ಸಂಗಾರೆಡ್ಡಿ (ತೆಲಂಗಾಣ): ಗ್ರಾಹಕರ ಸೋಗಿನಲ್ಲಿ ಆಭರಣ ಮಳಿಗೆಗೆ ಬಂದ ಖದೀಮರ ತಂಡವೊಂದು ಅಂಗಡಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಬಸವನ ಕಾಲದ 7 ತೊಲ (ಸುಮಾರು 70 ಗ್ರಾಂ) ತೂಕದ ಚಿನ್ನದ ಹಾರವನ್ನು ಕದ್ದೊಯ್ದಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಝಹೀರಾಬಾದ್ ಪಟ್ಟಣದಲ್ಲಿ ನಡೆದಿದೆ.
ನಡೆದಿದ್ದು ಏನು?
ಭಾನುವಾರ ಝಹೀರಾಬಾದ್ನ ಪ್ರಸಿದ್ಧ ಚಿನ್ನದ ಮಳಿಗೆಗೆ ಬುರ್ಖಾ ಧರಿಸಿದ್ದ ಮೂವರು ಮಹಿಳೆಯರು ಹಾಗೂ ಟೋಪಿ ಧರಿಸಿದ್ದ ಓರ್ವ ವ್ಯಕ್ತಿ ಗ್ರಾಹಕರಂತೆ ಆಗಮಿಸಿದ್ದಾರೆ. ನಗನಾಣ್ಯಗಳನ್ನು ತೋರಿಸುವಂತೆ ಸಿಬ್ಬಂದಿಗೆ ಕೋರಿದ್ದಾರೆ. ಸಿಬ್ಬಂದಿ ಅವರಿಗೆ ಆಭರಣಗಳನ್ನು ತೋರಿಸುತ್ತಿದ್ದಂತೆ, ಕಳ್ಳರ ತಂಡವು ಚಾಣಾಕ್ಷತನದಿಂದ ಸಿಬ್ಬಂದಿಯ ಗಮನ ಬೇರೆಡೆಗೆ ಸೆಳೆದಿದೆ. ಇದೇ ವೇಳೆ ಬೆಲೆಬಾಳುವ ಚಿನ್ನದ ಹಾರವನ್ನು ಎಗರಿಸಿ, ಯಾರಿಗೆ ಸಂಶಯ ಬರದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸಿಸಿಟಿವಿ ಆಧರಿಸಿ ತನಿಖೆ ತೀವ್ರ:
ಮಳಿಗೆಯಲ್ಲಿ ಚಿನ್ನದ ಹಾರ ನಾಪತ್ತೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮಳಿಗೆ ಹಾಗೂ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಹಿಂದೆ ತಾಂಡೂರು (Tandur) ಪಟ್ಟಣದಲ್ಲೂ ಇದೇ ಮಾದರಿಯ ಕಳ್ಳತನ ನಡೆದಿದ್ದು, ಎರಡೂ ಪ್ರಕರಣಗಳ ನಡುವೆ ಏನಾದರೂ ಸಂಬಂಧವಿದೆಯೇ ಅಥವಾ ಇದೊಂದು ಸಂಘಟಿತ ಅಂತರ್-ರಾಜ್ಯ ಕಳ್ಳರ ಗ್ಯಾಂಗ್ನ ಕೃತ್ಯವೇ ಎಂಬ ಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯ ಚಿನ್ನಾಭರಣ ವರ್ತಕರು ಜಾಗರೂಕರಾಗಿರಲು ಮತ್ತು ಸೂಕ್ತ ಭದ್ರತಾ ಕ್ರಮಗಳನ್ನು ವಹಿಸಲು ಪೊಲೀಸರು ಸೂಚಿಸಿದ್ದಾರೆ.





Leave a comment