SUDDIKSHANA KANNADA NEWS/ DAVANAGERE/ DATE:27-01-2025
ದಾವಣಗೆರೆ: ಮೈಕ್ರೋಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಹೊನ್ನಾಳಿಯ ತುಂಗಾಭದ್ರಾ ನದಿಯಲ್ಲಿ ನಡೆದಿದೆ.
ಮೂಲತಃ ಹೊನ್ನಾಳಿಯ ಪುಷ್ಪಲತಾ (46) ವರ್ಷ ಮೃತ ಶಿಕ್ಷಕಿ. ಶಿವಮೊಗ್ಗದ ಟಿಟಿ ಕ್ಯಾಪಿಟಲ್ ಫೈನಾನ್ಸ್ ನಲ್ಲಿ ಸಾಲ ಪಡೆದಿದ್ದ ಪುಷ್ಪಲತಾ ಹಾಗೂ ಅವರ ಪತಿ ಹಾಲೇಶ್ ಅವರು ಸಾಲದ ಸುಳಿಗೆ ಸಿಲುಕಿ ನಲುಗಿದ್ದರು.
ಸ್ವಂತ ಮನೆ ಕಟ್ಟಿಸಬೇಕೆಂಬ ಆಸೆ ಕಂಡಿದ್ದ ಶಿಕ್ಷಕ ಹಾಲೇಶ್ ಹಾಗೂ ಪುಷ್ಪಲತಾ ಅವರು ಶಿವಮೊಗ್ಗದ ಟಿಟಿ ಕ್ಯಾಪಿಟಲ್ ಫೈನಾನ್ಸ್ ನಲ್ಲಿ 38 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದ್ರೆ, ಫೈನಾನ್ಸ್ ಸಿಬ್ಬಂದಿ ಹಣದ ಕಂತು ಹಾಗೂ ಬಡ್ಡಿ ಕಟ್ಟಲು ಒತ್ತಡ ಹೇರುತ್ತಿದ್ದರು. ಇದರಿಂದ ದಂಪತಿ ಆತಂಕಕ್ಕೆ ಒಳಗಾಗಿದ್ದರು.
ಗಣರಾಜ್ಯೋತ್ಸವದ ದಿನವಾದ ಭಾನುವಾರ ಪುಷ್ಪಲತಾ ಅವರು ಶಾಲೆಗೆ ಹೋಗಿ ಬಂದಿದ್ದರು. ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದ್ರೆ, ಶಾಲೆಯಿಂದ ವಾಪಸ್ ಆದ ಬಳಿಕ ಹೊನ್ನಾಳಿಯ ರಾಘವೇಂದ್ರ
ಮಂಟಪದ ಬಳಿ ತುಂಗಾಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರಿಗೂ ಒಳ್ಳೆಯ ಸಂಬಳ ಇತ್ತು. ಹಾಲೇಶ್ ಅವರೂ ಶಿಕ್ಷಕರಾಗಿದ್ದರು. ಬಡ್ಡಿ ಹೆಚ್ಚಿದ್ದ ಕಾರಣ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೋ ಅಥವಾ ಬೇರೆ ಕಾರಣ ಇರಬಹುದೋ ಎಂಬ ಕುರಿತಂತೆ ಪೊಲೀಸ್ ತನಿಖೆಯಿಂದ ಹೊರ ಬರಬೇಕಿದೆ. ಈ ಸಂಬಂಧ ಹಾಲೇಶ್ ಅವರು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ತುಂಗಾನದಿಗೆ ಹಾರಿರುವ ಶಿಕ್ಷಕಿ ಪುಷ್ಪಲತಾ ಅವರ ಮೃತದೇಹ ಸಿಕ್ಕಿಲ್ಲ. ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರು ಮೃತದೇಹಕ್ಕೆ ಹುಡುಕಾಟ ನಡೆಸಿದ್ದಾರೆ.