SUDDIKSHANA KANNADA NEWS/ DAVANAGERE/ DATE:23-01-2025
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲೆಂದು ಮಹಾನಗರ ಪಾಲಿಕೆಯ 38ನೇ ವಾರ್ಡ್ ನ ಸದಸ್ಯ ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ದೇವರ ದರ್ಶನ ಪಡೆಯಲಾಯಿತು.
ಡಾ. ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಗೆ ನೀಡಿರುವ ಕೊಡುಗೆ ಅಪಾರ. ದಾನ ಧರ್ಮ, ದೇವಸ್ಥಾನಗಳ ಜೀರ್ಣೋದ್ಧಾರ, ವಿಶ್ವ ಭೂಪಟದಲ್ಲಿ ದಾವಣಗೆರೆ ಗುರುತಿಸುವಂತಾಗಲು ಪ್ರಮುಖ ಕಾರಣೀಭೂತರಲ್ಲಿ ಶಿವಶಂಕರಪ್ಪ ಅವರೂ ಒಬ್ಬರು. ಅವರ ಆರೋಗ್ಯ ಸುಧಾರಿಸಲಿ, ಆಯಸ್ಸು ವೃದ್ಧಿಸಲಿ ಎಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಮಂಜುನಾಥ ಗಡಿಗುಡಾಳ್ ಅವರ ನೇತೃತ್ವದಲ್ಲಿ ಜಿಎಸ್ಎಂ ಸ್ನೇಹ ಬಳಗದ ವತಿಯಿಂದ ಎಂ.ಸಿ.ಸಿ. ಬಿ ಬ್ಲಾಕ್ ನ ಸ್ನೇಹಿತರೆಲ್ಲಾ ಸೇರಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದು ಭಕ್ತಿಯಿಂದ ಸಂಕಲ್ಪ ಸಲ್ಲಿಸಿ ಪ್ರಾರ್ಥಿಸಿದರು. ಶಾಮನೂರು ಶಿವಶಂಕರಪ್ಪ ಅವರು ನೂರು ಕಾಲ ಬದುಕಲಿ, ಆಯಸ್ಸು ವೃದ್ಧಿಸಲಿಂದು ಭಗವಂತನಲ್ಲಿ ಬೇಡಿಕೊಂಡು ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಮಂಜುನಾಥ್ ಗಡಿಗುಡಾಳ್ ತಿಳಿಸಿದರು.
ಈ ವೇಳೆ ಮಾತನಾಡಿದ ಮಂಜುನಾಥ್ ಗಡಿಗುಡಾಳ್ ಅವರು ಎಂಸಿಸಿ ಬಿ ಬ್ಲಾಕ್ ನ ಜಿ.ಎಸ್ ಎಂ.ಸ್ನೇಹ ಬಳಗದ ಸದಸ್ಯರು ವಿಶೇಷ ಪ್ರಾರ್ಥನೆ ಸಲ್ಲಿಸುವ ಕೈಂಕರ್ಯ ಕೈಗೊಂಡಿದ್ದರು. ಶಾಮನೂರು ಶಿವಶಂಕರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ದಾವಣಗೆರೆಗೆ ಆಗಮಿಸಿ ಎಂದಿನಂತೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿರಿಯರು, ಮಾರ್ಗದರ್ಶಕರು ನೂರು ಕಾಲ ಚೆನ್ನಾಗಿರಬೇಕು. ನಮ್ಮಂಥವರಿಗೆ ಆಶೀರ್ವಾದ ಹಾಗೂ ಮಾರ್ಗದರ್ಶನದ ಅಗತ್ಯತೆ ಇದೆ ಎಂದು ತಿಳಿಸಿದರು.