ಖಮ್ಮಂ / ಸೂರ್ಯಾಪೇಟೆ: ತೆಲಂಗಾಣದ ಸೂರ್ಯಾಪೇಟೆ-ಖಮ್ಮಂ ರಾಷ್ಟ್ರೀಯ ಹೆದ್ದಾರಿಯ પಿಲ್ಲಲಮರ್ರಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನ್ಯೂರೋಸರ್ಜನ್ (ನರರೋಗ ತಜ್ಞ) ಡಾ. ಕಸಾಕುರ್ತಿ ಜಗದೀಶ್ (೪೫) ಅವರು ಕಾರಿನಲ್ಲಿಯೇ ಸಜೀವ ದಹನಗೊಂಡ ದುರಂತ ಘಟನೆ ನಡೆದಿದೆ.
ಘಟನೆಯ ವಿವರ: ಖಮ್ಮಂನ ಮಮತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನರರೋಗ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಜಗದೀಶ್ ಅವರು ತಮ್ಮ ವೋಲ್ವೋ ಕಾರಿನಲ್ಲಿ ಹೈದರಾಬಾದ್ನಲ್ಲಿರುವ ಕುಟುಂಬದವರನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದರು. ಭಾನುವಾರ ಬೆಳಿಗ್ಗೆ ಸುಮಾರು 7.15 ರ ಸುಮಾರಿಗೆ, ರಾಷ್ಟ್ರೀಯ ಹೆದ್ದಾರಿ NH365BB ಯಲ್ಲಿ ಕಾರು ಚಲಾಯಿಸುತ್ತಿದ್ದಾಗ, ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ (ಡಿವೈಡರ್) ಬಲವಾಗಿ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಸಂಪೂರ್ಣ ವಾಹನಕ್ಕೆ ವ್ಯಾಪಿಸಿದೆ. ಕಾರಿನ ಡೋರ್ಗಳು ಲಾಕ್ ಆಗಿದ್ದರಿಂದ ಡಾ. ಜಗದೀಶ್ ಅವರು ಒಳಗಿನಿಂದ ಹೊರಬರಲಾಗದೆ ಕಾರಿನೊಳಗಡೆಯೇ ಸಿಲುಕಿಕೊಂಡರು. ಸ್ಥಳೀಯರು ಹಾಗೂ ಹಾದಿಹೋಕರು ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರಾದರೂ, ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಭಸ್ಮವಾಗಿತ್ತು.
ಪೊಲೀಸ್ ತನಿಖೆ: ಸುದ್ದಿ ತಿಳಿದ ತಕ್ಷಣ ಸೂರ್ಯಾಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಿದ್ರೆಯ ಕೊರತೆಯಿಂದಾಗಿ ವೈದ್ಯರು ಚಾಲನೆಯ ವೇಳೆ ತೂಕಡಿಸಿರಬಹುದು, ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮೃತರ ಗುರುತನ್ನು ಪತ್ತೆ ಹಚ್ಚಲಾಯಿತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೂರ್ಯಾಪೇಟೆ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವೈದ್ಯರ ಅಕಾಲಿಕ ಮರಣಕ್ಕೆ ತೆಲಂಗಾಣದ ವೈದ್ಯಕೀಯ ಕ್ಷೇತ್ರ ಹಾಗೂ ಮಾಜಿ ಸಚಿವ ಪುವ್ವಾಡ ಅಜಯ್ ಕುಮಾರ್ ಕಂಬನಿ ಮಿಡಿದಿದ್ದಾರೆ.





Leave a comment