SUDDIKSHANA KANNADA NEWS/DAVANAGERE/DATE:04_11_2025
ದಾವಣಗೆರೆ: ಹರಿಹರ ತಾಲೂಕಿನ ಚಿಕ್ಕಬಿದರಿ, ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದ ಹದ್ದಿಗಿಡದ ಹಳ್ಳದ ಬಳಿ, ದಾವಣಗೆರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಈ ಜಮೀನುಗಳಲ್ಲಿ ಒಂದು ಗುಂಟೆಯೂ ಸಹ ಖರಾಬು ಇಲ್ಲ. ಸಚಿವರು ಸುಳ್ಳು ಹೇಳಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
READ ALSO THIS STORY: “ನಿಮಗಾಗಿ ನಾನು ನನ್ನ ಹೆಂಡತಿ ಕೊಂದೆ”: ಐವರು ಪ್ರಿಯತಮೆಯರಿಗೆ ಮಹೇಂದ್ರ ರೆಡ್ಡಿ ಸಂದೇಶ, ಮತ್ತಷ್ಟು ಸ್ಫೋಟಕ ಮಾಹಿತಿ ಬಯಲು!
ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ರೈತರು, ಹಣ ಹಾಗೂ ಅಧಿಕಾರದ ದರ್ಪದಿಂದ ರೈತರು ಹಾಗೂ ಶಾಸಕರ ಬಗ್ಗೆ ಸಚಿವರು ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮ ಹಾಗೂ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಗ್ರಾಮಗಳಲ್ಲಿ ಸಚಿವರು ಹಾಗೂ ಅವರ ಕುಟುಂಬದವರು ಮಾಡಿರುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ ರೈತರು ಹಾಗೂ ಶಾಸಕರನ್ನು ನಾಯಿಗಳು ಎಂದು ಕರೆದಿದ್ದಾರೆ. ಇದು ಸಚಿವ ಮಲ್ಲಿಕಾರ್ಜುನ್ ಅವರಿಗೆ ರೈತರ ಬಗ್ಗೆ ಇರುವ ಕಾಳಜಿ ತೋರುತ್ತದೆ. ಹಣ ಮತ್ತು ಅಧಿಕಾರ ಮಲ್ಲಿಕಾರ್ಜುನ್ ಅವರಿಗೆ ದೊರೆಕಿರುವುದು ಮುಗ್ಧ ರೈತರ ಹೊಲಗದ್ದೆಗಳನ್ನು ಅಕ್ರಮವಾಗಿ ಕಬಳಿಸಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದ ಸರ್ವೇ ನಂಬರ್ 12,13,14 ಮತ್ತು 15ಕ್ಕೆ ಹೊಂದಿಕೊಂಡಿರುವುವ ಹಳ್ಳವನ್ನು ಮುಚ್ಚಿಲ್ಲ ಎನ್ನುವುದಾದರೆ ಅವರ ಮಾಲಿಕತ್ವದ ಹಿಟಾಚಿ ಕರೆಸಿ ತುರ್ತಾಗಿ ಹಳ್ಳವನ್ನು ತೆಗಿಸುವ ಹುಚ್ಚು ಸಾಹಸ ಮಾಡಿದ್ದು ಯಾವ ಕಾರಣಕ್ಕೆ. ಹಿಟಾಚಿಯಿಂದ ಹಳ್ಳ ತೆಗೆಸುತ್ತಿರುವ ಜಿಪಿಎಸ್ ಪೋಟೋಗಳು ನಮ್ಮ ಹತ್ತಿರ ಇವೆ. ಸಾಕ್ಷಿ ಹಾಗೂ ದಾಖಲಾತಿಗಳನ್ನು ಕೇಳುವ ಸಚಿವರು ರಾತ್ರೋ ರಾತ್ರಿ ಹಿಟಾಚಿಯನ್ನು ಕಂಪನಿ ಒಳಗಡೆ ತೆಗೆದುಕೊಂಡು ಹೋಗಿದ್ದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.
ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಸರ್ವೇ ನಂಬರ್ 236/ಸಿ ರಲ್ಲಿ 67 ಎಕರೆ ಕಡು ಬಡವ, ದೀನದಲಿತರ ರೈತರ ಜಮೀನನ್ನು ಕೆ.ಐ.ಎ.ಡಿ.ಬಿ ಮುಖಾಂತರ ರೈತರ ನಕಲಿ ಸಹಿಗಳನ್ನು ಮಾಡಿ ರೈತರಿಗೆ ಸೇರಬೇಕಾಗಿದ್ದ ಪರಿಹಾರದ ಹಣವನ್ನು ಲಪಟಾಯಿಸಿರುವುದು ರೈತರಿಗೆ ಮಾಡಿರುವ ಅನ್ಯಾಯವಲ್ಲವೇ? ಕೆ.ಐ.ಎ.ಡಿ.ಬಿಯಿಂದ ಶಾಮನೂರು ಶುಗರ್ಸ್ ನವರು ಚಿಕ್ಕಬಿದರಿ, ದುಗ್ಗಾವತಿ, ಕಡತಿ ಗ್ರಾಮಗಳಲ್ಲಿ ಕಾರ್ಖಾನೆ ಮಾಡುತ್ತೇವೆ ಎಂದು ಸಾವಿರಾರು ಎಕರೆ ರೈತರ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದರ ಬಗ್ಗೆ ಧ್ವನಿ ಎತ್ತಿದ ರೈತರು ಹಾಗೂ ಹರಿಹರ ಶಾಸಕರನ್ನು ಹೀಯಾಳಿಸುವುದು ಅಧಿಕಾರದ ದರ್ಪವಲ್ಲದೇ ಮತ್ತೇನು ಎಂದು ಹೇಳಿದರು.
ಗೋಷ್ಠಿಯಲ್ಲಿ ಚಿಕ್ಕಬಿದರಿ ಗ್ರಾಮದ ಕೊಟ್ರೇಶಪ್ಪ, ದುಗ್ಗಾವತಿಯ ಯೋಗೇಶ್, ಕೆಂಚಪ್ಪ, ಭದ್ರಪ್ಪ, ಕಾಳಪ್ಪ, ಗುಟ್ಟಪ್ಪ ಮತ್ತಿತರರು ಹಾಜರಿದ್ದರು.











