SUDDIKSHANA KANNADA NEWS/ DAVANAGERE/ DATE:20-08-2023
ದಾವಣಗೆರೆ: ಅಮೆರಿಕಾ(Americas)ದಲ್ಲಿ ದಾವಣಗೆರೆ ಮೂಲದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊರ ಬಿದ್ದಿದೆ. ಪತ್ನಿ ಹಾಗೂ ಪುತ್ರನ ಕೊಂದು ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಅಲ್ಲಿನ ಪೊಲೀಸರು ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಹೆಚ್. ಎನ್. ಯೋಗೇಶ್ ಹೊನ್ನಾಳ (37), ಪತ್ನಿ ಪ್ರತಿಭಾ ಹೊನ್ನಾಳ (35), ಪುತ್ರ ಯಶ್ ಹೊನ್ನಾಳ (6) ಆಗಸ್ಟ್ 15 ರಂದು ಮೃತಪಟ್ಟಿರಬಹುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಡೆತ್ ನೋಟ್ ಸಹ ಸಿಕ್ಕಿದ್ದು, ಅದರಲ್ಲಿ ಏನಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಬಾಲ್ಟಿಮೋರ್ ಕೌಂಟಿ ಪೊಲೀಸರು ಹೇಳಿದ್ದೇನು…?
ಅಮೆರಿಕಾ(Americas)ದ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರಾಥಮಿಕ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸರು, ಪತ್ನಿ ಹಾಗೂ ಪುತ್ರನನ್ನು ಕೊಂದು ಯೋಗೇಶ್ ಹೊನ್ನಾಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಪತ್ನಿ ಪ್ರತಿಭಾ ಹಾಗೂ ಪುತ್ರ ಯಶ್ ನನ್ನು ಕೊಂದ ಬಳಿಕ ಯೋಗೇಶ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಹೇಳಿದ್ದಾರೆ.
ಮೂವರು ಗುಂಡೇಟಿಗೆ ಬಲಿಯಾಗಿದ್ದಾರೆ. ಸಾವಿನ ಕಾರಣ ತಿಳಿಯಲು ಮುಖ್ಯ ವೈದ್ಯಕೀಯ ಅಧಿಕಾರಿ ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಆಗಸ್ಟ್ 15ರ ಮಂಗಳವಾರ ಸಂಜೆ ಕುಟುಂಬದವರನ್ನು ಕೊನೆಯದಾಗಿ ನೋಡಲಾಗಿತ್ತು ಎಂದು ಬಾಲ್ಟಿಮೋರ್ ಕೌಂಟಿ ಪೊಲೀಸ್ ವಕ್ತಾರ ಆಂಥೋನಿ ಶೆಲ್ಟನ್ ತಿಳಿಸಿದ್ದಾರೆ. ಆಗಸ್ಟ್ 18ರಂದು ಪೊಲೀಸರಿಗೆ ಮಾಹಿತಿ ದೊರೆತ ಕಾರಣ ಸ್ಥಳ ಪರಿಶೀಲನೆ ನಡೆಸಿದಾಗ ಮೂವರು ಸಾವಿಗೆ ಶರಣಾಗಿರುವುದಾಗಿ
ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ:
Ration Card Status: ಆಗಸ್ಟ್ 31ರೊಳಗೆ ಪಡಿತರ ಚೀಟಿ ಫಲಾನುಭವಿಗಳು ಈ ಕಾರ್ಯ ಪೂರ್ಣಗೊಳಿಸದಿದ್ದರೆ ಸ್ಥಗಿತವಾಗುತ್ತೆ ಹಣ, ಪಡಿತರ…!
ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರು. ಕಳೆದ 25 ವರ್ಷಗಳಿಂದ ನಗರದ ವಿದ್ಯಾನಗರದಲ್ಲಿ ಕುಟುಂಬವು ವಾಸವಿತ್ತು. ಕೆಲ ವರ್ಷಗಳ ಹಿಂದೆ ಯೋಗೇಶ್ ತಂದೆ ನಾಗರಾಜ್ ಮೃತಪಟ್ಟಿದ್ದರು. ಆದ್ರೆ,
ಈಗ ಮಗ, ಸೊಸೆ, ಮೊಮ್ಮಗನ ಸಾವು ಶೋಭಾ ಅವರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ.
