SUDDIKSHANA KANNADA NEWS/ DAVANAGERE/ DATE: 06-09-2023
ದಾವಣಗೆರೆ: ಮಾಯಕೊಂಡ(Mayakonda)ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಸತಿಯುತ ಪ್ರತಿಭಾನ್ವಿತ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ರಾತ್ರಿ ಊಟದ ನಂತರ 38 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಪ್ರಕರಣವನ್ನು ಶಾಸಕ ಕೆ. ಎಸ್. ಬಸವಂತಪ್ಪ ಗಂಭೀರವಾಗಿ ಪರಿಗಣಿಸಿದ್ದರು. ಶಾಸಕರು ಭೇಟಿ ನೀಡುತ್ತಿದ್ದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ದೌಡಾಯಿಸಿ ಬಂದರು.

ಶಿವಮೊಗ್ಗದಲ್ಲಿ ಕರೆದಿದ್ದ ಕಾಡಾ ಸಭೆಗೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತೆರಳಿದ್ದ ಕಾರಣ ಎಡಿಸಿ ಲೋಕೇಶ್ ಅವರು ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿ ಆರ್. ಬಿ. ಬಸರಗಿ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಜಿ. ಡಿ. ರಾಘವನ್, ಸಮಾಜ ಕಲ್ಯಾಣ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಷಣ್ಮುಖಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸಿದರು.
ಮಾಯಕೊಂಡ(Mayakonda)ಕ್ಕೆ ಡಿಸಿ, ಸಿಇಒ ಭೇಟಿ:
ಕೆಲ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರಿಗೆ ಸದ್ಯಕ್ಕೆ ರಿಲೀಫ್, ಎಡದಂಡೆ ನಾಲೆ ನೀರು ಬಂದ್, ಬಲದಂಡೆ ನಾಲೆಯಲ್ಲಿ ನೀರು ಯಥಾಸ್ಥಿತಿ: ಆತಂಕಪಡಬೇಕಿಲ್ಲ ರೈತರು ಎಂದ ಮಧು ಬಂಗಾರಪ್ಪ
ಮಂಗಳವಾರ ರಾತ್ರಿಯ ಊಟಕ್ಕೆ ಮಾಡಲಾದ ಅನ್ನ ಸರಿಯಾಗಿ ಬೇಯಿಸದ ಕಾರಣ ಕೆಲ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವಿದ್ಯಾರ್ಥಿಗಳನ್ನು ತಕ್ಷಣ ಸಿ.ಜಿ ಆಸ್ಸತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿನಿಯರ ಹೆಚ್ಚು ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಯಾವುದೇ ಅಪಾಯ ಇರುವುದಿಲ್ಲ. ಮಕ್ಕಳ ಪೋಷಕರಿಗೂ ಸಹ ಮಾಹಿತಿಯನ್ನು ನೀಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಸಿ.ಇ.ಒ ವಸತಿ ಶಾಲೆಯಲ್ಲಿನ ಅಡುಗೆ ಮನೆ, ಉಗ್ರಾಣ ಪರಿಶೀಲನೆ ನಡೆಸಿ ಸ್ವಚ್ಚತೆ ಕಾಪಾಡಲು ಸೂಚನೆ ನೀಡಿದರು. ನಿರ್ಲಕ್ಷ್ಯ ವಹಿಸಿದ ಈ ವಸತಿ ಶಾಲೆಯ ವಾರ್ಡನ್ ಅವರನ್ನು ತಕ್ಷಣ ಬದಲಾಯಿಸಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್.ಕೆ ಉಪಸ್ಥಿತರಿದ್ದರು.
ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ:
ಮಾಯಕೊಂಡ (Mayakonda) ವಸತಿಯುತ ಪ್ರೌಢಶಾಲೆಯಲ್ಲಿ ಮಂಗಳವಾರ ರಾತ್ರಿ ಊಟದ ನಂತರ 15 ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು ಗುಣಮುಖರಾಗುತ್ತಿದ್ದು ಬುಧವಾರ ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಭೇಟಿ ನಂತರ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಮತ್ತು ಅಧಿಕಾರಿಗಳು, ಅಡುಗೆ ತಯಾರು ಮಾಡುವ ಕೊಠಡಿ, ಸಾಮಗ್ರಿಗಳ ಕೊಠಡಿ, ಶೌಚಾಲಯ ಸೇರಿದಂತೆ ವಸತಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಡುಗೆಗೆ ಬಳಸುವ ಕೊಳೆತ ತರಕಾರಿ, ಹುಳುಗಳು ಬಿದ್ದಿದ್ದ ಬೇಳೆ, ಮುಗ್ಗು ಬಂದಿದ್ದ ಅಕ್ಕಿ ಮತ್ತು ಅಡುಗೆ ಸಾಮಗ್ರಿಗಳು, ಗಬ್ಬುನಾರುವ ಶೌಚಾಯಲಯ, ಪಾಚಿ ಕಟ್ಟಿದ ಸ್ನಾನ ಗೃಹ, ಟುಕ್ಕು ಹಿಡಿದ ಬೀಸಿ ನೀರಿನ ಗಿಜರ್ ಕಂಡು ವಾರ್ಡನ್, ಅಡುಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕೊಳೆತ ತರಕಾರಿ, ಹುಳುಗಳು ಬಿದ್ದ ಅಡುಗೆ ಸಾಮಗ್ರಿಗಳು, ಸುರಕ್ಷಿತ ಇಲ್ಲದ ವಸತಿ ಕೊಠಡಿಗಳನ್ನು ತೋರಿಸಿ ನಿಮ್ಮ ಮಕ್ಕಳಿಗೆ ಇಂತಹ ಊಟ, ಇಂತಹ ವಸತಿ ಕೊಠಡಿಗಳನ್ನು ಕೊಡ್ತೀರಾ ಎಂದು ಪ್ರಶ್ನಿಸಿದರು.

ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮಕ್ಕಳಿಗೆ ಸಾಕಷ್ಟು ಸೌಲಭ್ಯ ಕೊಡುತ್ತದೆ. ಆದರೆ ಅಧಿಕಾರಿಗಳು ಮಕ್ಕಳಿಗೆ ಸರಿಯಾಗಿ ತಲುಪಿಸುವುದಿಲ್ಲ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ವಸತಿ ನಿಲಯದಲ್ಲಿ ಅಧಿಕಾರಿಗಳ ಸಭೆ:
ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಸಭೆ ನಡೆಸಿದ ಶಾಸಕರು, ಈ ವಸತಿಯಲ್ಲಿ ಶಾಲೆಯಲ್ಲಿ ಸರಿಯಾದ ಸೌಲಭ್ಯ ಇಲ್ಲ. ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡುತ್ತಿಲ್ಲ. ಇದಕ್ಕೆ ನೀವುಗಳೇ ಕಣ್ಣಾರೆ ಕಂಡಿರುವ ಸಾಕ್ಷಿ ಇದೆ. ಅಲ್ಲದೇ ನಾನು ಆಗಸ್ಟ್ 15 ರಂದು ಶಾಲೆಗೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ವಸತಿ ಶಾಲೆಗೆ ಭೇಟಿಯ ಪುಸ್ತಕದಲ್ಲಿ ಈ ಬಗ್ಗೆ ಬರೆದು ಹೋಗಿದ್ದೆ. ಅಲ್ಲದೇ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಾಯಕ ಸೆ.4ರಂದು ವಸತಿ ಶಾಲೆಗೆ ಭೇಟಿ ನೀಡಿ ಊಟ ಸರಿಯಿಲ್ಲ. ಅನ್ನ, ಸಾಂಬಾರು ಸರಿಯಿಲ್ಲ. ಅಡುಗೆ ಸಾಮಾಗ್ರಿಗಳನ್ನು ಮುಚ್ಚಿಟ್ಟಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವಸತಿ ನಿಲಯದ ರಿಜಿಸ್ಟರ್ ನಲ್ಲಿ ಬರೆದು ಬಂದಿದ್ದಾರೆ. ಆದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೂಡಲೇ ತನಿಖೆ ನಡೆಸಿ ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕ ನಾಗರಾಜ್ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ತಹಸೀಲ್ದಾರ್ ಡಾ. ಅಶ್ವತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಡಿಎಚ್ ಒ ಷಣ್ಮುಖಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಬಸರಗಿ, ಮಾಯಕೊಂಡ ಪಿಎಸ್ ಐ ಅಜ್ಜಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪೋಷಕರ ಆಕ್ರೋಶ:
ಊಟ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ್ದ ಮಕ್ಕಳ ಪೋಷಕರು ಆಧಿಕಾರಿಗಳು, ಶಾಲೆಯ ವಾರ್ಡನ್, ಅಡುಗೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕುಡಿಯುವ ನೀರು, ಆಹಾರ ಪರೀಕ್ಷೆಗೆ:
ವಸತಿ ಶಾಲೆಯಲ್ಲಿ ಉಪಯೋಗಿಸುವ ಕುಡಿಯುವ ನೀರು, ತಯಾರಿಸಿದ್ದ ಆಹಾರವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ಕುಡಿಯುವ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿದೆ. ಇನ್ನೂ ಆಹಾರದ ವರದಿ ಬಂದಿಲ್ಲ ಎಂದು ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋವಿಂದರಾಜು ತಿಳಿಸಿದ್ದಾರೆ.