SUDDIKSHANA KANNADA NEWS/ DAVANAGERE/ DATE-09-06-2025
ಇಂದೋರ್: ಮೇಘಾಲಯದಲ್ಲಿ ತನ್ನ ಪತ್ನಿಯೊಂದಿಗೆ ಮಧುಚಂದ್ರಕ್ಕೆ ಹೋಗಿದ್ದಾಗ ಮೃತಪಟ್ಟಿದ್ದ ಇಂದೋರ್ ನಿವಾಸಿ ರಾಜಾ ರಘುವಂಶಿ ಅವರ ಶವಪರೀಕ್ಷೆ ವರದಿ ಬಂದಿದೆ. ವರದಿ ಪ್ರಕಾರ ರಾಜಾ ರಘುವಂಶಿ ಅವರಿಗೆ ಭಾರೀ ಗಾಯಗಳಾಗಿರುವುದು ದೃಢಪಟ್ಟಿದೆ. ತಲೆಯ ಮೇಲೆ ಎರಡು ಗಾಯಗಳಾಗಿದ್ದರೆ, ಮುಂಭಾಗ ಮತ್ತು ಹಿಂಭಾಗದಲ್ಲಿಯೂ ಗಾಯವಾಗಿರುವುದು ಖಚಿತವಾಗಿದೆ.
ತಲೆಗೆ ಎರಡು ತೀಕ್ಷ್ಣವಾದ ಗಾಯಗಳು, ಒಂದು ಮುಂಭಾಗದಿಂದ, ಇನ್ನೊಂದು ಹಿಂಭಾಗದಿಂದ ಹೊಡೆಯಲಾಗಿದ್ದು, ಮಾರಕಾಸ್ತ್ರಗಳಿಂದ ಥಳಿಸಲಾಗಿದೆಯೋ ಅಥವಾ ಬೇರೆ ಆಯುಧಗಳಿಂದಲೂ ಎಂಬುದು ಖಚಿತ ಆಗಬೇಕಿದೆ.
ಮೇಘಾಲಯದಲ್ಲಿ ತನ್ನ ಪತ್ನಿಯೊಂದಿಗೆ ಮಧುಚಂದ್ರಕ್ಕೆ ಹೋಗಿದ್ದ ಇಂದೋರ್ ನಿವಾಸಿ ರಾಜಾ ರಘುವಂಶಿ ಅವರ ಶವಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದರು. ವರದಿ ಪ್ರಕಾರ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಶಿಲ್ಲಾಂಗ್ನ ಹಿಲಿ ಪ್ರದೇಶದಲ್ಲಿ ರಾಜಾ ಮತ್ತು ಅವರ ಪತ್ನಿ ಸೋನಮ್ ರಘುವಂಶಿ ನಾಪತ್ತೆಯಾಗಿದ್ದಾರೆ ಎಂಬ ವರದಿಗಳ ನಂತರ ದಿನಗಳ ಹುಡುಕಾಟದ ನಂತರ ಅರಣ್ಯ ಪ್ರದೇಶದಲ್ಲಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು.
ಮೇಘಾಲಯ ಪೊಲೀಸರ ಪ್ರಕಾರ, ಇಂದೋರ್ನ ಸಾರಿಗೆ ಉದ್ಯಮಿ ರಾಜಾ ರಘುವಂಶಿ ಅವರನ್ನು ಶಿಲ್ಲಾಂಗ್ನಲ್ಲಿ ಮಧುಚಂದ್ರದ ಸಮಯದಲ್ಲಿ ಅವರ ಪತ್ನಿ ಸೋನಮ್ ನೇಮಿಸಿಕೊಂಡ ವ್ಯಕ್ತಿಗಳು ಕೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ಆ ಮಹಿಳೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ರಜೆಯಲ್ಲಿದ್ದಾಗ ರಾಜಾ ರಘುವಂಶಿ ಮತ್ತು ಅವರ ಪತ್ನಿ ನಾಪತ್ತೆಯಾಗಿದ್ದರು. ಜೂನ್ 2 ರಂದು ಅವರ ಶವ ಕಮರಿಯಲ್ಲಿ ಪತ್ತೆಯಾಗಿತ್ತು. 24 ವರ್ಷದ ಸೋನಮ್ ರಘುವಂಶಿ ರಾಜ್ ಕುಶ್ವಾಹ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು. ಆತನನ್ನು ಬಂಧಿಸಲಾಗಿದೆ. ಪತಿಯನ್ನು ಕೊಲ್ಲಲು ಅವನೊಂದಿಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೊಹ್ರಾ ಪ್ರದೇಶಕ್ಕೆ ಯೋಜಿತ ಹನಿಮೂನ್ ಪ್ರವಾಸದ ಸಮಯದಲ್ಲಿ ಕೊಲೆ ನಡೆಸಲು ಮಧ್ಯಪ್ರದೇಶದ ಗುತ್ತಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ.
ಏತನ್ಮಧ್ಯೆ, ಸೋನಂ ಅವರ ತಂದೆ ದೇವಿ ಸಿಂಗ್, ತಮ್ಮ ಮಗಳ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಅವರು “ಶೇಕಡಾ 100 ರಷ್ಟು ನಿರಪರಾಧಿ” ಎಂದು ಹೇಳಿದ್ದಾರೆ. “ನನ್ನ ಮಗಳು ಶೇಕಡ 100 ರಷ್ಟು ನಿರಪರಾಧಿ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ. ರಾಜಾ ರಘುವಂಶಿ ಕೊಲೆ ಪ್ರಕರಣದಿಂದಾಗಿ ರಾಜ್ಯ ಸರ್ಕಾರದ ವರ್ಚಸ್ಸು ಹಾಳಾಗುತ್ತಿರುವುದರಿಂದ ಮೇಘಾಲಯ ಪೊಲೀಸರು ನನ್ನ ಮಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಸಿಂಗ್ ಹೇಳಿದರು.