SUDDIKSHANA KANNADA NEWS/ DAVANAGERE/ DATE:14-03-2025
ಹಾವೇರಿ: ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ರಟ್ಟೆಹಳ್ಳಿಯ ನರ್ಸ್ ಸ್ವಾತಿ ರಮೇಶ್ ಬ್ಯಾಡಗಿ ಹತ್ಯೆ ಪ್ರಕರಣ ಸಂಬಂಧ ಹಿರೇಕೆರೂರು ಪೊಲೀಸರು ನಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಇಬ್ಬರು ಆರೋಪಿಗಳಿಗೆ ಶೋಧ ಮುಂದುವರಿಸಿದ್ದಾರೆ.
ನಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಮತ್ತಿಬ್ಬರು ಇರುವುದು ಗೊತ್ತಾಗಿದೆ. ನಯಾಜ್ ನನ್ನು ಬಂಧಿಸಿದ್ದೇವೆ. ಇನ್ನೂ ವಿನಾಯಕ್ ಮತ್ತು ದುರ್ಗಾಚಾರಿ ನಾಪತ್ತೆಯಾಗಿದ್ದು, ಆದಷ್ಟು ಬೇಗ ಬಂಧಿಸುತ್ತೇವೆ. ಈ ಮೂವರು ಸೇರಿ ಹತ್ಯೆ ಮಾಡಿದ್ದಾರೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ತಾಯಿ ಏನು ಹೇಳಿದ್ರು…?
ಇನ್ನು ಪುತ್ರಿ ನಾಪತ್ತೆ ಹಾಗೂ ಕೊಲೆ ವಿಚಾರ ಸಂಬಂಧ ಮೃತಳ ತಾಯಿ ಶಶಿರೇಖಾ ಮಾಹಿತಿ ನೀಡಿದ್ದಾರೆ. ನನ್ನ ಮಗಳು ಯಾರನ್ನೂ ಲವ್ ಮಾಡುತ್ತಿರಲಿಲ್ಲ. ಮನೆ ಬಳಿ ಯಾರೂ ಬಂದಿಲ್ಲ. ವಿನಾಕಾರಣ ಆಕೆಯ ತೇಜೋವಧೆ ಮಾಡಬೇಡಿ
ಎಂದು ಮನವಿ ಮಾಡಿದ್ದಾರೆ.
ನರ್ಸಿಂಗ್ ಓದುವುದನ್ನು ಮುಗಿಸಿದ್ದಳು. ಕೆಲಸಕ್ಕೂ ಹೋಗುತ್ತಿದ್ದಳು. ರಾಣೇಬೆನ್ನೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದವಳು ವಾಪಸ್ ಮನೆಗೆ ಬಂದಿರಲಿಲ್ಲ. ಶನಿವಾರ ಪ್ರಾಕ್ಟಿಕಲ್ ಮುಗಿಸಿಕೊಂಡು ಬಂದಿದ್ದಳು. ಭಾನುವಾರ ಮನೆಯಲ್ಲೇ ಇದ್ದಳು. ಆದ್ರೆ, ಮಾರ್ಚ್ 3ರಂದು ಮನೆಯಿಂದ ಹೋಗಿ ಬರುತ್ತೇನೆ ಎಂದು ಹೋದವಳು ಬಂದಿಲ್ಲ. ನಾವು ಪೊಲೀಸರಿಗೆ ದೂರು ನೀಡಿದ್ದೆವು. ಆದ್ರೆ, ಪತ್ತೆಯಾಗಿರಲಿಲ್ಲ. ಸಂಬಂಧಿಕರು, ಕಾಲೇಜು, ಸ್ನೇಹಿತೆಯರು, ಕೆಲಸ ಮಾಡುತ್ತಿದ್ದ ಸ್ಥಳ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.
ರಾಣೇಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಪೊಲೀಸರಿಗೆ ಮಾಹಿತಿ ಸಿಕ್ಕಿರಲಿಲ್ಲ. ಅನಾಥ ಶವ ಎಂದುಕೊಂಡಿದ್ದರು. ಆ ನಂತರ ಈ ಮೃತದೇಹ ರಾಣೇಬೆನ್ನೂರಿನ
ರಟ್ಟೆಹಳ್ಳಿ ಗ್ರಾಮದ ಸ್ವಾತಿ ಎಂಬುದು ಗೊತ್ತಾಗಿತ್ತು. ಮೂವರು ಈಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಅದು ಈಗ ನಿಜವಾಗಿದೆ.
ಹತ್ಯೆಯಾದ ಯುವತಿಯನ್ನು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ಗುರುತಿಸಲಾಗಿದೆ. ಮಾ.6 ರಂದು ಯುವತಿಯ ಮೃತದೇಹ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಮೊದಲು ಅಪರಿಚಿತ ಯುವತಿಯ ಶವ ಎಂದು ಹಲಗೇರಿ ಪೊಲೀಸರು ಘೋಷಿಸಿದ್ದರು. ಬಳಿಕ ವಾರಸುದಾರರು ಯಾರೂ ಇಲ್ಲದ ಹಿನ್ನೆಲೆ, ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿತ್ತು. ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ ಇದು ಸ್ವಾತಿ ಮೃತದೇಹ ಎಂಬುದು ಗೊತ್ತಾಗಿದೆ.
ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢಪಟ್ಟಿದೆ. ಬಳಿಕ ತನಿಖೆ ತೀವ್ರಗೊಳಿಸಿದ ಹಲಗೇರಿ ಪೊಲೀಸರು, ಮಾ.3 ರಂದು ಕಾಣೆಯಾಗಿದ್ದ ಯುವತಿಯ ಗುರುತನ್ನು ಪತ್ತೆಹಚ್ಚಿದ್ದರು. ಇನ್ನೂ
ಸ್ವಾತಿ ಪೋಷಕರು, ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಆಕೆ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಸ್ವಾತಿ ತಂದೆ ಮೃತಪಟ್ಟಿದ್ದು, ತಾಯಿ ಜೊತೆ ಹಲಗೇರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ನಡುವೆ ಹಿಂದೂ ಸಂಘಟನೆಗಳು ಜಸ್ಟೀಸ್ ಫಾರ್ ಸ್ವಾತಿ ಎಂಬ ಅಭಿಯಾನ ನಡೆಸುತ್ತಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕಾನೂನಿನಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದು ಒತ್ತಾಯಿಸುತ್ತಿದ್ದಾರೆ.