SUDDIKSHANA KANNADA NEWS/ DAVANAGERE/ DATE:11-01-2025
ದಾವಣಗೆರೆ: ಸಮಯ ಸಿಕ್ಕಾಗ ಸಂಸತ್ ನಲ್ಲಿ ಬೇರೆ ರಾಜ್ಯದ ಸಂಸದರಿಗೆ ಕನ್ನಡ ಭಾಷೆಯನ್ನು ಕಲಿಸುವ ಪ್ರಯತ್ನ ಮಾಡುತ್ತಿರುವೆ. ಕನ್ನಡವನ್ನು ಉಳಿಸಿ ಬೆಳೆಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ನಾವು ಪಣ ತೊಟ್ಟಿದ್ದೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಜಗಳೂರು ತಾಲ್ಲೂಕಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 14 ನೇ ಜಿಲ್ಲಾ ಸಮ್ಮೇಳನ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಬೇರೆ ರಾಜ್ಯದಿಂದ ವರ್ಗಾವಣೆಯಾಗಿ ಬಂದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಕನ್ನಡ ಭಾಷೆಯನ್ನು ಕಲಿಯುವರು ಇದಕ್ಕೆ ಉದಾಹರಣೆ ಎಂದರೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು. ಕಥೆ, ಕವನ, ಕಾದಂಬರಿಗಳನ್ನು ಅವರು ಕನ್ನಡದಲ್ಲಿ ರಚಿಸುವುದರ ಜತೆಗೆ ಕನ್ನಡದ ಪ್ರೇಮವನ್ನು ಮೆರಿದ್ದಾರೆ ಎಂದರು.
ಕೊಂಡುಕುರಿ ಧಾಮ, ಕಣ್ವಾಕುಪ್ಪೆ ಗವಿಮಠವಿರುವ ಜಗಳೂರು ಕ್ಷೇತ್ರವು ಅಕ್ಷರ ಜಾತ್ರೆಯ ಕಾರ್ಯಕ್ರಮದ ಮೂಲಕ ಮತ್ತಷ್ಟು ಪ್ರವಾಸಿಯಾಗಿದೆ. ಜಗಳೂರು ಪ್ರಾಕೃತಿಕ ಸೌಂದರ್ಯ ಮತ್ತು ಶೈಕ್ಷಣಿಕ ಪ್ರಗತಿಯೊಂದಿಗೆ ಕಂಗೊಳಿಸುತ್ತಿದೆ. ಬರಗಾಲದ ನಾಡು ಎಂದು ಹೆಸರಾಗಿದ್ದ ಈ ಕ್ಷೇತ್ರದಲ್ಲಿ ಸಾಂಸ್ಕೃತಿಕ ಹಾಗೂ ಇತರೆ ಕಾರ್ಯಕ್ರಮಗಳ ಮೂಲಕ ಜಗಳೂರು ಕಣ್ಮಣ ಸೆಳೆಯುತ್ತಿದೆ ಎಂದ ಸಂಸದರು, ಸಮ್ಮೇಳನ ಅಧ್ಯಕ್ಷರು ಮೂರು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕೃತಿಗಳನ್ನು ಬರೆದಿದ್ದಾರೆ. ಮಾನವ ಬಂಧುತ್ವದ ರಾಜ್ಯ ಸಂಚಾಲಕರಾಗಿ, ಕನ್ನಡ ಭಾಷಾ ಪ್ರವರ್ತಕರಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೃತಿಯನ್ನು ಬರೆದು ಸಾಮಾಜಿಕ ಚಿಂತನೆಗೆ ವೈಜ್ಞಾನಿಕ ಪ್ರಭುದ್ಧತೆಯನ್ನು ಮೆರೆದಿದ್ದಾರೆ ಎಂದರು.
ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಕನ್ನಡತನ ಉಳಿದಿದ್ದು ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆ ಜಿಲ್ಲೆಯಲ್ಲಿ ನಡೆಸಲು ಎಲ್ಲಾ ಕನ್ನಡ ಮನಸುಗಳು ನಿರ್ಧರಿಸಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲಾ ಕನ್ನಡ ಅಭಿಮಾನಿಗಳು ಮನವಿಯನ್ನು ಸಲ್ಲಿಸಿದ್ದೇವೆ. ನಾವು ಕೂಡ ನಿಮ್ಮ ಜೊತೆಯಾಗಿ ಇರುತ್ತೇವೆ ಎಂದು ತಿಳಿಸಿದ ಸಂಸದರು, ಸಮ್ಮೇಳನ ಕಾರ್ಯಕ್ರಮ ಕೇವಲ ವೇದಿಕೆ ಕಾರ್ಯಕ್ರಮ ಆಗಬಾರದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೇಗೆ ಕನ್ನಡವನ್ನು ಬೆಳೆಸಬೇಕು ಎಂಬುದರ ಬಗ್ಗೆ ಚರ್ಚಿಸಬೇಕು.
ಕೇವಲ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮಾತ್ರ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಂಸತ್ ಟಿವಿಯಲ್ಲಿ ಪ್ರಸಾರ ಆಗುವುದು. ಸ್ಥಳೀಯ ಭಾಷೆಗೂ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸಂಸತ್ ನಲ್ಲಿ ಪ್ರಶ್ನೆ ಮಾಡುವೆ ಎಂದರು.
ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳಿಗೂ ಹಕ್ಕು ಪತ್ರಗಳು ಸಿಗುವಂತಾಗಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಮುನ್ನುಡಿ ಬರೆದಿದ್ದು ಪೆಬ್ರವರಿ ತಿಂಗಳಿನಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಲಾಗುವುದು. ಜಿಲ್ಲೆಯ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಿ ಪ್ರವಾಸೋದ್ಯಮದ ಮೂಲಕ ಶಾಲೆಯ ಮಕ್ಕಳಿಗೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸಲು ಸೂಕ್ತ ಕ್ರಮ ಕೈ ಗೊಳ್ಳಲಾಗುವುದು.
ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬೇಡವೇ ಬೇಡ ಎಂದು ಜಾಗೃತಿ ಮೂಡಿಸಿದ ಸಂಸದರು ಒಂದೊಂದು ರಕ್ತದ ಕಣದಲ್ಲಿಯೂ ಕೂಡ ಕನ್ನಡತನವಿದೆ. ಕನ್ನಡದ ಅಭಿಮಾನ ಎಲ್ಲರಿಗೂ ಮೂಡಿಬರಬೇಕು, ನಾವೆಲ್ಲರೂ ಪ್ರಾಮಾಣಿಕವಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸೋಣ ಎಂದರು.