ದಾವಣಗೆರೆ: ಏನ್ ತಡೀಬೇಕು. ಏನ್ ಪ್ರತಿಭಟನೆ, ಅಯ್ಯೋ ಬಾ. ಅವ್ನಿಗೆ ಕೆಲಸ ಇಲ್ಲವೆಂದ್ರೆ ನಮಗಿಲ್ಲವಾ? ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಅಸಾಂವಿಧಾನಿಕ ಪದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಕೆರಳಿ ಕೆಂಡವಾಗಿರುವ ಬಿಜೆಪಿಗರು ಕ್ಷಮೆಯಾಚನೆ ಆಗ್ರಹಿಸಿರುವ ಕುರಿತಂತೆ ನೀಡಿದ ಪ್ರತಿಕ್ರಿಯೆ ಇದು.
ಇನ್ನು ಕ್ಷಮೆಯಾಚನೆ ಕುರಿತಂತೆ ಸ್ಪಷ್ಟವಾಗಿ ಹೇಳದ ಸಚಿವರು, ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಒಂದು ವಾರದೊಳಗೆ ಅಸಂವಿಧಾನಿಕ ಪದ ಬಳಸಿ ಅಪಮಾನಿಸಿರುವ ಬಿ. ಪಿ. ಹರೀಶ್ ಕ್ಷಮೆಯಾಚಿಸದಿದ್ದರೆ ಎಸ್. ಎಸ್. ಮಲ್ಲಿಕಾರ್ಜುನ್ ರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು
ಎಚ್ಚರಿಸಿದ್ದರು.
ರೈತರಿಗೆ ದಿಕ್ಕು ತಪ್ಪಿಸುವ ಕೆಲಸ ಯಾವುದೇ ಕಾರಣಕ್ಕೂ ಮಾಡಬಾರದು. ವಾಸ್ತವಾಂಶ ಏನಿದೆ ಅದನ್ನು ತಿಳಿಸಬೇಕು. ಬೆಂಗಳೂರಿನಲ್ಲಿ ಭದ್ರಾ ಅಚ್ಚುಕಟ್ಟುದಾರ ಪ್ರದೇಶಾಭಿವೃದ್ಧಿ ಮಂಡಳಿ ಸಭೆ ನಡೆದಿತ್ತು. ಆಗ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ನೀರಾವರಿ ತಜ್ಞ ನರಸಿಂಹಪ್ಪ, ಶಾಸಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಏನೂ ಮಾತನಾಡಿಲ್ಲ. ರೈತರಿಗೆ ಸತ್ಯ ಹೇಳಬೇಕು. ಅದನ್ನು ಬಿಟ್ಟು ಬೇರೆ ಏನೇನೋ ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.
ಎಡದಂಡೆ ಹಾಗೂ ಬಲದಂಡೆ ನಾಲೆಯ ರೈತರು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ಅದನ್ನು ಬಿಟ್ಟು ಒಬ್ಬರು ನೀರು ಹರಿಸಿ ಅನ್ನೋದು, ಮತ್ತೊಬ್ಬರು ನೀರು ಹರಿಸುವುದು ಬೇಡ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಸಚಿವರನ್ನು ಕೇಳಿ ಎಂದು ಶಾಸಕರು ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ಹರಿಹರಕ್ಕೆ ಸಚಿವರು ಬಂದಾಗ ಕೇಳಿ ಎಂದರೇ ಹೇಗೆ? ಸಭೆಯಲ್ಲಿ ಆಗ್ರಹಿಸಬಹುದಿತ್ತಲ್ವಾ. ಅದನ್ನು ಬಿಟ್ಟು ರೈತರ ಬಳಿ ಸುಳ್ಳು ಹೇಳಿದರೆ ಸುಮ್ಮನಿರಬೇಕಾ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಗುಡುಗಿದರು.
ಹರಿಹರ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಬಂದ ಸಂದರ್ಭದಲ್ಲಿ ರೈತರೊಬ್ಬರು ಈ ಬಾರಿ ಭದ್ರಾ ಜಲಾಶಯದಿಂದ ನೀರು ಹರಿಸಿಲ್ಲ. ಹರಿಹರ ಭಾಗದ ರೈತರಿಗೆ ಭಹಳ ತೊಂದರೆಯಾಗಿದೆ ಎಂದು ಕೇಳಿರಿತ್ತಾರೆ. ರೈತನ ಬಾಯಲ್ಲಿ ಬಿಜೆಪಿ ಶಾಸಕ ಹರೀಶಣ್ಣ ಪದ ಕೇಳುತ್ತಿದ್ದಂತೆ ಮಲ್ಲಿಕಾರ್ಜುನ್ ರವರು “ಅವನ್ಯಾವನಿಗೋ ಅಣ್ಣ ಅಂತೀಯಾ, ನಿನ್ನ ಸ್ವಂತ ಅಣ್ಣನಿಗೆ ಅಣ್ಣ ಎಂದು ಹೇಳಿದ್ದೀಯ, ಹೋಗೋ ಹೋಗೋ” ಎಂದು ಏಕವಚನದಲ್ಲಿ ರೈತನಿಗೆ ಗದರಿ, ಅಷ್ಟೆ ಅಲ್ಲದೆ ಹರಿಹರ ಶಾಸಕರಿಗೆ “ಬೂಟಿನಿಂದ ಹೊಡೆಯುವುದಾಗಿ ಹಾಗೂ ಕೆಟ್ಟ ಅವಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಬಿಜೆಪಿ ಈ ಮಾತುಗಳ ವಿರುದ್ಧ ಕೆರಳಿ ಕೆಂಡವಾಗಿತ್ತು.





Leave a comment