ನಲ್ಗೊಂಡ: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಶಾಲೆಯ ಪ್ರಿನ್ಸಿಪಾಲ್ ಕಲ್ಲು ರೂಪಾರೆಡ್ಡಿ ಅವರ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣದಲ್ಲಿ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ವಂಶಿ ಹಾಗೂ ಆತನ ಸಹಚರ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಜೆಬಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿದ್ದ ರೂಪಾರೆಡ್ಡಿ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಂತಕರು ಕೈಗಳಿಗೆ ಗ್ಲೌಸ್ ಧರಿಸಿದ್ದರಿಂದ ಸ್ಥಳದಲ್ಲಿ ಬೆರಳಚ್ಚು ಸೇರಿದಂತೆ ಪ್ರಮುಖ ಸುಳಿವುಗಳು ಸಿಗದೆ ತನಿಖೆ ಆರಂಭದಲ್ಲಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.
ಆರೋಪಿಗಳು ಕೃತ್ಯ ಎಸಗುವಾಗ ಗ್ಲೌಸ್ ಧರಿಸಿದ್ದರಿಂದ ಸ್ಥಳದಲ್ಲಿ ಯಾವುದೇ ಬೆರಳಚ್ಚು ಸುಳಿವು ಸಿಗದೆ ತನಿಖೆ ಸವಾಲಾಗಿತ್ತು. ಡಿಎಸ್ಪಿ ಶ್ರೀನಿವಾಸರಾವ್ ನೇತೃತ್ವದ ಮೂರು ವಿಶೇಷ ಪಡೆಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿದಂತೆ 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದವು.
ತನಿಖೆ ಚುರುಕುಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಂಗಳವಾರ ಇಬ್ರಾಹಿಂಪಟ್ಟಣಂ ಬಳಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ 10ನೇ ತರಗತಿ ವಿದ್ಯಾರ್ಥಿ ವಂಶಿ ಹಾಗೂ ಮತ್ತೊಬ್ಬ ವ್ಯಕ್ತಿ ಹತ್ಯೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹತ್ಯೆಯ ನಂತರ ಪ್ರಿನ್ಸಿಪಾಲ್ ಮನೆಯಲ್ಲಿದ್ದ ಸುಮಾರು ₹4 ಲಕ್ಷ ನಗದನ್ನು ಕಳವು ಮಾಡಲಾಗಿದ್ದು, ಘಟನೆಗೆ ನಗದಿನ ಆಸೆಯೇ ಕಾರಣವೇ ಅಥವಾ ಶಾಲೆಯ ಶಿಸ್ತುಕ್ರಮದ ಮೇಲಿನ ದ್ವೇಷವೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





Leave a comment