SUDDIKSHANA KANNADA NEWS/DAVANAGERE/DATE:27_10_2025
ದಾವಣಗೆರೆ: ನಗರದ ವಿವಿಧ ಕಡೆ ಅಕ್ರಮವಾಗಿ ಪಡಿತರ ದಾಸ್ತಾನು ಮಾಡಿದ್ದ ಸ್ಥಳಗಳ ಮೇಲೆ ಪಡಿತರ ಅಧಿಕಾರಿಗಳು ಹಾಗೂ ಪೊಲೀಸರು ದಿಢೀರ್ ದಾಳಿ ನಡೆಸಿ 12 ಕ್ವಿಂಟಲ್ ಗೂ ಹೆಚ್ಚು ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
READ ALSO THIS STORY: ಶಾಕಿಂಗ್ ನ್ಯೂಸ್: ಮೂವರು ಸಹೋದರಿಯರ ಆಕ್ಷೇಪಾರ್ಹ ಫೋಟೋ ಎಐ ಮೂಲಕ ರೆಡಿ ಮಾಡಿ ಸಾಹಿಲ್ ಬ್ಲ್ಯಾಕ್ಮೇಲ್: ಹಣದ ಕಾಟಕ್ಕೆ ಬೇಸತ್ತ ರಾಹುಲ್ ಸೂಸೈಡ್!
ವಿವಿಧೆಡೆ ಅಕ್ರಮವಾಗಿ ಪಡಿತರ ಅಕ್ಕಿ, ರಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹಾಗೂ ದಾವಣಗೆರೆ ಪಡಿತರ ನಿರೀಕ್ಷಕರು ದಾಳಿ ಮಾಡಿದ್ದು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ವಶಕ್ಕೆ ಪಡೆದಿದ್ದಾರೆ.
ಆರ್ ಎಂ ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎಪಿಎಂಸಿ ಎತ್ತಿನ ಸಂತೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 12 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 9 ಕ್ವಿಂಟಲ್ ಅಕ್ಕಿ, 1.68 ಕ್ವಿಂಟಲ್ ರಾಗಿ ಸಿಕ್ಕಿದೆ.
ಗಾಂಧಿನಗರ ಠಾಣೆ ವ್ಯಾಪ್ತಿಯಲ್ಲಿ ಎಸ್ ಪಿ ಎಸ್ ನಗರದ ಹತ್ತಿರ ಶೇಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 8 ಕ್ವಿಂಟಲ್ ಅಕ್ಕಿ, ಆಜಾದ್ ನಗರ ಠಾಣಾ ವ್ಯಾಪ್ತಿಯಲ್ಲಿನ ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 6 ಕ್ವಿಂಟಲ್ ಗೂ ಹೆಚ್ಚು ಅಕ್ಕಿ ಹಾಗೂ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ ನರಸರಾಜಪೇಟೆ ಯಲ್ಲಿ ಅಂಗಡಿಯೊಂದರ ಖಾಲಿ ಸೈಟಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 22 ಕ್ವಿಂಟಲ್ ಪಡಿತರ ಅಕ್ಕಿ ಒಟ್ಟು ಸುಮಾರು 57 ಕ್ವಿಂಟಲ್ ಅಕ್ಕಿ ಪತ್ತೆಯಾಗಿದೆ. ಸುಮಾರು 2 ಕ್ವಿಂಟಲ್ ರಾಗಿ ಸಿಕ್ಕಿದೆ.
ಈ ಸಂಬಂಧ ಬಸವನಗರ, ಆಜಾದ್ ನಗರ, ಗಾಂಧಿನಗರ, ಕೆಟಿಜೆ ನಗರ, ಆರ್ ಎಂ ಸಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿಗಳಾದ ಪಿಎಸ್ಐ ಸಾಗರ ಅತ್ತರ ವಾಲಾ, ಸಿಬ್ಬಂದಿಗಳಾದ ಮಂಜುನಾಥ, ಪ್ರಕಾಶ, ಗೋವಿಂದರಾಜ್ ಹಾಗೂ ಆಹಾರ ನಿರೀಕ್ಷಕರು ಹಾಗೂ ಸ್ಥಳೀಯ ಠಾಣೆಗಳ ಅಧಿಕಾರಿ ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.







