SUDDIKSHANA KANNADA NEWS/ DAVANAGERE/DATE:02_09_2025
ದಾವಣಗೆರೆ: ಶಾಮನೂರು ಶಿವಶಂಕರಪ್ಪರ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆಯಾಗಲೀ, ನೈತಿಕತೆಯಾಗಲೀ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಗೆ ಇಲ್ಲ. ಅಧಿಕಾರದ ಆಸೆಗಾಗಿ ಪಕ್ಷದಿಂದ ಪಕ್ಷ ಬದಲಾಯಿಸಿ, ಬೆಳೆಸಿದವರನ್ನೇ ದೂಷಿಸಿದಂಥವರು. ಇಂಥವರು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪರ ಮನೆತನದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
READ ALSO THIS STORY: ಮಸೀದಿ ಪಕ್ಕದಲ್ಲೇ ಗಣಪತಿ ಇಟ್ಟು ಕೇಕೆ ಹೊಡೆಯಬೇಕಾ, ತಣ್ಣಗಿರದಿದ್ರೆ ಒಳಗೆ ಹಾಕಿಸ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್ ಗರಂ!
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರನ್ನೇ ಭ್ರಷ್ಟಾಚಾರಿ, ಅಧಿಕಾರದ ದರ್ಪ, ಹೊಂದಾಣಿಕೆ ರಾಜಕೀಯ ಆರೋಪ ಮಾಡಿದ್ದ ಬಿ. ಪಿ. ಹರೀಶ್ ಬಿಜೆಪಿಯ ಮಹಾನ್ ನಾಯಕರಾಗಿಬಿಟ್ಟಿದ್ದಾರೆ. ಶಾಮನೂರು ಕುಟುಂಬದ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿಯಾಗುತ್ತೇನೆಂಬ ಭ್ರಮೆಯಲ್ಲಿ ಮುಳುಗಿದ್ದಾರೆ. ಹರಿಹರದ ಜನತೆಗೆ ಹೋಗಿ ಕೇಳಿದರೆ ಬಿ. ಪಿ. ಹರೀಶ್ ಅವರ ಯೋಗ್ಯತೆ ಏನು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಎಷ್ಟೇ ಕಾರ್ಯದೊತ್ತಡ ಇದ್ದರೂ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಆಗಮಿಸುತ್ತಾರೆ. ಸಂಸದರು ಹೊರಟಾಗ ಕಷ್ಟ ಹೇಳಿಕೊಳ್ಳಲು ಮನೆಯ ಬಳಿ ನೂರಾರು ಮಂದಿ ಬಂದಿರುತ್ತಾರೆ. ಅವರ ಕಷ್ಟ ಕೇಳದೇ ಹಾಗೆಯೇ ಹೋಗಲಾಗುತ್ತದೆಯಾ? ಬಡವರ, ನೊಂದವರ ಕಷ್ಟ ಕೇಳಬಾರದಾ? ಇಷ್ಟು ಸಾಮಾನ್ಯ ಜ್ಞಾನ ಬಿ. ಪಿ. ಹರೀಶ್ ಗಿಲ್ಲ. ತಾನೊಬ್ಬ ಜನಪ್ರತಿನಿಧಿ ಎಂಬುದನ್ನೇ ಮರೆತಿರುವುದು ದುರಂತವೇ ಸರಿ ಎಂದು ಅವರು ಕಿಡಿಕಾರಿದ್ದಾರೆ.
ಬಿ. ಪಿ. ಹರೀಶ್ ಶಾಸಕರಾದಾಗ ಬಳಿಕ ಯಾವೆಲ್ಲಾ ಕೆಲಸ ಹರಿಹರದಲ್ಲಿ ಮಾಡಿದ್ದಾರೆ. ಜನರ ಸಂಕಷ್ಟ ಕೇಳದೇ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸದೇ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಶಿಷ್ಯನಂತೆ ವರ್ತನೆ ಮಾಡುತ್ತಿರುವುದು ಗೊತ್ತಿದೆ. ಈ ಬಾರಿ ಶಾಸಕರಾದ ಬಳಿಕ ಎಷ್ಟು ಬಡವರು, ಹಿಂದುಳಿದವರು, ದೀನದಲಿತರು, ನೊಂದವರ ಕಣ್ಣೀರು ಒರೆಸಿದ್ದಾರೆ ಎಂಬುದನ್ನು ಹೇಳಲಿ. ಸಂಸದರು ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಜೊತೆಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅನುದಾನ ದಾವಣಗೆರೆ ಜಿಲ್ಲೆಗೆ ಹರಿದು ಬಂದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಲಂಚಗುಳಿತನ ಎಷ್ಟಿತ್ತು ಎಂಬುದನ್ನೇ ಇಡೀ ದೇಶವೇ ನೋಡಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಹರೀಶ್ ಮಾತನಾಡುತ್ತಿರುವುದು ಸರಿಯಲ್ಲ ಎಂದು ರಾಘವೇಂದ್ರ ಗೌಡ ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ
ವ್ಯಕ್ತಪಡಿಸಿದ್ದಾರೆ.