SUDDIKSHANA KANNADA NEWS/ DAVANAGERE/ DATE-06-06-2025
ಭೀಮಸಮುದ್ರ: ಆಳುವ ಸರ್ಕಾರದ ಕೆಲಸ ಜನಪರ ಕಾರ್ಯಗಳನ್ನು ಕೈಗೊಳ್ಳುವುದು. ಆದರೆ ರಾಜ್ಯ ಸರ್ಕಾರ ಉದ್ಯಮ, ದುಡ್ಡು ಮಾಡುವ ಕ್ಷೇತ್ರವಾಗಿರುವ ಐಪಿಎಲ್ ಆಟಗಾರರಿಗೆ ಸನ್ಮಾನ ಸಮಾರಂಭ ಆಯೋಜಿಸುವ ಮೂಲಕ ಅನೇಕ ಮುಗ್ಧ ಜನರ ಸಾವಿಗೆ ಕಾರಣವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ದೂರಿದ್ದಾರೆ.
ರಣಜಿ, ವಿಶ್ವಕಪ್ ಸೇರಿ ಅನೇಕ ಪಂದ್ಯಾವಳಿಗಳು ರಾಜ್ಯ, ದೇಶವನ್ನು ಪ್ರತಿನಿಧಿಸುತ್ತಿದ್ದವು. ಆದರೆ 18 ವರ್ಷದ ಹಿಂದೆ ವಿಜಯಮಲ್ಯ ಆರಂಭಿಸಿದ ಐಪಿಎಲ್ ಪಂದ್ಯಾವಳಿ ಪೂರ್ಣ ಪ್ರಮಾಣದಲ್ಲಿ ಹಣ ಮಾಡುವ ದಂಧೆ ಆಗಿದೆ. ಇದರಲ್ಲಿ ಆಟವಾಡುವ ಪಟುಗಳಿಗೆ ಭಾಷೆ, ಪ್ರಾದೇಶಿಕ, ನಾಡು-ನುಡಿ ಬದ್ಧತೆಯೇ ಇರುವುದಿಲ್ಲ. ಯಾರೂ ಹೆಚ್ಚು ಹಣಕ್ಕೆ ಕೂಗುತ್ತಾರೆ ಅವರ ರಾಜ್ಯದ ಪರ ಆಟವಾಡುತ್ತಾರೆ. ಇಂತಹ ಆಟಕ್ಕೆ ಸರ್ಕಾರಗಳು ಮನ್ನಣೆ ನೀಡಬಾರದು ಎಂದಿದ್ದಾರೆ.
ಐಪಿಎಲ್ ಖಾಸಗಿ ಕ್ಷೇತ್ರದವರು ಆಟವಾಡಿಸುವ ಕ್ರಿಕೆಟ್ ಪಂದ್ಯಾವಳಿ ಆಗಿದೆ. ಅವರ ಗೆಲುವು-ಸೋಲು ಅನೇಕ ಸಂಶಯಗಳನ್ನು ಹುಟ್ಟುಹಾಕುತ್ತದೆ. ಅದರಲ್ಲೂ ಪ್ರತಿವರ್ಷ ಐಪಿಎಲ್ ಸಂದರ್ಭ ನಾಡಿನಲ್ಲಿ ಕೋಟ್ಯಾಂತರ ಮಂದಿ ಜೂಜು ಚಟಕ್ಕೆ ಒಳಗಾಗಿ ಬೀದಿಪಾಲಾಗುತ್ತಿದ್ದಾರೆ. ಅದರಲ್ಲೂ ಹಳ್ಳಿ ಹುಡುಗರು ಐಪಿಎಲ್ ಜೂಜು ಆಟಕ್ಕೆ ಆಕರ್ಷಣೆಗೆ ಒಳಗಾಗಿ ಕುಟುಂಬವನ್ನೇ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದೊಂದು ಶ್ರೀಮಂತರು ಬಂಡವಾಳ ಹೂಡಿಕೆ ಮಾಡಿ, ಹತ್ತು ಪಟ್ಟು ಲಾಭ ಗಳಿಸುವ ಕ್ಷೇತ್ರವಾಗಿದೆ. ಇದಕ್ಕೆ ಬಲಿಯಾಗುವವರು ಹಳ್ಳಿ, ಪಟ್ಟಣ, ನಗರ ಪ್ರದೇಶದ ಯುವಪೀಳಿಗೆ. ಈ ಸಂಬಂಧ ಸರ್ವೇ ಕಾರ್ಯ ನಡೆಸಿದರೇ ಸತ್ಯ ಹೊರಗಡೆ ಬೀಳಲಿದೆ. ಈ ಪಂದ್ಯಾವಳಿಯಿಂದ ಇಲ್ಲಿಯವರೆಗೂ ಎಷ್ಟೂ ಮಂದಿ ಆಸ್ತಿ ಜೊತೆಗೆ ಬದುಕು ಕಳೆದುಕೊಂಡಿದ್ದಾರೆ ಎಂಬ ಅಂಕಿ-ಅಂಶ ಲಭಿಸಲಿದೆ ಎಂದಿದ್ದಾರೆ.
