SUDDIKSHANA KANNADA NEWS/DAVANAGERE/DATE:30_10_2025
ಬೆಂಗಳೂರು: ನಾಡಿನ ರೈತರಿಗೆ ಸರಿಯಾದ ಸಮಯಕ್ಕೆ ಸೂಕ್ತ ಪ್ರಮಾಣದಲ್ಲಿ ನೀರು, ವಿದ್ಯುತ್ ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆಯ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದರೆ, ರೈತರೇ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಮರ್ಪಕವಾಗಿ ನಿರ್ವಹಿಸುವರು ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ೧ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
READ ALSO THIS STORY: 3 ವರ್ಷವಾದ್ರೂ ಇಲ್ಲೇ ಠಿಕಾಣಿ ಹೂಡಿರೋ ಪಾಲಿಕೆ ಆಯುಕ್ತೆಯಿಂದ ಸಚಿವ, ಸಂಸದೆಗೆ ಕೆಟ್ಟ ಹೆಸರು: ಮಾದಿಗ ದಂಡೋರ ಸಮಿತಿ ಗಂಭೀರ ಆರೋಪ!
ಬೆಂಗಳೂರಿನ ಆಡುಗೋಡಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯೆಯ ವಿಜ್ಞಾನ ಸಂಸ್ಥೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ “ರೈತ ಪ್ರಥಮ” ಯೋಜನೆಯ ವಲಯ ಮಟ್ಟದ ಪರಿಶೀಲನಾ ಸಭೆ ಮತ್ತು ರೈತರು ವಿಜ್ಞಾನಿಗಳ ಸಂವಾದ ಸಭೆಯಲ್ಲಿ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಜಗದ್ಗುರುಗಳವರು ಆಶೀರ್ವಚನ ನೀಡಿದರು.
ನದಿ ನೀರಿನ ಜೋಡಣೆ ಕೆರೆಗಳಿಗೆ ಕಲ್ಪಿಸಿ:
ನದಿ ನೀರಿನ ಜೋಡಣೆಯನ್ನು ಕೆರೆಗಳಿಗೆ ಕಲ್ಪಿಸಿ, ಬರಗಾಲ ಪೀಡಿತ ಪ್ರದೇಶಗಳಿಗೆ ಹೊಸ ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ಭಾಷ್ಯವನ್ನೇ ಬರೆದಿರುವ ತಮ್ಮ ಅನೇಕ ಯೋಜನೆಗಳನ್ನು ಪರಮಪೂಜ್ಯರು ನಾಡಿನ ಎಲ್ಲಾ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸಿದರೆ ನಾಡು ಸಮೃದ್ಧಿಯ ಪಥದಲ್ಲಿ ಸಾಗಲಿದೆ ನೆರೆದಿದ್ದವರಿಗೆ ಮನವರಿಕೆ ಮಾಡಿಕೊಟ್ಟರು.
ರೈತ ಸಮುದಾಯ ಹಾಗೂ ವಿಜ್ಞಾನಿಗಳಿಗೆ ತಮ್ಮ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಪ್ರಾಯೋಗಿಕವಾಗಿ ಪೋಷಕಾಂಶ ಹಾಗೂ ಆರೋಗ್ಯ ವಿಚಾರವಾಗಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ನಡೆಸುತ್ತಿರುವ ಯೋಜನೆಯನ್ನು ಜನರಿಗೆ ತಿಳಿಸಿದರು.
ಸೂಕ್ತ ಪೋಷಕಾಂಶವುಳ್ಳ ಆಹಾರವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಖಂಡಿತವಾಗಿ ಸಹಾಯ ಮಾಡಬಲ್ಲದು ಎಂದು ತಿಳಿಸಿದ ಪರಮಪೂಜ್ಯರು, ಸಿರಿಗೆರೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾಜಾ ತರಕಾರಿಗಳನ್ನು ಸಂಸ್ಥೆಯ ಜಮೀನುಗಳಲ್ಲಿ ಬೆಳೆದು ನೀಡುತ್ತಿರುವ ನೂತನ ಯೋಜನೆಯ ಬಗ್ಗೆ ತಿಳಿಸಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು ಬಹಳ ಉಪಯುಕ್ತ ಯೋಜನೆಯಾಗಿದ್ದು ಅದರಲ್ಲಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸದ್ಯದಲ್ಲಿಯೇ ತಾವು ಕೇಂದ್ರದ ಕೃಷಿ ಮಂತ್ರಿಗಳನ್ನು ರೈತರ ಪರವಾಗಿ ಭೇಟಿ ಮಾಡಿ ತಿಳಿಸಲಿದ್ದೇವೆ ಎಂದು ಪರಮಪೂಜ್ಯರು ಹೇಳಿದರು.
ರೈತರು ಹಾಗೂ ವಿಜ್ಞಾನಿಗಳೊಂದಿಗೆ ಪರಮಪೂಜ್ಯರು ಸಕ್ರಿಯವಾಗಿ ಸಂವಾದವನ್ನು ನಡೆಸಿದರು. ಪೂಜ್ಯರ ವೈಜ್ಞಾನಿಕ ದೃಷ್ಟಿಕೋನ ಹಾಗೂ ಸಮಗ್ರ ಸಾಮಾಜಿಕ ಕಾಳಜಿಯನ್ನು ಮನಗಂಡು ಮಂತ್ರಮುಗ್ಧರಾದರು. ಈ ಸಭೆಯು ರೈತರು ಹಾಗೂ ವಿಜ್ಞಾನಿಗಳ ಅಪೂರ್ವ ಮಿಲನ ಕಾರ್ಯಕ್ರಮವಾಗಿದ್ದು ಚತುರ ರೈತರನ್ನು ತಯಾರು ಮಾಡಬೇಕಾದ ಗುರುತರ ಜವಾಬ್ದಾರಿ ಈ ಸರ್ಕಾರದ ಪ್ರಮುಖ ಸಂಸ್ಥೆಗಳಿಗೆ ಇದೆ ಎಂದು ಮನವರಿಕೆ ಮಾಡಿಕೊಟ್ಟರು.
ಯೋಜನೆಯ ಭಾಗವಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕ ಹಳ್ಳಿಯ ರೈತರುಗಳು ಪರಮಪೂಜ್ಯರ ಆಶೀರ್ವಾಣಿಯಿಂದ ಪುಳಕಿತರಾದರು. ಸಭೆಯಲ್ಲಿ ನಿರ್ದೇಶಕರಾದ ಡಾ. ಅರ್ಥ ಬಂಧು ದಾಸ್, ಡಾ. ವೆಂಕಟಸುಬ್ರಹ್ಮಣ್ಯನ್, ಡಾ. ಫಿಲಿಪ್, ಇತರ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು, ರೈತ ಬಂಧುಗಳು ಭಾಗವಹಿಸಿದ್ದರು.






