SUDDIKSHANA KANNADA NEWS/ DAVANAGERE/ DATE:05-01-2025
ದಾವಣಗೆರೆ: ದಾವಣಗೆರೆಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಭಾರೀ ಸ್ಪಂದನೆ ಸಿಕ್ಕಿದೆ. ನಾಡಿನ ದೊರೆ ಸಿಎಂ ಸಿದ್ದರಾಮಯ್ಯರೇ ಚಾಲನೆ ನೀಡಿ ಹೋಗಿದ್ದಾರೆ. ಜಾನಪದ ಕಲಾ ತಂಡಗಳ ಮೆರವಣಿಗೆ ಮೆರಗು ತಂದಿದೆ. ನೃತ್ಯ ಕಲಾವಿದರ ರಂಗು ಜೋರಾಗಿದೆ. ಆದ್ರೆ, ಕಾರ್ಯಕ್ರಮದ ಆಯೋಜಕರು ಮಾಡಿದ ಯಡವಟ್ಟು ಈಗ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ನಾಲ್ಕು ಕಡೆಗಳಲ್ಲಿ ವಿವಿಐಪಿ ಹಾಗೂ ವಿಐಪಿ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಹಾಕಲಾಗಿದ್ದ ನಾಲ್ಕು ನಾಮಫಲಕಗಳನ್ನು ನೋಡಿ ಆಹ್ವಾನಿತರು ಅರೆಕ್ಷಣ ಗಲಿಬಿಲಿಯಾಗಿದ್ದರು. ಯಾಕೆಂದರೆ ಆಹ್ವಾನಿತರು ಎನ್ನುವುದು
ಹೋಗಿ ಅವನೀತರು ಎಂಬ ನಾಮಫಲಕ ರಾರಾಜಿಸುತಿತ್ತು. ಇದನ್ನು ಕಂಡವರು ಒಳಗೊಳಗೆ ಗೊಣಗಿದರೆ, ಮತ್ತೆ ಕೆಲವರು ಈ ಗಲಾಟೆಯಲ್ಲಿ ಹೇಗೆ ಹೇಳೋದು? ಯಾರಿಗೆ ಹೇಳೋದು? ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಇಂಥ ಅಚಾತುರ್ಯ ಆದರೂ ಯಾರೂ ಗಮನಿಸದೇ ಇರುವುದು ವಿಷಾದದ ಸಂಗತಿ ಎಂದು ಹೇಳಿಕೊಂಡು ಸುಮ್ಮನೆ ಹೋದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಬಾಪೂಜಿ ಎಂಬಿಎ ಮೈದಾನದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಯುವ ಜನೋತ್ಸವವ ರಾಜ್ಯಮಟ್ಟದ್ದು. ಆದ್ರೆ,
ಕನ್ನಡದ ಬಗ್ಗೆ ಅಸಡ್ಡೆ ವಹಿಸಿರುವುದಂತೂ ಸ್ಪಷ್ಟವಾಗಿದೆ. ರಾಜ್ಯ ಯುವಜನೋತ್ಸವದಲ್ಲಿ ಕಂಡು ಬಂದ ನಾಮಫಲಕಗಳು ಜನರ ಕೆಂಗಣ್ಣಿಗೂ ಗುರಿಯಾಯಿತು.
ಆಹ್ವಾನಿತರು ಎನ್ನುವ ಪದ ‘ಅವನೀತರು” ಅಂತಾಗಿದೆ. ಹಾಗಾದರೆ ನಮ್ಮ ಜಿಲ್ಲಾಡಳಿತ ಕನ್ನಡ ಭಾಷಾ ಜ್ಞಾನದಲ್ಲಿ ಇಷ್ಟು ಬಡವಾಗಿದೆಯೇ? ಇಷ್ಟು ಮಾತ್ರವಲ್ಲದೇ ಕಥೆ ಮತ್ತು ಕವನ ರಚನೆ ಸ್ಪರ್ಧೆಯಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾಡಲು ಅವಕಾಶವಿತ್ತಂತೆ. ಇಲ್ಲಿ ನಮ್ಮ ರಾಜ್ಯಾಡಳಿತವೇ ಪರ ಭಾಷೆಯನ್ನು ಕನ್ನಡಿಗರ ಮೇಲೆ ಹೇರಿದೆ. ಬೇರೆ ಯಾರೋ ಹೇರಿದ್ದಲ್ಲ. ಕನ್ನಡಿಗರಾದ ನಮಗೆಲ್ಲರಿಗೂ ನೋವು ಕೊಡುವ ವಿಷಯವಿದು ಎಂದು ಕನ್ನಡ ಸಾಹಿತ್ಯ ಪರಿಷತ್ ನ ಕೆ.ರಾಘವೇಂದ್ರ ನಾಯರಿ ಬೇಸರ ವ್ಯಕ್ತಪಡಿಸಿದ್ದಾರೆ.