SUDDIKSHANA KANNADA NEWS/ DAVANAGERE/ DATE:06-10-2023
ದಾವಣಗೆರೆ: ನಾನು ಯಾವ ಬಾಂಬ್ ಹಾಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಯಾವಾಗ ಮಾತನಾಡುತ್ತೇನೆ ಎಂದು ಹೇಳಲು ಆಗದು. ನೀವು ಸಿದ್ದರಾಮಯ್ಯ ಅವರನ್ನೇ ಕೇಳಿ. ಸಿದ್ದರಾಮಯ್ಯರ ಜೊತೆ ಮಾತನಾಡಿದ್ದರೂ ಅದೂ ಸೀಕ್ರೇಟ್ ಆಗಿರುತ್ತದೆ. ಅದನ್ನು ಬಹಿರಂಗವಾಗಿ ಹೇಳಲು ಆಗದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರೂ ಆದ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:
Bangalore: ಎಲ್ಲವೂ ಸರಿ ಹೋಗಿದೆ, ಮುಗಿದ ಅಧ್ಯಾಯ, ಸಿಎಂ- ಎಸ್ ಎಸ್ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳುತ್ತಾರೆ: ಎಸ್. ಎಸ್. ಮಲ್ಲಿಕಾರ್ಜುನ್
ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನದ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು.
ನಾನು ಇದುವರೆಗೆ ಯಾವ ಬಾಂಬ್ ಹಾಕಲು ಹೋಗಿಲ್ಲ. ಹೈಕಮಾಂಡ್ ನಿಂದ ನನಗೆ ಯಾವ ಸೂಚನೆಯೂ ಇಲ್ಲ. ಯಾವ ಹೈಕಮಾಂಡ್ ಇಲ್ಲ, ಏನೂ ಇಲ್ಲ. ಮಾತುಕತೆ ಯಾವ ದಿನ ನಡೆಸುತ್ತೀರಾ ಎಂಬುದನ್ನು ಸಿಎಂ ಅವರನ್ನೇ ಕೇಳಿ. ನನ್ನನ್ನು ಕೇಳಲು ಹೋಗಬೇಡಿ ಎಂದು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನಿಮ್ಮ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿಲ್ಲ, ಸಮಸ್ಯೆ ಬಗೆಹರಿದಿದೆ, ಸಿದ್ದರಾಮಯ್ಯರ ಜೊತೆ ತಂದೆ ಮಾತನಾಡುತ್ತಾರೆ, ಮುಗಿದ ಅಧ್ಯಾಯ ಎಂದು ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ ಅವರು, ಅವರು ಹೇಳಿದ್ದಾರಲ್ವಾ. ಅವ್ರು ಹೇಳಿದ ಮೇಲೆ ಮುಗಿಯಿತು. ಮತ್ತೇನೂ ಇಲ್ಲ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನವು ಶಕ್ತಿ ಪ್ರದರ್ಶನ ಮಾಡುವ ವೇದಿಕೆ ಅಲ್ಲ. ಹತ್ತು ಇಲ್ಲವೇ, ಇಪ್ಪತ್ತು ಲಕ್ಷ ಜನರು ಸೇರಿದರೆ ಅದು ಶಕ್ತಿ ಪ್ರದರ್ಶನವಾಗುತ್ತದೆ. ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡರೆ ಅದು ಹೇಗೆ ಶಕ್ತಿ ಪ್ರದರ್ಶನ ಆಗುತ್ತದೆ ಎಂದು ಪ್ರಶ್ನಿಸಿದರು.
ಡಿಸೆಂಬರ್ 23 ಮತ್ತು 24ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನ ನಡೆಯಲಿದೆ. ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಸಮಾಜದ ಬಂಧುಗಳು ಬರುತ್ತಾರೆ ಎಂದು ಶಾಮನೂರು ಶಿವಶಂಕರಪ್ಪ (Shamanuru Shivashankarappa) ಹೇಳಿದರು.