ಬೆಂಗಳೂರು: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ, ಹಿಮಪಾತ ಹಾಗೂ ಭೂಕುಸಿತದ ದುರಂತಗಳು ಇಡೀ ಜಗತ್ತನ್ನೇ ನಡುಗಿಸಿವೆ. ನೂರಾರು ಜೀವಗಳು ಬಲಿಯಾಗಿ, ಸಾವಿರಾರು ಕುಟುಂಬಗಳು ರಸ್ತೆಗೆ ಬಿದ್ದಿರುವ ಈ ಕಠಿಣ ಪರಿಸ್ಥಿತಿಯ ನಡುವೆಯೇ, ಅರ್ಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಪೀಠಾಧ್ಯಕ್ಷ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನುಡಿದಿದ್ದರು ಎನ್ನಲಾದ ಕಾಲಜ್ಞಾನದ ಭವಿಷ್ಯವಾಣಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕೋಡಿಮಠದ ಶ್ರೀಗಳು ಕಳೆದ ಕೆಲವು ತಿಂಗಳ ಹಿಂದೆ ನುಡಿದಿದ್ದ ಭವಿಷ್ಯದಲ್ಲಿ, “ಜಾಗತಿಕವಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಜಲ ಸುನಾಮಿ ಹಾಗೂ ಪ್ರಕೃತಿ ವಿಕೋಪಗಳಿಂದ ಒಂದೆರಡು ದೇಶಗಳಿಗೆ ಭಾರೀ ಹಾನಿಯಾಗಲಿದೆ. ಭೂಮಿ ತನ್ನ ಸ್ಥಿರತೆ ಕಳೆದುಕೊಳ್ಳಲಿದ್ದು, ಜಲಬಾಧೆ ಹಾಗೂ ಸಾವು-ನೋವು ಹೆಚ್ಚಾಗಲಿವೆ” ಎಂದು ಎಚ್ಚರಿಸಿದ್ದರು. ಪ್ರಸ್ತುತ ನೇಪಾಳದಲ್ಲಿ ನಡೆದಿರುವ ವಿನಾಶಕಾರಿ ಜಲಪ್ರಳಯವನ್ನು ಕೋಡಿಶ್ರೀಗಳ ಈ ಮಾತಿಗೆ ಹೋಲಿಸಿ ನೆಟ್ಟಿಗರು ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲದೆ, ಪ್ರಕೃತಿಯ ಮೇಲಿನ ಮಾನವನ ಅತಿಯಾದ ಹಸ್ತಕ್ಷೇಪ, ಅತಿಯಾದ ಬೋರ್ವೆಲ್ ಕೊರೆಯುವಿಕೆಯಿಂದ ಭೂಮಿಯ ತಳಪಾಯ ಸಡಿಲಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಹಾಗೂ ದಕ್ಷಿಣ ಭಾರತದ ಕೆಲವು ಭಾಗಗಳಲ್ಲೂ ಪ್ರಕೃತಿ ವಿಕೋಪದ ಮುನ್ಸೂಚನೆಗಳಿವೆ ಎಂದು ಶ್ರೀಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಭವಿಷ್ಯವಾಣಿಗಳು ಮತ್ತು ಕಾಲಜ್ಞಾನದ ಹೇಳಿಕೆಗಳಿಗೆ ಯಾವುದೇ ವೈಜ್ಞಾನಿಕ ದೃಢೀಕರಣವಿಲ್ಲದಿರುವುದರಿಂದ, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರಕೃತಿ ವಿಕೋಪಗಳನ್ನು ಎದುರಿಸಲು ಮುನ್ನೆಚ್ಚರಿಕೆ, ಪರಿಸರ ಸಂರಕ್ಷಣೆ ಮತ್ತು ಮಾನವೀಯ ಸ್ಪಂದನೆ ಮಾತ್ರವೇ ನಮಗೆ ನಿಜವಾದ ದಾರಿದೀಪವಾಗಿದೆ





Leave a comment