ಈಗಿದ್ದೂ ಐಪಿಎಲ್ ಪಂದ್ಯಾವಳಿಯನ್ನು ವಿಜೃಂಭಿಸುವುದು, ಆ ಆಟಕ್ಕೆ ಸರ್ಕಾರವೇ ಮುಂದೆ ನಿಂತು ಪ್ರೋತ್ಸಾಹಿಸುವುದು ಪರೋಕ್ಷವಾಗಿ ಯುವ ಪೀಳಿಗೆಯ ಬದುಕನ್ನು ಕಿತ್ತುಕೊಂಡಂತೆ. ಐಪಿಎಲ್ ಪ್ರಸ್ತುತ ಆಟವಾಗಿ ಉಳಿದಿಲ್ಲ. ಅದೊಂದು ಉದ್ಯಮ ಕ್ಷೇತ್ರವಷ್ಟೇ ಅಲ್ಲದೆ ಜೂಜು ಅಡ್ಡೆಯಾಗಿ ಬೇರೂರಿದೆ. ಆದ್ದರಿಂದ ಇಂತಹ ಆಟಕ್ಕೆ ಸರ್ಕಾರ ಪ್ರೋತ್ಸಾಹಿಸಬಾರದು ಎಂದಿದ್ದಾರೆ.
ಸರ್ಕಾರಗಳು ಮಾಡುವ ಕೆಲಸ ಬಹಳಷ್ಟು ಇದೆ. ಬಿಪಿಎಲ್ ಕಾರ್ಡುದಾರರ ಬದುಕನ್ನು ಸುಧಾರಿಸುವ ರೀತಿ ಕಾರ್ಯನಿರ್ವಹಿಸಬೇಕಾದ ಸರ್ಕಾರವೇ ಐಪಿಎಲ್ ಪರ ನಿಂತರೇ ಹೇಗೆ. ಈ ಕುರಿತು ಆತ್ಮವಲೋಕನ ಮಾಡಿಕೊಳ್ಳಬೇಕು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಗೆ ಆಯೋಜಕರ ಜೊತೆಗ ಸರ್ಕಾರ, ಪೊಲೀಸರೇ ನೇರ ಹೊಣೆ ಹೊರಬೇಕು. ತಕ್ಷಣ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ಆಯೋಜಕರಿಂದ ದಂಡದ ರೂಪದಲ್ಲಿ ಹೆಚ್ಚು ಹಣ ವಸೂಲಿ ಮಾಡಿ ಪರಿಹಾರವಾಗಿ ವಿತರಿಸಬೇಕು. ಮುಖ್ಯವಾಗಿ ಆಯೋಜಿಸಿದ ಪ್ರಮುಖರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ತನ್ನ ಜವಾಬ್ದಾರಿ ಅರಿತು ಜನರ ಪರವಾಗಿ ಯೋಜನೆಗಳನ್ನು ರೂಪಿಸಬೇಕು. ಇಂತಹ ಯಾವುದೇ ಕಾರ್ಯಕ್ರಮಗಳಿಗೆ ನೇರ, ಪರೋಕ್ಷವಾಗಿ ಬೆಂಬಲವಾಗಿ ನಿಲ್ಲಬಾರದು. ತಕ್ಷಣ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಜೊತೆಗೆ ತನ್ನ ತಪ್ಪಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.