ಕೋಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಿಬಿರಾರ್ಥಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಮೃತದೇಹವನ್ನು ‘ಅವಸರದಲ್ಲಿ ಶವಸಂಸ್ಕಾರ’ ಮಾಡಿದ ಗಂಭೀರ ಸಂಚಿನಲ್ಲಿ ಭಾಗಿಯಾಗಿದ್ದ ಎರಡನೇ ಆರೋಪಿ ಸಂಜೀವ್ ಮುಖರ್ಜಿಯನ್ನು ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.
ಕೋಲ್ಕತ್ತಾದ ಚಿನ್ನಾರ್ ಪಾರ್ಕ್ನಲ್ಲಿರುವ ಮನೆಯೊಂದರಲ್ಲಿ ಅಡಗಿದ್ದ ಸಂಜೀವ್ ಮುಖರ್ಜಿಯನ್ನು ಪಶ್ಚಿಮ ಬಂಗಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಿ ಶಾಸಕನ ಬಂಧನ ಬೆನ್ನಲ್ಲೇ ಕಾರ್ಯಾಚರಣೆ
ಇದಕ್ಕೂ ಮೊದಲು, ಈ ಪ್ರಕರಣದ ಪ್ರಮುಖ ಆರೋಪಿಯೂ, ಪಾಣಿಹಾಟಿಯ ಮಾಜಿ ತೃಣಮೂಲ ಕಾಂಗ್ರೆಸ್ (TMC) ಶಾಸಕ ಹಾಗೂ ವಿಧಾನಸಭೆಯ ಮಾಜಿ ಚೀಫ್ ವಿಪ್ ಆಗಿದ್ದ ನಿರ್ಮಲ್ ಘೋಷ್ನನ್ನು ಒಡಿಶಾದಲ್ಲಿ ಬಂಧಿಸಿ ಕೋಲ್ಕತ್ತಾಗೆ ಕರೆತರಲಾಗಿತ್ತು. ಇಬ್ಬರೂ ಆರೋಪಿಗಳನ್ನು ಬರಾಕ್ಪುರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಪೊಲೀಸರು ವಶಕ್ಕೆ ಪಡೆಯಲು ಮನವಿ ಮಾಡಲಿದ್ದಾರೆ.
ಮತ್ತೊಬ್ಬ ಆರೋಪಿ ನಾಪತ್ತೆ!
ಈ ಪ್ರಕರಣದ ಮೂರನೇ ಆರೋಪಿಯಾಗಿರುವ ಪಾಣಿಹಾಟಿ ಪುರಸಭೆಯ ಟಿಎಮ್ಸಿ ಕೌನ್ಸಿಲರ್ ಸೋಮನಾಥ್ ಡೇ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಶವಸಂಸ್ಕಾರದ ಹಿನ್ನೆಲೆ ಹಾಗೂ ಆರೋಪ
ಸಂತ್ರಸ್ತೆಯ ತಂದೆ ಸಲ್ಲಿಸಿದ ಹೊಸ ದೂರಿನ ಆಧಾರದ ಮೇಲೆ ಖಾರ್ದಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸುವುದನ್ನು ತಡೆಯಲು ಹಾಗೂ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ, ನಿಯಮಗಳನ್ನು ಉಲ್ಲಂಘಿಸಿ ಪಾಣಿಹಾಟಿ ಶ್ಮಶಾನದಲ್ಲಿ ಗಡಿಬಿಡಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ಮಲ್ ಘೋಷ್, ಸಂಜೀವ್ ಮುಖರ್ಜಿ ಮತ್ತು ಸೋಮನಾಥ್ ಡೇ ಉಸ್ತುವಾರಿ ವಹಿಸಿದ್ದರು ಎಂದು ಹೇಳಲಾಗಿದೆ.





Leave a comment