ನವದೆಹಲಿ: ದೆಹಲಿಯ ಪ್ರಸಿದ್ಧ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್100ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಪ್ರಗತಿಯನ್ನು ವಿರೋಧಿಸುವವರ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಕೆಂಪುಕೋಟೆಯ ಭಾಷಣದಲ್ಲಿ ಬಳಸಿದ್ದ “ದಿಮಾಗಿ ನಕ್ಸಲ್” (Dimaagi Naxal) ಪದವನ್ನು ಹೋಮಿಯೋಪತಿ ಔಷಧಿಗೆ ಹೋಲಿಸಿದ ಅವರು, ಈ ಹೇಳಿಕೆ ವಿಪಕ್ಷಗಳ ನೈಜ ಮುಖವಾಡವನ್ನು ಕಳಚಿಹಾಕಿದೆ ಎಂದಿದ್ದಾರೆ.
ಹೋಮಿಯೋಪತಿ ಮಾತ್ರೆ ಕೆಲಸ ಮಾಡಿದೆ:
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನಾನು ಕೆಂಪುಕೋಟೆಯಿಂದ ನೀಡಿದ ‘ದಿಮಾಗಿ ನಕ್ಸಲ್’ ಎಂಬ ಹೋಮಿಯೋಪತಿ ಮಾತ್ರೆಯ ಪ್ರಭಾವ ಈಗ ಕಾಣಿಸುತ್ತಿದೆ. ಹೋಮಿಯೋಪತಿ ಚಿಕಿತ್ಸೆ ಪ್ರಾರಂಭವಾದಾಗ ರೋಗವು ಮೊದಲು ತೀವ್ರಗೊಳ್ಳುತ್ತದೆ, ಅದು ಅದರ ಗುಣ ಲಕ್ಷಣ. ಅದೇ ರೀತಿ ನಾನು ಈ ಮಾತ್ರೆ ನೀಡುತ್ತಿದ್ದಂತೆ, ಎಲ್ಲಾ ‘ದಿಮಾಗಿ ನಕ್ಸಲರು’ ಒಬ್ಬೊಬ್ಬರಾಗಿ ಹೊರಬರಲು ಪ್ರಾರಂಭಿಸಿದರು. ದೇಶದ ಜನತೆ ಈಗ ಇಂತಹ ಆಲೋಚನೆಗಳನ್ನು ಹರಡುವವರ ನೈಜ ಬಣ್ಣವನ್ನು ನೋಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಸಂಕಷ್ಟದ ಸಮಯದಲ್ಲೂ ಭಾರತ ಸುಸ್ಥಿರ:
ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಎದುರಾದ ಸವಾಲುಗಳನ್ನು ನೆನಪಿಸಿಕೊಂಡ ಪ್ರಧಾನಿ, “ಕೋವಿಡ್ ಮಹಾಮಾರಿ, ರಷ್ಯಾ-ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದ ಸಂಘರ್ಷ ಹಾಗೂ ಪೂರೈಕೆ ಸರಪಳಿ ಬಿಕ್ಕಟ್ಟುಗಳ ನಡುವೆಯೂ ಭಾರತ ಧೃತಿಗೆಡದೆ ಮುನ್ನುಗ್ಗಿದೆ. ಪ್ರತಿಯೊಂದು ಬಿಕ್ಕಟ್ಟು ಬಂದಾಗಲೂ ಮೋದಿ ಸಿಲುಕಿಕೊಂಡರು, ಭಾರತ ಕುಸಿಯುತ್ತದೆ ಎಂದು ನನ್ನ ‘ಆತ್ಮೀಯ ವಿಮರ್ಶಕರು’ ಹಾರೈಸುತ್ತಿದ್ದರು. ಆದರೆ ದೇಶದ 140 ಕೋಟಿ ಜನರ ಆಶೀರ್ವಾದದ ಮುಂದೆ ಅವರ ಬಯಕೆಗಳು ಈಡೇರಲಿಲ್ಲ” ಎಂದರು.
ಹಳೆಯ ಆಡಳಿತ ಶೈಲಿಗೆ ಟೀಕೆ:
2013ರ ಕೇದಾರನಾಥ ದುರಂತ ಹಾಗೂ 2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಹಿಂದಿನ ಸರ್ಕಾರಗಳು ಕಾರ್ಯನಿರ್ವಹಿಸಿದ ರೀತಿಯನ್ನು ವಿಮರ್ಶಿಸಿದ ಮೋದಿ, “ಅಂದಿನ ಸರ್ಕಾರಗಳು ಸಮಸ್ಯೆಯನ್ನು ಎದುರಿಸುವ ಧೈರ್ಯ ತೋರದೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕುಸಿತದ ಅಂಚಿಗೆ ತಳ್ಳಿದ್ದವು. ಆದರೆ ಇಂದು ಭಾರತವು ‘ಪಾಲಿಸಿ ಪ್ಯಾರಾಲಿಸಿಸ್’ನಿಂದ ಹೊರಬಂದು ಬಲವಾದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ” ಎಂದು ಪ್ರತಿಪಾದಿಸಿದರು.





Leave a comment