳಿಕೆ. ನೀವು ಮತ್ತು ನಿಮ್ಮ ಸಹ ಸದಸ್ಯರು ಮಹಾನಗರ ಪಾಲಿಕೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿರುವುದನ್ನು ಪತ್ರಿಕಾ ಹೇಳಿಕೆ ಮೂಲಕ ನಾನು ಸ್ವಾಗತಿಸಿದ್ದೇನೆಯೇ ಹೊರತು ನಿಮ್ಮ ಪಕ್ಷದ ವಿರುದ್ಧ ಆರೋಪ ಮಾಡಿಲ್ಲ. ನಾನು ಹೇಳಿರುವುದು ಮಹಾನಗರ ಪಾಲಿಕೆಯ ಸಿಬ್ಬಂದಿ ಮಾಡಿರುವ ಅಕ್ರಮಗಳ ವಿಷಯವೇ ಹೊರೆತು ನಿಮ್ಮ ಪಕ್ಷದ ಮೇಲೂ ಅಲ್ಲ, ಯಾವುದೇ ಪಕ್ಷ ಆಡಳಿತದಲ್ಲಿದ್ದಾಗ ಅಕ್ರಮ ನಡೆದರೆ ಅದು ಅಕ್ರಮವೇ ಎಂದು ಹೇಳಿದ್ದಾರೆ.
ಅಕ್ರಮದ ಬಗ್ಗೆ 2018 ರಿಂದ 2023ರವರೆಗೆ ಯಾಕೆ ಸುಮ್ಮನಿದ್ದರು ಎಂಬುದಾಗಿ ಲೇವಡಿ ಮಾಡುತ್ತೀರಿ. ಆದರೆ ನಾನು ಸದಸ್ಯಳಾಗಿ ಆಯ್ಕೆಯಾದ ಮೇಲೆ ಆ ಭಾಗದ ಜನ ಒದಗಿಸಿದ ದಾಖಲೆಗಳ ಆಧಾರದ ಮೇಲೆ 2020 ರಿಂದಲೇ ಮಹಾನಗರ ಪಾಲಿಕೆಯ ಅಧಿಕಾರಿಗಳಲ್ಲಿ ಪ್ರಸ್ತಾಪಿಸುತ್ತಾ ಬಂದಿದ್ದೇನೆ. 32ನೇ ವಾರ್ಡಿನ ಆವರಗೆರೆ ಸರ್ವೆ ನಂಬರ್ 240 ರಿಂದ 244 ರಲ್ಲಿ ನಡೆದಿರುವ ಡೋರ್ ನಂಬರ್ ಗಳ ರದ್ದತಿ ಬಗ್ಗೆ 2023ರ ಜನವರಿ ತಿಂಗಳಲ್ಲಿ ಮಹಾನಗರ ಪಾಲಿಕೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿ ಅಕ್ರಮ ಡೋರ್ ನಂಬರ್ ಗಳನ್ನು ರದ್ದುಪಡಿಸುವುದಾಗಿ ಸಮಯ ನಿಗದಿ ಮಾಡಿ ಜಾಹೀರಾತು ನೀಡಲಾಗಿತ್ತು. ಈ ವಿಷಯದಲ್ಲಿ ನಾನು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ನಾನೇನು ಮಾತನಾಡಿದರೂ, ಹೇಳಿಕೆ ನೀಡಿದರೂ ದಾಖಲಾತಿ ಇಲ್ಲದೇ ಹೇಳುವುದಿಲ್ಲ. ನಾನು ಹೇಳಿರುವ ಅಕ್ರಮ 2017 ರಿಂದ 18ರ ಅವಧಿಯಲ್ಲಿ ನಡೆದಿರುವುದಾಗಿದೆ. ನನ್ನ ಆಪಾದನೆ ಸುಳ್ಳು ಎಂದು ನೀವು ಸಾಬೀತುಪಡಿಸಿದಲ್ಲಿ ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಿದ್ದ. ನನ್ನ ಹೇಳಿಕೆ ನಿಜವಾಗಿದ್ದರೆ ಬಯಲು ಜಾಗಕ್ಕೆ ನೀಡಿರುವ ಅಕ್ರಮ ಡೋರ್ ನಂಬರ್ ರದ್ದುಪಡಿಸಿ ಮಹಾನಗರ ಪಾಲಿಕೆಯ ವಶಕ್ಕೆ ಸದರಿ ಬಯಲು ಜಾಗವನ್ನು ಪಡೆಯಲು ನೀವು ಸೇರಿದಂತೆ ನಿಮ್ಮ ಪಕ್ಷದ ಆಡಳಿತ ಸಹಕಾರವಿರಲಿ ಎಂಬುದೇ ನನ್ನ ಆಶಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ.