Home ಕ್ರೈಂ ನ್ಯೂಸ್ ಹರಿಹರದಲ್ಲಿ ‘ಲೆಕ್ಕ ಕೊಡಿ’ ಚಳುವಳಿ ತೀವ್ರ: ಪಂಚಮಸಾಲಿ ಪೀಠದ 18 ವರ್ಷಗಳ ಲೆಕ್ಕಕ್ಕೆ ಭಕ್ತರ ಪಟ್ಟು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುವಾಣಿಜ್ಯ

ಹರಿಹರದಲ್ಲಿ ‘ಲೆಕ್ಕ ಕೊಡಿ’ ಚಳುವಳಿ ತೀವ್ರ: ಪಂಚಮಸಾಲಿ ಪೀಠದ 18 ವರ್ಷಗಳ ಲೆಕ್ಕಕ್ಕೆ ಭಕ್ತರ ಪಟ್ಟು!

Share
ಹರಿಹರ
Share

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಕಳೆದ 18 ವರ್ಷಗಳ ಲೆಕ್ಕಪತ್ರಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪಾರದರ್ಶಕ ಲೆಕ್ಕಕ್ಕಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಲೆಕ್ಕಕೊಡಿ ಸಮಿತಿ ಒತ್ತಾಯಿಸಿದೆ.

2008ರಲ್ಲಿ ಟ್ರಸ್ಟ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಭಕ್ತರು ನೀಡಿದ ಕೋಟ್ಯಾಂತರ ನಗದು, ಚಿನ್ನಾಭರಣ ಹಾಗೂ ಸರ್ಕಾರದ ಅನುದಾನದ ಬಳಕೆ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಸಮಿತಿಯ ಅಧ್ಯಕ್ಷ ಎಂ.ಜಿ. ಪರಮೇಶ್ವರ ಗೌಡ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಟ್ರಸ್ಟ್ ಪದಾಧಿಕಾರಿಗಳು ಅವಸರದಲ್ಲಿ ಲೆಕ್ಕ ನೀಡಿ ಕೈತೊಳೆದುಕೊಳ್ಳಲು ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿರುವ ಹೋರಾಟಗಾರರು, ಮಠದ ಆಸ್ತಿಪಾಸ್ತಿಗಳ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಟ್ರಸ್ಟ್‌ನ ಹಿರಿಯ ಸದಸ್ಯರೊಬ್ಬರು ಹಣ ದುರ್ಬಳಕೆಯಾಗಿರುವುದನ್ನು ಒಪ್ಪಿಕೊಂಡು ಪ್ರಮಾಣೀಕರಿಸಿರುವ ಉದಾಹರಣೆಯೂ ಇದೆ. ಅಂದೇ ಈ ಬಗ್ಗೆ ಈ ಹಿಂದೆಯೇ ಲಿಂಗೈಕ್ಯ ಡಾ. ಮಹಾಂತ ಸ್ವಾಮೀಜಿಗಳು ಗಮನ ಸೆಳೆದಿದ್ದರೂ ಟ್ರಸ್ಟ್ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ್ದಾರೆ.

ಲೆಕ್ಕ ಕೇಳಿದವರ ದಿಕ್ಕು ತಪ್ಪಿಸಲು ಹಾಗೂ ಸತ್ಯವನ್ನು ಮುಚ್ಚಿಹಾಕಲು ಯಾವುದೇ ಗಂಭೀರ ಕಾರಣವಿಲ್ಲದಿದ್ದರೂ ಶ್ರೀಪೀಠದ ಸ್ವಾಮೀಜಿಯವರನ್ನು ಮಠದಿಂದ ಉಚ್ಚಾಟಿಸಿರುವುದು ಅತ್ಯಂತ ವಿಷಾದನೀಯ ಎಂದಿದ್ದಾರೆ.

2008 ರಿಂದ 2026ರ ವರೆಗೆ ದಾನಿಗಳು ನೀಡಿದ ದೇಣಿಗೆಯನ್ನು ಸಾರ್ವಜನಿಕ ಸಭೆಯಲ್ಲಿ ಪಾರದರ್ಶಕವಾಗಿ ಮಂಡಿಸಬೇಕು. ಮಠದ ಹೆಸರಿನಲ್ಲಿರುವ ವಜ್ರ, ಬೆಳ್ಳಿ, ಬಂಗಾರ ಮತ್ತು ಬ್ಯಾಂಕ್ ಲಾಕರ್‌ಗಳ ಸಂಪೂರ್ಣ ಮಾಹಿತಿ ಬಹಿರಂಗಗೊಳಿಸಬೇಕು. ಸರ್ಕಾರದಿಂದ ಬಂದ ಅನುದಾನ ದುರ್ಬಳಕೆಯಾಗಿದ್ದರೆ ಅದರ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ಪತ್ರ ಬರೆಯಬೇಕು. 2018 ರಿಂದ ನಡೆದ ಹರ ಜಾತ್ರೆ ಹಾಗೂ ಸಾಮೂಹಿಕ ವಿವಾಹಗಳ ಸಂಪೂರ್ಣ ಲೆಕ್ಕ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದ್ದಾರೆ.

