SUDDIKSHANA KANNADA NEWS/ DAVANAGERE/ DATE:05-12-2023
ದಾವಣಗೆರೆ: ಭದ್ರಾ ನೀರಿನ ತಾಪತ್ರಯದ ನಡುವೆಯೂ ರೈತರು ಬಹಳ ಕಷ್ಟ ಪಟ್ಟು ಭತ್ತ ಬೆಳೆದಿದ್ದಾರೆ. ಆದರೆ ಭತ್ತದ ಖರೀದಿದಾರರ ಬೆಲೆ ನಿಯಂತ್ರಣ, ಕುತಂತ್ರಗಳಿಂದ ರೈತರು ಸಾಕಷ್ಟು ರೋಸಿ ಹೋಗಿದ್ದಾರೆ. ಆದ್ದರಿಂದ ಎಪಿಎಂಸಿ ಆಡಳಿತಾಧಿಕಾರಿಯಾಗಿರುವ ನೀವು ವ್ಯಾಪಾರಸ್ಥರ, ಖರೀದಿದಾರರ, ದಲ್ಲಾಲರ ಮತ್ತು ರೈತರ ಸಭೆ ಕರೆದು ಕೂಲಂಕಷವಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಪಾರದರ್ಶಕ ಮತ್ತು ನ್ಯಾಯಯುತ ವ್ಯಾಪಾರ ವಹಿವಾಟು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಒಕ್ಕೂಟವು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ವೇಮೆಂಟ್-ಪೇಮೆಂಟ್ ಅಂತ ಕಂಡಿಷನ್ ಮಾಡಿದ್ದರೂ ವಾರಗಟ್ಟಲೆ ಹಣ ನೀಡದೆ ಸತಾಯಿಸುತ್ತಾರೆ. ಇದು ಅಕ್ಷಮ್ಯ ಅಪರಾಧ. ಖರೀದಿದಾರರ ಇಂತಹ ಕುತಂತ್ರ ಧೋರಣೆ ಸಂಪೂರ್ಣ ನಿಲ್ಲಬೇಕು. ವೇಮೆಂಟ್-ಪೇಮೆಂಟ್ ಪದ್ಧತಿ ಬದಲು
ಲೋಡಿಂಗ್-ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು. ಲೋಡಿಂಗ್-ಪೇಮೆಂಟ್ ಅಥವಾ ಸ್ಪಾಟ್ ಪೇಮೆಂಟ್ ಪದ್ಧತಿ ಅಂದರೆ ಖರೀದಿಸಿದ ಭತ್ತ ಲೋಡ್ ಮಾಡಿದ ತಕ್ಷಣ ಚೀಲ ಒಂದಕ್ಕೆ 2 ಸಾವಿರ
ರೂಪಾಯಿಯಂತೆ ಎಷ್ಟು ಚೀಲ ತುಂಬಿಸಲಾಗಿರುತ್ತದೆಯೋ ಅಷ್ಟು ಚೀಲಗಳಿಗೆ ಲೆಕ್ಕ ಹಾಕಿ ಸ್ಥಳದಲ್ಲೇ ಹಣ ಕೊಡಬೇಕು.
ಲೋಡ್ ಲಾರಿಯನ್ನು ಮುಂದೆ ಹೋಗಲು ಬಿಡಬೇಕು. ಇನ್ನುಳಿದ ಹಣವನ್ನು ತೂಕವಾದ ನಂತರ ಲೆಕ್ಕ ಹಾಕಿ ಕೊಡಬೇಕು. ಖಾಲಿ ಚೀಲ ತೂಕಕ್ಕೆ 1 ಕೆ ಜಿ ಶ್ಯೂಟ್ ಜೊತೆಗೆ ಇನ್ನೊಂದು ಕೆ ಜಿ ಹೆಚ್ಚುವರಿಯಾಗಿ ಪಡೆಯುತ್ತಾರೆ. ಇದು ಸರಿಯಲ್ಲ.
ಮೋಸ. ಚೀಲದ ತೂಕಕ್ಕೆ ಮಾತ್ರ ಒಟ್ಟು ತೂಕದಲ್ಲಿ ಕಡಿತಗೊಳಿಸಿ ಲೆಕ್ಕ ಹಾಕಿ ಪೇಮೆಂಟ್ ಮಾಡಬೇಕು. ಹಮಾಲರ ಕೂಲಿ ಸಂಪೂರ್ಣ ಖರೀದಿದಾರರೆ ನೀಡಬೇಕು. ರೈತರ ಹಣದಲ್ಲಿ ಕಡಿತಗೊಳಿಸಬಾರದು. ಹಮಾಲರು ಸ್ಯಾಂಪಲ್ ಕಾಳು ಕೊಡಬೇಕು ಎಂದು ರೈತರನ್ನು ಒತ್ತಾಯಿಸಿ ಪೀಡಿಸಬಾರದು. ರೈತರು ಸಹ ಅವರ ಒತ್ತಾಯಕ್ಕೆ ಮಣಿದು ಒಂದು ಕಾಳನ್ನು ಸಹ ಕೊಡಬಾರದು.
ಡಿಸ್ಕೌಂಟ್ ಪದ್ಧತಿ ಕಡ್ಡಾಯವಾಗಿ ರದ್ದಾಗಬೇಕು. ಭತ್ತದ ಬೆಲೆ ಹೆಚ್ಚಾಗುತ್ತಿರುವುದರಿಂದ ರೈತರು ಒಂದು ಕಾಳನ್ನು ಉಳಿಸಿಕೊಳ್ಳಬೇಕು. ಖರೀದಿದಾರರ ಕುತಂತ್ರಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ವೇಳೆ ರೈತ ಒಕ್ಕೂಟದ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ವಾಸನ ಬಸವರಾಜ, ಅಣಬೇರು ಶಿವಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.