ಅಮೆರಿಕಾ(Americas)ದ ರಾಯಭಾರ ಕಚೇರಿಗೆ ಈ- ಮೇಲ್ ಮೂಲಕ ಮಾಹಿತಿ ಕೊಡಲಾಗಿದೆ. ವಿದೇಶಾಂಗ ಸಚಿವಾಲಯಕ್ಕೂ ಮನವಿ ಮಾಡಲಾಗಿದೆ. ಮೃತದೇಹಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಯೋಗೇಶ್ ಅವರ ಕುಟುಂಬ ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರನ್ನು ಭೇಟಿ ಮಾಡಿ, ಆದಷ್ಟು ಬೇಗ ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮೂವರು ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಕುರಿತಂತೆ ಮಾಹಿತಿ ಸಿಕ್ಕಿದ್ದು, ಕುಟುಂಬದವರ ಮನವಿಯಂತೆ ಅಗತ್ಯ ರೀತಿಯಲ್ಲಿ ಕ್ರಮ ತೆಗೆದು ಕೊಳ್ಳಲಾಗುತ್ತಿದೆ. ವಿದೇಶಾಂಗ ಇಲಾಖೆ ಜೊತೆಗೆ ಸಂಪರ್ಕದಲ್ಲಿರುವುದಾಗಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದ್ದಾರೆ.
ಮೂರ್ನಾಲ್ಕು ದಿನಗಳು ಬೇಕು:
ಇನ್ನು ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಯಶ್ ಹೊನ್ನಾಳ ಮೃತದೇಹ ದಾವಣಗೆರೆಗೆ ಬರಲು ಮೂರ್ನಾಲ್ಕು ದಿನಗಳು ಆಗಬಹುದು. ಆದಷ್ಟು ಬೇಗ ಮೃತದೇಹಗಳನ್ನು ತರಿಸುವ ವ್ಯವಸ್ಥೆ ಮಾಡಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಯಾವ ಸಮಸ್ಯೆ ಇರಲಿಲ್ಲ:
ಯೋಗೇಶ್ ಕುಟುಂಬದಲ್ಲಿ ಯಾವ ಸಮಸ್ಯೆ ಇರಲಿಲ್ಲ. ಪತಿ, ಪತ್ನಿ, ಮಗು ಅನೋನ್ಯವಾಗಿದ್ದರು. ಯಾಕೆ ಹೀಗಾಯ್ತು ಅನ್ನೋದು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ತಾಯಿಗೆ ಕರೆ ಮಾಡಿ ಯೋಗೇಶ್ ಹೊನ್ನಾಳ ಮಾತನಾಡಿದ್ದರು. ಡಿಸೆಂಬರ್ ತಿಂಗಳಲ್ಲಿ ಕುಟುಂಬ ಸಮೇತ ಊರಿಗೆ ಬರುತ್ತೇನೆ. ಮನೆ ಕಟ್ಟಿಸಿದ್ದೀನಿ. ಇಲ್ಲಿಗೆ ಬಾ ಎಂದು ಕರೆದರೂ ಬಂದಿರಲಿಲ್ಲ. ಆಗಾಗ ಫೋನ್ ಮಾಡಿ ಮಾತನಾಡುತ್ತಿದ್ದ. ವಿಡಿಯೋ ಕರೆ ಮಾಡುತ್ತಿದ್ದ ಎಂದಿ ಶೋಭಾ ಹೊನ್ನಾಳ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಯೋಗೇಶ್ ಹೊನ್ನಾಳ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳು ಮನೆಗೆ ಧಾವಿಸುತ್ತಿದ್ದಾರೆ. ಶೋಭಾ ಹೊನ್ನಾಳ ಅವರಿಗೆ ಸಾಂತ್ವನದ ಜೊತೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮುದ್ದಾದ ಕುಟುಂಬ
ದುರಂತದಲ್ಲಿ ಅಂತ್ಯವಾಗಿದ್ದು ವಿಪರ್ಯಾಸವೇ ಸರಿ. ಆತ್ಮಹತ್ಯೆ ಮಾಡಿಕೊಳ್ಳುವಂಥದ್ದೂ ಏನಾಗಿತ್ತು ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.