SUDDIKSHANA KANNADA NEWS/ DAVANAGERE/ DATE-29-05-2025
ದಾವಣಗೆರೆ: ಭತ್ತದ ನೋಂದಣಿ-ಖರೀದಿ ಪ್ರಕ್ರಿಯೆಯನ್ನು ಜೂನ್ 30 ರವರೆಗೆ ವಿಸ್ತರಣೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರಿಗೆ ಜಿಲ್ಲಾ ರೈತ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು.
ಭತ್ತ ಬೆಳೆದ ರೈತರು ದರ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ರೈತರ ಒತ್ತಡಕ್ಕೆ ಮಣಿದ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿತ್ತದ್ರೂ “ಹಿಂಗಾರು ಹಂಗಾಮು” ಎಂಬ ತಾಂತ್ರಿಕ ದೋಷದಿಂದ ನೋಂದಣಿ
ಆಗಲಿಲ್ಲ. ವಾರ್ಷಿಕ ರೈತರು ಬೇಸಿಗೆ ಮತ್ತು ಮಳೆಗಾಲದ ಬೆಳೆ ಅಂತ ಎರಡು ಹಂಗಾಮಿನಲ್ಲಿ ಮಾತ್ರ ಭತ್ತ ಬೆಳೆಯುತ್ತಾರೆ. ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಖರೀದಿ ಕೇಂದ್ರ ಎಂದು ಪ್ರಾರಂಭಿಸಲಾಯಿತು. ಫ್ರೂಟ್ ಐಡಿ ಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರ ಜಮೀನುಗಳು ಉಳಿಮೆ ಮಾಡಿಕೊಂಡಿದ್ದರಿಂದ ಪಾಳು ಎಂದು ತೋರಿಸಿತ್ತು. ಹೀಗಾಗಿ ನೋಂದಣಿ ಆಗಲಿಲ್ಲ ಎಂದು ತಿಳಿಸಿದರು.
ಆದ್ದರಿಂದ ಖರೀದಿ ಕೇಂದ್ರ ಪ್ರಾರಂಭವಾಗಿ ತಿಂಗಳಾದರೂ ಒಂದು ಚೀಲ ಭತ್ತ ಖರೀದಿ ಮಾಡಲಿಲ್ಲ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿ ರೈತರು ನಲುಗಿ ಹೋದರು. ಸರ್ಕಾರ ತಾಂತ್ರಿಕ ದೋಷ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಲೇ ಬಂದರು. ಕೊನೆಗೆ ಅಂತೂ ಇಂತೂ ಹಂಗಾಮಿನ ತಾಂತ್ರಿಕ ದೋಷ ಸರಿಪಡಿಸಿ, ಬೇಸಿಗೆ ಹಂಗಾಮಿನ ಬೆಳೆ ಎಂದು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಆದರೆ ಮತ್ತೆ ರೈತರ ಗೋಳು ತಪ್ಪಲಿಲ್ಲ. ಕಾರಣವೇನೆಂದರೆ ನೋಂದಣಿ-ಖರೀದಿ ಪ್ರಕ್ರಿಯೆಗೆ ದಿನಾಂಕ:31.05.2025 ಕಡೆ ದಿನವಾಗಿದೆ. ಇಂದಿನಿಂದ 3 ದಿನ ಮಾತ್ರ ಅವಕಾಶ ಇದೆ. ಇನ್ನು ಶೇ.70 ರಷ್ಟು ಭತ್ತ ಕೊಯಿಲು ಆಗಬೇಕಾಗಿದೆ ಎಂದು ಮಾಹಿತಿ ನೀಡಿದರು.
