SUDDIKSHANA KANNADA NEWS/ DAVANAGERE/ DATE:30_07_2025
ದಾವಣಗೆರೆ :ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಪ್ರದೇಶವನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಖ್ಯಾತಿ ಪಡೆದಿರುವ ಐತಿಹಾಸಿಕ ನೆಲೆ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಪ್ರಸಿದ್ದ ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಪ್ರದೇಶವನ್ನು ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಣೆ ಮಾಡಿದ ಸಚಿವರು,11 ನೇ ಶತಮಾನದಲ್ಲಿ ನಿರ್ಮಿಸಲಾದ ಒಂದು ಸುಂದರವಾದ ದೇವಾಲಯ ಇದಾಗಿದೆ. ಶ್ರೀ ಬಸವೇಶ್ವರ ಮತ್ತು ಶಿವನಿಗೆ ಅರ್ಪಿತವಾದ ಪ್ರಾಚೀನ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಈ ಭಾಗದ
ಭಕ್ತರ ಶ್ರದ್ಧಾಭಕ್ತಿಯ ತಾಣ. ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ದೇವಸ್ಥಾನ ಸಮಿತಿಯವರು ಹಾಗೂ ಭಕ್ತರುಗಳು ಮನವಿಯನ್ನು ಮಾಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳವನ್ನು ಪರೀಶಿಲನೆ ನಡೆಸಲಾಗಿದ್ದು ಅಗತ್ಯ ಕ್ರಮಗಳಿಗೆ ಸೂಚಿಸಲಾಗಿದೆ ಎಂದರು.
READ ALSO THIS STORY: ಇಸ್ರೋ ತರಬೇತಿ ಕಾರ್ಯಕ್ರಮಗಳ ವಿವರ: ಸಂಸತ್ತಲ್ಲಿ ಪ್ರಶ್ನೆ ಕೇಳಿದ ಡಾ. ಪ್ರಭಾ ಮಲ್ಲಿಕಾರ್ಜುನ್
ಜನಪ್ರಿಯ ಆಕರ್ಷಣೆಯಾಗಿರುವ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಜಾತ್ರಾಮಹೋತ್ಸವವು ಅದ್ದೂರಿಯಾಗಿ ನಡೆಯುವುದು. ಕರ್ನಾಟಕ ಮತ್ತು ಅದರಾಚೆಗಿನ ಭಕ್ತರು ಹಾಗೂ ಪ್ರವಾಸಿಗರನ್ನು ತನ್ನ ಸೌಂದರ್ಯ ಮತ್ತು ಆಧ್ಯಾತ್ಮಿಕ ಪ್ರಶಾಂತತೆಯನ್ನು ಮೆಚ್ಚಿಕೊಳ್ಳಲು ದೇವಾಲಯ ಆಕರ್ಷಿಸುತ್ತದೆ. ಈ ಹಿನ್ನಲೆಯಲ್ಲಿ ಪ್ರಾಚೀನ ಕುರುಹುಗಳ ರಕ್ಷಣೆಗಾಗಿ ದೇವಸ್ಥಾನದ ಜೀರ್ಣೋದ್ಧಾರವು ಮುಖ್ಯವಾಗಿದೆ ಎಂದರು.
ಇದೇ ವೇಳೆ ಸಚಿವರಿಗೆ ಸಾರ್ವಜನಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿಯನ್ನು ಸಲ್ಲಿಸಿದರು. ಕುಂದುಕೊರತೆಗಳನ್ನು ಆಲಿಸಿದ ಸಚಿವರು ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ, ಎ.ಪಿ.ಎಂ.ಸಿಯ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಸ್ಥಳೀಯ ಮುಖಂಡರು, ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.