SUDDIKSHANA KANNADA NEWS/ DAVANAGERE/ DATE-25-04-2025
ದಾವಣಗೆರೆ: ಕಾಣೆಯಾಗಿದ್ದ ಮಗುವನ್ನು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಸೇರಿಸಿ 112 ಹೊಯ್ಸಳ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಏಪ್ರಿಲ್ 24ರಂದು ಮಧ್ಯಾಹ್ನ ಹೊನ್ನಾಳಿ ಠಾಣೆಯ 112 ಹೊಯ್ಸಳ ಕ್ಕೆ ಕರೆ ಬಂದಿದ್ದು, ಕೂಡಲೇ 112 ಕರ್ತವ್ಯ ಅಧಿಕಾರಿಗಳು ಘಟನಾ ಸ್ಥಳವಾದ ಹೊನ್ನಾಳಿ ಟೌನ್ ನಲ್ಲಿನ ಬಸ್ ಸ್ಟ್ಯಾಂಡ್ ಗೆ ಹೋಗಿ ದೂರುದಾರರನ್ನು ಭೇಟಿ ಮಾಡಿ ವಿಚಾರಿಸಿದರು.
ದಾವಣಗೆರೆ ಜಿಲ್ಲೆ, ಹೊನ್ನಾಳಿ ಟೌನ್ ನ ಬಸ್ ಸ್ಟ್ಯಾಂಡ್ ನಲ್ಲಿ ಮಲೇಬೆನ್ನೂರು ವಾಸಿಯಾದ ಸವಿತಾ ತಮ್ಮ ತವರೂರುಗೆ ತೆರೆಳಲು ಬಸ್ ಸ್ಟ್ಯಾಂಡ್ ಗೆ ಬಂದು ನಿಂತಿದ್ದು, ಆ ಸಮಯದಲ್ಲಿ ತಮ್ಮ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದಾಗ ಸುಮಾರು 5 ವರ್ಷದ ಮಗಳು ಕಾಣಲಿಲ್ಲ. ಅಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಗಾಬರಿಗೊಂಡು 112 ಗೆ ಕರೆ ಮಾಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿಗಳು ಬಸ್ ಸ್ಟ್ಯಾಂಡ್ ಸುತ್ತಮುತ್ತ ಹುಡುಕಾಡಿದ್ದು ಕಾಣದೇ ಇದ್ದಾಗ ಅನುಮಾನಗೊಂಡು ಕೂಡಲೇ ಆ ಸಮಯದಲ್ಲಿ ಬಸ್ ಸ್ಟ್ಯಾಂಡ್ ನಿಂದ ಬೇರೆ ಬೇರೆ ಕಡೆಗೆ ತೆರಳಿದ ಬಸ್ ಗಳ ಮಾಹಿತಿ ಪಡೆದು ವಿಚಾರಣೆ ಮಾಡಿದಾಗ ಹಿರೇಕೆರೂರು ಕಡೆಗೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಬಳಿ ಮಾಸೂರು ಗ್ರಾಮದ ಬಳಿ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರನ್ನು ವಿಚಾರಸಿದಾಗ ಬಸ್ ನಲ್ಲಿ ಮಗುವು ಇರುವುದು ತಿಳಿದು ಬಂದಿತ್ತು. ಮಗುವಿನ ಬಗ್ಗೆ ಖಚಿತಪಡಿಸಿಕೊಳ್ಳಲಾಗಿರುತ್ತದೆ.
ಸವಿತಾ ಅವರ ಮಗಳು ಅವರ ಗಮನಕ್ಕೆ ಬಾರದೇ ಆಕಸ್ಮಿಕವಾಗಿ ಬೇರೆ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿಕೊಂಡು ಹೋಗಿದ್ದು ತಿಳಿದುಬಂದಿರುತ್ತದೆ. ಕೂಡಲೇ ಮಗುವಿನ ಪೋಷಕರನ್ನು ವಾಹನದಲ್ಲಿ ಮಗುವಿದ್ದ ಸ್ಥಳಕ್ಕೆ ಕಳುಹಿಸಲಾಯಿತು. ಪೋಷಕರು ತಮ್ಮ ಮಗಳನ್ನು ಕರೆದುಕೊಂಡು ಬಂದಿರುತ್ತಾರೆ. ಬಸ್ಸಿನಲ್ಲಿ ಹೋಗಿದ್ದ ಮಗು ಪೋಷಕರ ಮಡಿಲು ಸೇರಿದೆ.
ಹೊನ್ನಾಳಿ ಟೌನ್ ಬಸ್ ಸ್ಟ್ಯಾಂಡ್ ನಲ್ಲಿ ಆಕಸ್ಮಿಕವಾಗಿ ಬೇರೆ ಬಸ್ ಹತ್ತಿಕೊಂಡು ಹೋಗಿದ್ದ ಮಗುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ 112 ಹೊಯ್ಸಳ ಕರ್ತವ್ಯ ಅಧಿಕಾರಿಗಳಾದ ಹೆಡ್ ಕಾನ್ಸ್ಟೇಬಲ್ ಹರೀಶ್ ಹಾಗೂ 112 ಹೊಯ್ಸಳ ಚಾಲಕರಾದ ಲೋಕೇಶ್ವರಪ್ಪ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.