ಮಳೆ ಇದೆ. ಕೊಯ್ದು ಭತ್ತ ಒಣಗಿಸುವುದು ದೊಡ್ಡ ರಂಪಾಟ. ಇಡೀ ಊರು ಹುಡುಕಿದ್ರೂ ಒಂದು ಕೂಲಿ ಆಳು ಸಿಗುವುದಿಲ್ಲ. ರೈತರ ಗಂಡ, ಹೆಂಡತಿ, ಮಕ್ಕಳು, ಇತರೆ ಕುಟುಂಬ ಪರಿವಾರದವರು ಸೇರಿಕೊಂಡು ಸ್ವಲ್ಪ ಬಿಸಿಲು ಬಿದ್ದಾಗ ಹರಡಬೇಕು. ಮೋಡ ಆಗುತ್ತಿದ್ದಂಗೆ ರಾಶಿ ದುಂಡುಗೆ ಮಾಡಿ ಮುಚ್ಚಬೇಕು. ಒಂದು ನಿಮಿಷ ಅತ್ತಿಂದಿತ್ತ ಹೋಗುವಂಗಿಲ್ಲ. ರೈತನ ಪರಿಪಾಠ ಹೇಳತೀರದು. ರೈತರು ಅವಮಾನ ವೈಪರೀತ್ಯದಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 3 ದಿನಗಳಲ್ಲಿ ನೋಂದಣಿ ಮಾಡಿಸಿ, ಖರೀದಿ ಕೇಂದ್ರಕ್ಕೆ ತರಬೇಕು ಎಂದು ಸರ್ಕಾರ ಹೇಳುವುದು ರೈತರಿಗೆ ಬಹಳಷ್ಟು ಅನಾನುಕೂಲವಾಗುತ್ತದೆ. ಇದು ರೈತರ ಕಷ್ಟದ ಅರಿವು ಇಲ್ಲದವರ ರೈತ ವಿರೋಧಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಎಂ.ಎಸ್.ಪಿ ದರಕ್ಕಿಂತ ಕಡಿಮೆ ಖರೀದಿ ಮಾಡದಂತೆ ಕಟ್ಟು ನಿಟ್ಟಿನ ಆದೇಶ ಮಾಡಬೇಕು. ಕಡಿಮೆ ದರಕ್ಕೆ ಖರೀದಿ ಮಾಡಿದ ವರ್ತಕರ ವಿರುದ್ಧ ಬಿಗಿ ಕಾನೂನು ಕ್ರಮ ಕೈಗೊಳ್ಳಬೇಕು. ತೀವ್ರ ಮಳೆ ಹೊಡೆತದಿಂದ ಭತ್ತದ ಬೆಳೆ ಬಿದ್ದು, ಚಾಪೆ ಹಾಸಿದಂತಾಗಿ ಕಾಳು ಸುರಿದು ಬಹಳಷ್ಟು ನಷ್ಟ ಸಂಭವಿಸಿದೆ. ಬೆಳೆ ನಷ್ಟ ಸಮೀಕ್ಷೆ ನಡೆಸಿ, ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಬೆಳೆ ಸಮೀಕ್ಷೆಯನ್ನು ಬೇಕಾಬಿಟ್ಟಿಯಾಗಿ, ಹೊಲಗಳಿಗೆ ಹೋಗದೆ ಕುಳಿತಲ್ಲೇ ಯಾವುದೋ ಪೋಟೋ ಅಪ್ಲೋಡ್ ಮಾಡಿ, ಮಾಡಲಾಗಿದೆ. ಇಂತಹ ಖದೀಮರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಕೇಂದ್ರ ಸರ್ಕಾರದ ಸರ್ಕಾರದ ಎಂ.ಎಸ್.ಪಿ ದರಕ್ಕೆ ರಾಜ್ಯ ಸರ್ಕಾರ ಕ್ವಿಂಟಾಲ್ ಒಂದಕ್ಕೆ ₹1000.00 ಪ್ರೋತ್ಸಾಹ ಧನ ಮಂಜೂರು ಮಾಡಿ, ₹3320.00 ರಂತೆ ಖರೀದಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಭೇಟಿ ಮಾಡಿದ ಜಿಲ್ಲಾ ರೈತ ಒಕ್ಕೂಟದ ನಿಯೋಗದಲ್ಲಿ ಮಾಜಿ ಶಾಸಕ ಎಂ. ಬಸವರಾಜನಾಯ್ಕ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ. ಎಂ. ಸತೀಶ್, ಲೋಕಿಕೆರೆ ನಾಗರಾಜ್, ಬೆಳವನೂರು ನಾಗೇಶ್ವರರಾವ್, ಮಾಜಿ ಮೇಯರ್ ಗಳಾದ ಹೆಚ್.ಎನ್.ಗುರುನಾಥ್, ಕೆ.ಆರ್.ವಸಂತಕುಮಾರ್, ಹೆಚ್ ಎನ್ ಶಿವಕುಮಾರ್, ದೂಡ ಮಾಜಿ ಅಧ್ಯಕ್ಷ ಎ ವೈ.ಪ್ರ ಕಾಶ್, ಮಾಜಿ ಎಪಿಎಂಸಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಕೆ.ವಿ.ಚನ್ನಪ್ಪ, ರೈತ ಮುಖಂಡ ಬಲ್ಲೂರು ರವಿಕುಮಾರ್, ಅಂಜಿನಪ್ಪ ಪೂಜಾರ ಮತ್ತಿತರರು ಇದ್ದರು.