SUDDIKSHANA KANNADA NEWS/DAVANAGERE/DATE:30_09_2025
ದಾವಣಗೆರೆ: ತರಗತಿಗಳು ಸರಿಯಾಗಿ ನಡೆದಿಲ್ಲ. ಪಾಠಗಳು ಸಂಪೂರ್ಣಗೊಂಡಿಲ್ಲ. ಹಾಗಾಗಿ ಕೂಡಲೇ ದಾವಣಗೆರೆ ವಿಶ್ವವಿದ್ಯಾಲಯವು ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಆಗ್ರಹಿಸಿ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
READ ALSO THIS STORY: ಅನಧಿಕೃತ ಚರ್ಮರೋಗ ಚಿಕಿತ್ಸಾಲಯಗಳಿಗೆ ದಂಡ ಮತ್ತು ಶಾಶ್ವತ ಬಂದ್!
ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು ಇಲ್ಲಿಯವರೆಗೂ ತರಗತಿಗಳು ಸರಿಯಾಗಿ ನಡೆಯದೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕದಲ್ಲಿದ್ದಾರೆ. ಇದು ಅವರ ಶೈಕ್ಷಣಿಕ ಭವಿಷ್ಯವನ್ನು ಅತಂತ್ರವನ್ನಾಗಿಸಿದೆ. ಮುಂದಿನ ವಾರ ಪದವಿ ವಿದ್ಯಾರ್ಥಿಗಳ ಮೊದಲ ಆಂತರಿಕ ಪರೀಕ್ಷೆಗಳು ನಡೆಯಬೇಕಿದ್ದು ತರಗತಿಗಳು ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದರು.
ಸರ್ಕಾರವು ಈಗಷ್ಟೇ ಹೊರಡಿಸಿರುವ ಸುತ್ತೋಲೆಯನ್ನು ಸ್ವಾಗತಿಸುತ್ತೇವೆ. ಹಿಂದಿನ ಶೈಕ್ಷಣಿಕ ವರ್ಷದ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸುತ್ತೇವೆ ಎಂದು ಸರ್ಕಾರವು ಹೇಳಿದೆ. ಆದರೆ ಪ್ರತಿ ವಿಷಯಕ್ಕೆ ಕನಿಷ್ಠ 30 ಗಂಟೆಗಳ ಪಾಠ ಆಗದೆ ಈಗಾಗಲೇ ಪರೀಕ್ಷೆಗಳನ್ನು ಘೋಷಿಸಿರುವುದು ಅತ್ಯಂತ ಅನ್ಯಾಯವಾಗಿದೆ. ಆದ್ದರಿಂದ ನಾವು ದಾವಣಗೆರೆ ವಿಶ್ವವಿದ್ಯಾಲಯದ ಮುಂದೆ ಇಡುತ್ತಿರುವ ಆಗ್ರಹವೆಂದರೆ ಪಾಠ ನಡೆಯದೆ ಪರೀಕ್ಷೆಗಳು ಬೇಡ! ಪರೀಕ್ಷೆಗಳನ್ನು, ಪರೀಕ್ಷಾ ಶುಲ್ಕದ ಸುತ್ತೋಲೆಯನ್ನು, ಈ ಕೂಡಲೇ ಮುಂದೂಡಬೇಕು ಹಾಗೂ ಅದಕ್ಕನುಗುಣವಾಗಿ ಕಾಲೇಜಿನಲ್ಲಿಯೂ ಆಂತರಿಕ ಪರೀಕ್ಷೆಗಳನ್ನು ಮುಂದೂಡಬೇಕು.” ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಾವಣಗೆರೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಹೇಳಿದರು.
“ಸರ್ಕಾರವು ಅತಿಥಿ ಉಪನ್ಯಾಸಕರನ್ನು ನೇಮಿಸುವುದಾಗಿ ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿ ಹೋರಾಟದ ಅಭೂತಪೂರ್ವ ಜಯವಾಗಿದೆ. ಈಶ್ವರ ಚಂದ್ರ ವಿದ್ಯಾಸಾಗರ್, ಜ್ಯೋತಿರಾವ್ ಪುಲೆ, ಕ್ರಾಂತಿಕಾರಿ ಭಗತ್ ಸಿಂಗ್, ನೇತಾಜಿಯವರ ಆದರ್ಶಗಳಿಂದ ಪ್ರೇರಿತರಾಗಿ ತಮ್ಮ ಶಿಕ್ಷಣದ ಹಕ್ಕನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕಿಂದು ಜಯ ದೊರೆತಿದೆ. ಹೋರಾಟದಿಂದ ಮಾತ್ರವೇ ಬದಲಾವಣೆ ಸಾಧ್ಯ ಎಂಬ ಸಂದೇಶವನ್ನು ಕರ್ನಾಟಕದ ವಿದ್ಯಾರ್ಥಿಗಳು ಈ ಮೂಲಕ ಎಲ್ಲೆಡೆ ಸಾರಿದ್ದಾರೆ.” ಎಂದರು.
ಜಿಲ್ಲಾ ಸಂಘಟನಕಾರರಾದ ಎಚ್ ಡಿ ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್, ಹಲವು ಕಾಲೇಜುಗಳ ವಿದ್ಯಾರ್ಥಿಗಳಾದ ಸಿದ್ದಿಕ್ ಅವರಗೆರೆ, ವಿಕಾಸ್ ಎಂ ಆರ್, ಗಂಗಾಧರ್ ಎನ್, ಪ್ರೇಮಾ, ವರಲಕ್ಷ್ಮಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವರಿಗೆ ವಿದ್ಯಾರ್ಥಿಗಳ ನಿಯೋಗವು ಮನವಿ ಪತ್ರ ಸಲ್ಲಿಸಿತು.