SUDDIKSHANA KANNADA NEWS/ DAVANAGERE/ DATE-30-06-2025
ದಾವಣಗೆರೆ: ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಭದ್ರ ನದಿ ಸೇತುವೆ ಬಳಿ ಮಗುವಿನೊಂದಿಗೆ ತಾಯಿ ಹಾರಲು ಹೋಗುತ್ತಿದ್ದನ್ನು ಗಮನಿಸಿ 112 ಹೊಯ್ಸಳ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.
ಇಂದು ಹೊನ್ನಾಳಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತುಂಗಭದ್ರಾ ಸೇತುವೆ ಬಳಿ ಓರ್ವ ಮಹಿಳೆ ಹಾಗೂ ತನ್ನ ಮಗುವಿನೊಂದೊಂದಿಗೆ ತುಂಗಭದ್ರಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆಗ ಅಲ್ಲಿನ ಸ್ಥಳೀಯರೊಬ್ಬರು ಕೂಡಲೇ 112 ಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿಗಳಾದ ಎ.ಎಸ್.ಐ ಅಶೋಕ ರೆಡ್ಡಿ ಹಾಗೂ ಹೊಯ್ಸಳ ವಾಹನ ಚಾಲಕ ಲೋಕೇಶ್ ಅವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಸಂತ್ರಸ್ತೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ.

READ ALSO THIS STORY: ದಾವಣಗೆರೆ: ಮಹಿಳೆಯರಿಗೆ ಉಚಿತ ಫಾಸ್ಟ್ ಪುಡ್ ತಯಾರಿಕೆ ತರಬೇತಿ
ಸಂತ್ರಸ್ತೆಗೆ ಸಾಂತ್ವನ ಮಾಡಿ ವಿಚಾರಿಸಿದ್ದು, ಹೊನ್ನಾಳಿ ತಾಲ್ಲೂಕಿನವರೇ ಆಗಿದ್ದಾರೆ. ಸಂತ್ರಸ್ತೆಯು ಕೌಟಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ನದಿಗೆ ಹಾರಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತೆ ಹಾಗೂ ಮಗುವನ್ನು ಹೊನ್ನಾಳಿ ಠಾಣೆಗೆ ಕರೆದೊಯ್ದು ಹೊನ್ನಾಳಿ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ ಅವರ ಬಳಿ ಹಾಜರುಪಡಿಸಿದ್ದು, ಪಿಐ ಹೊನ್ನಾಳಿಯವರು ಮಹಿಳೆಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ಉಪಚರಿಸಿದ್ದಾರೆ. ಸಂತ್ರಸ್ತೆ ಮತ್ತು ಮಗುವನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಕೌಟಂಬಿಕ ಕಲಹದಿಂದ ಮನನೊಂದು ನದಿಗೆ ಹಾರಲು ಹೋಗಿದ್ದ ತಾಯಿ ಮಗು ರಕ್ಷಣೆ ಕಾರ್ಯದಲ್ಲಿ ಯಶಸ್ವಿಯಾದ 112 ಹೊಯ್ಸಳ ಕರ್ತವ್ಯ ಅಧಿಕಾರಿಗಳಾದ ಎ.ಎಸ್.ಐ ಅಶೋಕ ರೆಡ್ಡಿ ಹಾಗೂ ಹೊಯ್ಸಳ ವಾಹನ ಚಾಲಕ ಲೋಕೇಶ್ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ. ಪೊಲೀಸ್ ಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಾಗಿ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡುವಂತೆ ಹೇಳಿದ್ದಾರೆ.