
SUDDIKSHANA KANNADA NEWS/ DAVANAGERE/ DATE:10-04-2025
ದಾವಣಗೆರೆ:ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣ ಮತ್ತು ಮಕ್ಕಳ ಥೀಮ್ ಪಾರ್ಕ್ ನಲ್ಲಿ ಏಪ್ರಿಲ್ 20ಕ್ಕೆ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಮಕ್ಕಳೋತ್ಸವ-2025 ಆಯೋಜಿಸಲಾಗಿದೆ ಎಂದು ಜವಾಹರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಎಚ್.ಜೆ. ಮೈನುದ್ದೀನ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಮಕ್ಕಳೋತ್ಸವದಲ್ಲಿ ಪ್ರತಿ ಜಿಲ್ಲೆಯಿಂದ ಐದು ಮಕ್ಕಳು ಸೇರಿದಂತೆ 300ರಿಂದ 400 ಮಕ್ಕಳು ಪಾಲ್ಗೊಳ್ಳುವರು. 15 ರಿಂದ 18 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದರು.
ಅಂದು ಬೆಳಿಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಾಜಿ ಮೇಯರ್ ಕೆ. ಚಮನ್ ಸಾಬ್, ರಾಜ್ಯ ಉಸ್ತುವಾರಿ ಜಯಕುಮಾರ್ ಪಿಳ್ಳಯ್, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಮಕ್ಕಳಲ್ಲಿನ ವಿಶಿಷ್ಟ, ವಿಶೇಷ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ರಾಜ್ಯ ಮಟ್ಟದ ಮಕ್ಕಳೋತ್ಸವ ಹಮ್ಮಿಕೊಳ್ಳಲಾಗಿದೆ. ಹಾಡುಗಾರಿಕೆ, ನೃತ್ಯ, ಏಕಪಾತ್ರಾಭಿನಯ, ಮಿಮಿಕ್ರಿ, ಚಿತ್ರಕಲೆ, ಭಾಷಣ, ಸಂಗೀತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳೋತ್ಸವದಲ್ಲಿ ಆಯ್ಕೆಯಾದವರು ಮೇ. 15ರಂದು ಜೈಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ, ಲಿಯಾ ಖತ್ ಅಲಿ, ಸಲ್ಮಾಬಾನು, ಕೆ.ಎಚ್. ಪ್ರೇಮ, ಶಿಲ್ಪ, ಅಜಂ, ಫಯಾಜ್ ಅಹಮದ್, ನಾಗರಾಜ್, ದರ್ಶನ್ ಮತ್ತಿತರರು ಹಾಜರಿದ್ದರು.