SUDDIKSHANA KANNADA NEWS \ DAVANAGERE
DATE:27-03-2023
ದಾವಣಗೆರೆ: ಹಟ್ಟಿ, ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ನಾವೇ ಒಪ್ಪಿಗೆ ನೀಡಿದ್ದರೂ ಸಹ ಅಧಿಕಾರಿಗಳು ನಮ್ಮ ಗಮನಕ್ಕೆ ತಾರದೇ ಏಕಪಕ್ಷೀಯ ನಿರ್ಧಾರ ಕೈಗೊಂಡು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು
ಕಾಂಗ್ರೆಸ್ (CONGRESS) ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ (SHAMANURU SHIVASHANKARAPPA) ನವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಹಟ್ಟಿ, ತಾಂಡ, ಕ್ಯಾಂಪ್ಗಳಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಜನರಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದಿನ ಸಿದ್ದರಾಮಯ್ಯ
ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ (THIMMAPPA) ನವರು ಕಂದಾಯ ಸಚಿವರಾಗಿದ್ದಾಗ ಸರ್ಕಾರಿ ಮತ್ತು ಖಾಸಗಿ ನಿವೇಶನಗಳಲ್ಲಿ ವಾಸಿಸುವವರಿಗೆ ಇರುವವನೇ ಭೂಮಿ ಒಡೆಯ ಎಂಬ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ಅರ್ಹರನ್ನು ಗುರುತಿಸಿ ನಿವೇಶನದ ಹಕ್ಕು ನೀಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲೇ ಸಾವಿರಾರು ಬಡವರು ನಿವೇಶನ ಇಲ್ಲದೇ ಮನವಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸೂರು ಇಲ್ಲದವರಿಗೆ ಸೂರು ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅಧಿಕಾರಿಗಳು ಸೂರು ಇಲ್ಲದವರನ್ನು ಗುರುತಿಸಬೇಕು. ಜನಪ್ರತಿನಿಧಿಗಳ ಗಮನಕ್ಕೆ ತಂದು ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಸೂಚ್ಯವಾಗಿ ತಿಳಿಸಿದರು.
ಶಾಸಕ ಎಸ್.ಎ.ರವೀಂದ್ರನಾಥ್ (RAVINDRANATH), ಸಂಸದ ಜಿ.ಎಂ.ಸಿದ್ದೇಶ್ವರ (G. M. SIDDESHWAR), ಜಿಲ್ಲಾಧಿಕಾರಿ ಶಿವಾನಂದ ಕಾಪಶಿ (SHIVANANDA KAPASHI), ಡಿಡಿಎಲ್ ಆರ್ ಭಾವನಾ (BHAVANA) ಅವರು ಮಾತನಾಡಿ ಹಕ್ಕುಪತ್ರ ತೆಗೆದುಕೊಂಡವರು ಯಾರಿಗೂ ಸಹ ಪರಭಾರೆ ಮಾಡದೇ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೊಟೂರು ಬಸವನಗೌಡ, ಎಡಿಎಲ್ಆರ್ ನಾಗಭೂಷಣ್ ಮತ್ತಿತರರಿದ್ದರು.