SUDDIKSHANA KANNADA NEWS/ DAVANAGERE/ DATE-23-04-2025
ದಾವಣಗೆರೆ: ಪಹಲ್ಲಾಮ್ ನಲ್ಲಿ ಉಗ್ರರು ಪ್ರವಾಸಿಗರಿಗೆ ಗುಂಡಿಕ್ಕಿ ಕೊಂದಿರುವುದು ಪೈಶಾಚಿಕ ಕೃತ್ಯ. ಈ ಘೋರ ದುರಂತಕ್ಕೆ ಕಾರಣರಾದ ಉಗ್ರರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ತೆಲಂಗಾಣ ಯುವ ಕಾಂಗ್ರೆಸ್ ಉಸ್ತುವಾರಿ, ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಸ್ವಿಡ್ಜರ್ಲೆಂಡ್ ಎಂದೇ ಕರೆಯಲ್ಪಡುವ ಪಹಲ್ಲಾಮ್ ನಲ್ಲಿ ನರಮೇಧ ಮಾಡಿರುವ ಉಗ್ರರಿಗೆ ಕೇಂದ್ರ ಸರ್ಕಾರವು ತಕ್ಕ ಪಾಠ ಕಲಿಸಬೇಕು. ಭಯೋತ್ಪಾದನೆ ಮಟ್ಟ ಹಾಕಲು ಕಠಿಣ
ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಘೋರ ದುರಂತ ಕ್ಷಮಿಸಲು ಸಾಧ್ಯವಾಗದ್ದು. ಉಗ್ರರ ಗುಂಡಿಗೆ ಕರ್ನಾಟಕದ ಮೂವರು ಬಲಿಯಾಗಿದ್ದಾರೆ. ಅದರಂತೆ 26 ಮಂದಿ ಸಾವನ್ನಪ್ಪಿದ್ದು, ಆ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಪ್ರಾರ್ಥಿಸಿದ್ದಾರೆ.
ಪಹಲ್ಲಾಂವ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೆರಳಿದ್ದು, ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ. ಕನ್ನಡಿಗರನ್ನು ಸುರಕ್ಷಿತವಾಗಿ ತವರಿಗೆ ವಾಪಸ್ ಕರೆದುಕೊಂಡು ಬರಲು ಯತ್ನಿಸುತ್ತಿದ್ದಾರೆ. ಅತ್ಯಂತ ವಿಷಾದಕರ, ದುಃಖಕರ ಘಟನೆ ಆಗಿದ್ದು, ಇದು ಮರುಕಳಿಸದಂತೆ ಎಚ್ಚರ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.