SUDDIKSHANA KANNADA NEWS/ DAVANAGERE/ DATE_08-07_2025
ಚಿತ್ರದುರ್ಗ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಿಗೆ ತ್ರಿವಿಧ ದಾಸೋಹ ಸೇವಾ ಕೈಂಕರ್ಯದಲ್ಲಿ ಹೆಸರಾಗಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ನವೆಂಬರ್-2025 ರ ತಿಂಗಳಲ್ಲಿ ರಾಜ್ಯಮಟ್ಟದ ನುಡಿಹಬ್ಬ ಆಯೋಜಿಸಲು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮತಿ ನೀಡಿದ್ದಾರೆ.
ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ ಜಗದ್ಗುರುಗಳವನ್ನು ನಿನ್ನೆ ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದರು.
ಚಿತ್ರದುರ್ಗ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಸಿರಿಗೆರೆ ಮಠದ ಆಶ್ರಯದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಪ್ರತಿ ವರ್ಷ ನವೆಂಬರ್ನಲ್ಲಿ `ತರಳಬಾಳು ನುಡಿಹಬ್ಬ’ ಆಚರಿಸಲಾಗುತ್ತದೆ. ಈ ಬಾರಿಯೂ ನುಡಿಹಬ್ಬವನ್ನು ಇನ್ನಷ್ಟು ವಿಭಿನ್ನವಾಗಿ ಆಚರಿಸಲು ಮಠದ ವತಿಯಿಂದ ಅವಕಾಶ ನೀಡಬೇಕು ಎಂದು ವಿನಂತಿಸಿದರು.
`ನುಡಿಹಬ್ಬದಲ್ಲಿ ಅರ್ಥಪೂರ್ಣ ಚರ್ಚೆಗಳು ಮತ್ತು ಕವಿಗೋಷ್ಠಿಗಳನ್ನು ಆಯೋಜಿಸಬೇಕು. ಮಧ್ಯ ಕರ್ನಾಟಕಕ್ಕೆ ಸೀಮಿತಗೊಳಿಸದೆ, ರಾಜ್ಯಮಟ್ಟದಲ್ಲಿ ನುಡಿಹಬ್ಬವನ್ನು ಆಯೋಜಿಸಿ ಎಂದು ಜಗದ್ಗುರುಗಳು ಪ್ರತಿಕ್ರಿಯೆ ನೀಡಿದರು.
ಈ ಬಾರಿ ಶಾಂತಿವನದಲ್ಲಿ ವಿಶೇಷ ಕವಿಗೋಷ್ಠಿ ಏರ್ಪಡಿಸಿ, ರಾಜ್ಯದ ಪ್ರಮುಖ ಸಾಹಿತಿಗಳು ಮತ್ತು ಕವಿಗಳನ್ನು ಆಹ್ವಾನಿಸಿ ಎಂದು ಶ್ರೀಗಳು ಸಲಹೆ ನೀಡಿದರು.
ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಮಧ್ಯ ಕರ್ನಾಟಕದ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾಹಿತಿಗಳು ಹಾಗೂ ಕವಿಗಳನ್ನು ಈ ನುಡಿಹಬ್ಬದಲ್ಲಿ ವಿಶೇಷವಾಗಿ ಆಹ್ವಾನಿಸಲಾಗುವುದು ಎಂದರು.
ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಸಿರಿಗೆರೆ ಮಠದ ವತಿಯಿಂದ ತರಳಬಾಳು ನುಡಿಹಬ್ಬವನ್ನು ಪ್ರತಿವರ್ಷ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಮೂರು ಜಿಲ್ಲೆಗಳ ಸಹಯೋಗದಲ್ಲಿ ಇದೇ ದಿನಾಂಕ 27ರಂದು ಅಂತರ ಜಿಲ್ಲಾ ಕವಿಗೋಷ್ಠಿಯನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಮಳಲಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.