ಒಂದು ವೇಳೆ ಟ್ರಸ್ಟಿಗಳು ಪ್ರಾಮಾಣಿಕವಾಗಿದ್ದಲ್ಲಿ, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಹಾಗೂ ಸೋಮಣ್ಣ ಬೇವಿನಮರದ ಅವರು ಪ್ರಸ್ತಾಪಿಸಿದಂತೆ ಲಿಂಗೈಕ್ಯ ಡಾ. ಶ್ರೀ ಮಹಾಂತ ಸ್ವಾಮಿಗಳ ಗದ್ದುಗೆ ಹಾಗೂ ಇತರ ಪುಣ್ಯ ಕ್ಷೇತ್ರಗಳ ಸನ್ನಿಧಿಯಲ್ಲಿ ‘ಹಣ ದುರ್ಬಳಕೆ ಮಾಡಿಕೊಂಡಿಲ್ಲ’ ಎಂದು ಪ್ರಮಾಣ ಮಾಡಿ ಲೆಕ್ಕ ಒಪ್ಪಿಸಬೇಕು. ಆಗ ಮಾತ್ರ ಸಮಾಜ ನಿಮ್ಮನ್ನು ಒಪ್ಪುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ನಿಮ್ಮ ಹಿಂಬಾಲಕರು ಮತ್ತು ಕೆಲವು ಟ್ರಸ್ಟಿಗಳ ನಡೆ ‘ಮಂಗ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತಾಗಿದೆ’. ತಕ್ಷಣವೇ 18 ವರ್ಷದ ಲೆಕ್ಕಪತ್ರ ನೀಡಿ ಸಮಾಜದಲ್ಲಿನ ಗೊಂದಲಗಳಿಗೆ ಇತಿಶ್ರೀ ಹಾಡಬೇಕು. ಇಲ್ಲದಿದ್ದರೆ ಸಮಾಜ ನಿಮ್ಮನ್ನು ಶಪಿಸುತ್ತದೆ ಎಂದು ಅಧ್ಯಕ್ಷ ಎಂ.ಜೆ. ಪರಮೇಶ್ವರಗೌಡ ಹೊಳೆಸಿರಿಗೆರೆ ಅವರ ಮಾತಿಗೆ ಬಿ.ಜೆ. ಅಜಯ್ ಕುಮಾರ್, ಸಿದ್ದಣ್ಣ ಚಿಕ್ಕಬಿದರಿ ಹಾಗೂ ಮಾಲತೇಶ್ ರಟ್ಟಿಹಳ್ಳಿ ಇತರರು ದನಿಗೂಡಿಸಿದ್ದಾರೆ.

ಸಮಿತಿಯ ಆಕ್ಷೇಪಣೆಗಳು

ಸಮಿತಿಯ ಅಧ್ಯಕ್ಷರಾದ ಎಂ.ಜಿ. ಪರಮೇಶ್ವರ ಗೌಡ ಅವರು ಟ್ರಸ್ಟ್‌ನ ಇತ್ತೀಚಿನ ನಡವಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ:

  1. ಉಚ್ಚಾಟನೆಗೆ ವಿರೋಧ: ಸತ್ಯವನ್ನು ಮುಚ್ಚಿಡಲು ಯಾವುದೇ ಗಂಭೀರ ಕಾರಣವಿಲ್ಲದಿದ್ದರೂ ಶ್ರೀಪೀಠದ ಸ್ವಾಮೀಜಿಯವರನ್ನು ಮಠದಿಂದ ಉಚ್ಚಾಟಿಸಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.

  2. ದುರ್ಬಳಕೆಯ ಒಪ್ಪಿಗೆ: ಈ ಹಿಂದೆ ಟ್ರಸ್ಟ್‌ನ ಹಿರಿಯ ಸದಸ್ಯರೊಬ್ಬರು ಹಣ ದುರ್ಬಳಕೆಯಾಗಿರುವುದನ್ನು ಒಪ್ಪಿಕೊಂಡಿದ್ದರು ಎಂಬ ಅಂಶವನ್ನು ಸಮಿತಿ ನೆನಪಿಸಿದೆ.

  3. ನೈತಿಕ ಸವಾಲು: ಟ್ರಸ್ಟಿಗಳು ಪ್ರಾಮಾಣಿಕರಾಗಿದ್ದರೆ, ಲಿಂಗೈಕ್ಯ ಡಾ. ಶ್ರೀ ಮಹಾಂತ ಸ್ವಾಮಿಗಳ ಗದ್ದುಗೆಯ ಮುಂದೆ ನಿಂತು ‘ಹಣ ದುರ್ಬಳಕೆ ಮಾಡಿಲ್ಲ’ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಮುಂದಿನ ಹಾದಿ

“ಮಂಗ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ” ಟ್ರಸ್ಟ್‌ನ ಕೆಲ ಸದಸ್ಯರ ನಡವಳಿಕೆ ಇದೆ ಎಂದು ಟೀಕಿಸಿರುವ ಹೋರಾಟಗಾರರು, ತಕ್ಷಣವೇ 18 ವರ್ಷಗಳ ಪೂರ್ಣ ಲೆಕ್ಕಪತ್ರ ನೀಡಿ ಸಮಾಜದಲ್ಲಿನ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *