SUDDIKSHANA KANNADA NEWS/ DAVANAGERE/ DATE:01_08_2025
ದಾವಣಗೆರೆ (Davanagere): ನಗರದ ಪಿ ಬಿ ರಸ್ತೆಯ ರೇಣುಕಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳದ “ಖಾದಿ ಸಂಭ್ರಮ” ಮೇಳವನ್ನು ಆಗಸ್ಟ್ 1 ರಿಂದ 10 ರವರೆಗೆ ಆಯೋಜಿಸಲಾಗಿದೆ.
READ ALSO THIS STORY: ಹೆಚ್ಚಿನ ಬೆಲೆಗೆ ಯೂರಿಯಾ ಮಾರಿದರೆ ಮಾರಾಟಗಾರರ ಲೈಸೆನ್ಸ್ ರದ್ದು: ಪ್ರತಿ ರೈತರಿಗೆ ಎರಡು ಚೀಲವಷ್ಟೇ!
ಮೇಳದಲ್ಲಿ ಒಟ್ಟು 64 ಸ್ಟಾಲ್ಗಳನ್ನು ನಿರ್ಮಿಸಿಲಾಗಿದ್ದು, ಅದರಲ್ಲಿ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ತಯಾರಿಸಿದ ಖಾದಿ ಬಟ್ಟೆ, ಚನ್ನಪಟ್ಟಣದ ಗೊಂಬೆ ಆಟಿಕೆ, ಲೆದರ್ ಶೂ, ಕಾಶ್ಮೀರ ಶಾಲು, ಬಿಹಾರದ ಶರ್ಟ್, ಮಹಿಳೆಯರ ಮನಸೂರೆಗೊಳ್ಳುವಂತಹ ಸಿದ್ದ ಉಡುಪು, ಗೃಹೋಪಯೋಗಿ ವಸ್ತುಗಳು, ಗ್ರಾಮೀಣ ಕುಂಬಾರಿಕೆಯ ಕುಶಲ ವಸ್ತುಗಳು, ಸ್ವ-ಸಹಾಯ ಸಂಘದ ಸದಸ್ಯರು ತಯಾರಿಸಿದ ಆಹಾರದ ಸಿಹಿ ತಿನಿಸು ಮತ್ತು ಖಾದ್ಯಗಳು, ಆಯುರ್ವೇದಿಕ್ ಔಷಧಿ, ನವೀನ ಶೈಲಿಯ ಅರಳೆ ಖಾದಿ, ರೇಷ್ಮೇ ಖಾದಿ, ಉಣ್ಣೆಬಟ್ಟೆ, ಖಾದಿ ಪಾಲಿವಸ್ತ್ರ, ಯುವ ಪೀಳಿಗೆಯ ಮನಮೆಚ್ಚುವ ಮೋಹಕ ಖಾದಿ ಡಿಸೈನರ್ ಉಡುಪುಗಳು, ಶರ್ಟ್, ಕುರ್ತಾ, ಗ್ರಾಮೀಣ ಗುಡಿಕೈಗಾರಿಕೆಯಿಂದ ತಯಾರಿಸಿದ ಮರದ ಕೆತ್ತನೆಯ ವಸ್ತುಗಳು ಮತ್ತು ಆಕರ್ಷಣೆಯ ಆಟಿಕೆಗಳು ಹಾಗೂ ಬ್ಯಾಂಕ್ಗಳಲ್ಲಿ ಸಿಗುವ ಸಾಲ, ಸೌಲಭ್ಯಗಳ ಮಾಹಿತಿ, ಅಗತ್ಯ ವಸ್ತುಗಳ ಕುರಿತು ಬೃಹತ್ ಮೇಳ ಆಯೋಜಿಸಲಾಗಿದೆ.
ಗುಣಮಟ್ಟದ ಖಾತರಿಗೆ ಖಾದಿ ಅಭಿವೃದ್ಧಿ ನಿಗಮ ಮಂಡಳಿ ಸಾಕ್ಷಿಯಾಗಿದೆ. ಸಾರ್ವಜನಿಕರು, ಗ್ರಾಹಕರು ರೇಣುಕಾ ಮಂದಿರದಲ್ಲಿನ ಖಾದಿ ಮೇಳಕ್ಕೆ ಬೇಟಿ ನೀಡಿ ವೀಕ್ಷಿಸಿ, ಅಗತ್ಯ ವೈವಿಧ್ಯಮಯ ವಸ್ತುಗಳನ್ನು ಖರೀದಿಸಬಹುದಾಗಿದೆ.
ಶಾಸಕರು ಹಾಗೂ ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ಬಸನಗೌಡ ತುರುವಿಹಾಳ್ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಖಾದಿ ಉತ್ಪನ್ನ ಗಾಂಧೀಜಿ ಅವರ ಕೊಡುಗೆ. ಖಾದಿ ಹಿತಾನುಭವ ನೀಡುವ ಬಟ್ಟೆ. ಈಗಾಗಲೇ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮೂರು ತಿಂಗಳಲ್ಲಿ ಆರು ಜಿಲ್ಲೆಯಲ್ಲಿ ಪ್ರದರ್ಶನ ಮಾಡಲಾಗಿದೆ. ಈ ವಸ್ತುಪ್ರದರ್ಶನ ಬೆಂಗಳೂರಿಗೆ ಮಾತ್ರ ಸೀಮಿತ ಆಗುವುದು ಬೇಡ ಎಂಬ ಉದ್ದೇಶದಿಂದ ಕಳೆದ ವರ್ಷ ನಾಲ್ಕು ಜಿಲ್ಲೆಯಲ್ಲಿ ಮೇಳ ಮಾಡಲಾಗಿತ್ತು. ಇನ್ನೂ ಐದು ಜಿಲ್ಲೆಯಲ್ಲಿ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ. ಜನರಿಗೆ ಈ ಬಗ್ಗೆ ಮತ್ತುಷ್ಟು ಅರಿವು ಮೂಡಿಸುವ ಅಗತ್ಯ ಇದೆ. ಮೇಳದಲ್ಲಿ ಖರೀದಿಸುವ ವಸ್ತುಗಳ ಮೇಲೆ ಶೇ 25ರಷ್ಟು ರಿಯಾಯಿತಿ ಯುವಕರು ಸಹ ಖಾದಿಯನ್ನು ಹೆಚ್ಚು ಬಳಕೆ ಮಾಡಬೇಕು ಎಂದ ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಖಾದಿ ಬಟ್ಟೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಬಟ್ಟೆ ಬಳಕೆ ಮಾಡುವುದರಿಂದ ಇದನ್ನೇ ನಂಬಿದ ನೇಕಾರರ ಬದುಕಿಗೆ ಅನುಕೂಲ ಆಗಲಿದೆ. ಇದಕ್ಕೆ ಕೈಮಗ್ಗದಲ್ಲಿ ತಯಾರಿಸಿದ ಬಟ್ಟೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒತ್ತು ನೀಡುತ್ತಿವೆ ಎಂದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಖಾದಿ ವಸ್ತು ಪ್ರದರ್ಶನ ಮಾಡಿದ್ದು ಅನುಕೂಲಕರ. ಇದನ್ನು ಜಿಲ್ಲೆಯ ಎಲ್ಲಾ ಗ್ರಾಹಕರು, ಸಾರ್ವಜನಿಕರು ಬಳಸಬೇಕು. ನೇಕಾರರು ಬದುಕು ಕಟ್ಟಿಕೊಳ್ಳುವುದು ನೇಕಾರಿಕೆ ಮೂಲಕ. ಹಾಗಾಗಿ ಖಾದಿ ಬಟ್ಟೆ, ಇನ್ನಿತರೆ ಅಗತ್ಯ ವಸ್ತುಗಳನ್ನು ಬಳಸುವುದರಿಂದ ಅವರ ಬದುಕು ಕೂಡ ಹಸನಾಗುತ್ತದೆ. ಜನರು ಈ ಬಟ್ಟೆ ಬಳಕೆ ಮಾಡಬೇಕು. ಮೈಸೂರು ಸಿಲ್ಕ್, ಬೇರೆ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಜನರ ಕೈಗೆಟಕುವ ದರದಲ್ಲಿ ಬಟ್ಟೆ ಸಿಗುವ ಸಾಧ್ಯತೆ ಇದೆ ಎಂದರು.
ಈ ವೇಳೆ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಖಾದಿ ಮಂಡಳಿಯ ಸಿಇಓ ನಟೇಶ್, ಉಪಮುಖ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್, ಜಿಲ್ಲಾ ಖಾದಿ ಮತ್ತು ಗ್ರಾಮೋದೋಗ ಅಧಿಕಾರಿ ಚಂದ್ರಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.